ವರದಿ : ಈಶ್ವರ ಎಂ. ಐಲ್ / ಚಿತ್ರ : ದಿನೇಶ್ ಕುಲಾಲ್
ಮುಂಬಯಿ ; ನಗರದ ಸಮಾಜಿಕ ಪೌರಾಣಿಕ ನಾಟಕ ಸಂಸ್ಥೆ ಅಭಿನಯ ಮಂಟಪದ ಈ ವರ್ಷ ಪ್ರದರ್ಶನಗೊಳ್ಳಲಿರುವ ಎರಡು ನಾಟಕಗಳಾದ ’ದೇವಪೂಂಜ’ ಮತ್ತು ’ಏರ್ ಏಡ್ಡೆಂತಿನಕ್ಲು’ ಇದರ ಮುಹೂರ್ತ ಸಮಾರಂಭವು ಜುಲೈ 1 ರಂದು ಮಾಟುಂಗಾ ಕರ್ನಾಟಕ ಸಂಘದ ಸಮರಸ ಭವನದಲ್ಲಿ ಅಭಿನಯ ಮಂಟಪದ ಅಧ್ಯಕ್ಷ, ಎಚ್.ಡಿ.ಎಫ಼್.ಸಿ. ಬ್ಯಾಂಕಿನ ಉನ್ನತ ಅಧಿಕಾರಿ ರಾಜ್ ಕುಮಾರ್ ಕಾರ್ನಾಡ್ ಅವರ ಅಧ್ಯಕ್ಷತೆಯಲ್ಲಿ ಜರಗಿತು.
ಮುಹೂರ್ತವನ್ನು ದೀಪ ಬೆಳಗಿಸಿ ಉಧ್ಘಾಟಿಸಿದ ಚಾರ್ಕೋಪ್ ನ ಜನಪ್ರಿಯ ವೈದ್ಯ ಡಾ. ಜಿ. ಎನ್. ಭಟ್ ಅವರು ಮಾತನಾಡುತ್ತಾ ಅಭಿನಯ ಮಂಟಪದ ನಂಟು ನನ್ನ ಕುಟುಂಬಕ್ಕಿದೆ. ನನ್ನ ಸುಪುತ್ರಿ ಇಂದು ಶ್ರೇಷ್ಠ ಕಲಾವಿದೆಯಾಗಿ ಗುರುತಿಸುವಂತಾಗಲು ಈ ಸಂಸ್ಥೆಯ ನಿರ್ದೇಶನ ನಟನಾ ಕೌಶಲ್ಯವೇ ಕಾರಣವಾಗಿದೆ. ಎರಡು ನಾಟಕಗಳು ಯಶಸ್ವಿಯಾಗಿ ಪ್ರದರ್ಶನಗೊಳ್ಳಲಿ.
ವಿಶೇಷ ಅತಿಥಿಯಾಗಿ ಪಾಲ್ಗೊಂಡಿದ್ದ ರಂಗ ತರಂಗ ಕಾಪು ನಾಟಕ ತಂಡದ ರೂವಾರಿ ಲೀಲಾಧರ ಶೆಟ್ಟಿ ಕಾಪು ಮಾತನಾಡುತ್ತಾ ಪ್ರೇಕ್ಷನಾಗಿ ಈ ಮುಹೂರ್ತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೆ. ಆದರೆ ಅಭಿನಯ ಮಂಟಪದ ಕಲಾವಿದರ ಒತ್ತಾಯಕ್ಕೆ ವೇದಿಕೆಯನ್ನೇರಿದೆ. ಕರ್ಮಭೂಮಿಯಲ್ಲಿ ಸಾಮಾಜಿಕ ಚಟುವಟಿಕೆಗಳೊಂದಿಗೆ ಕಲಾರಾಧನೆಯ ಸೇವೆ ಮಾಡುತ್ತಿರುವ ಮುಂಬಯಿಯ ಕಲಾವಿದರ ಸೇವೆ ಅಭಿನಂದನೀಯ. ಈ ಎರಡೂ ನಾಟಕಗಳು ಅತ್ಯಂತ ಯಶಸ್ವಿಯಾಗಿ ಪ್ರೇಕ್ಷಕರು ಮೆಚ್ಚುವಂತಾಗಲಿ. ತವರೂರಲ್ಲಿ ಅಭಿನಯ ಮಂಟಪದ ನಾಟಕ ಪ್ರದರ್ಶನಕ್ಕೆ ನಮ್ಮ ಸಂಪೂರ್ಣ ಸಹಕಾರವಿದೆ ಎಂದರು.
ಚಲನಚಿತ್ರ ನಟ, ರಂಗ ಭೂಮಿಯ ನಿರ್ದೇಶಕ ಮನೋಹರ ಶೆಟ್ಟಿ ನಂದಳಿಕೆ ಮಾತನಾಡುತ್ತಾ ಪೌರಾಣಿಕ ನಾಟಕಗಳನ್ನು ಮುಂಬಯಿ ಜನತೆಗೆ ನೀಡಿದ ಏಕೈಕ ನಾಟಕ ಸಂಸ್ಥೆ ಅಭಿನಯ ಮಂಟಪ. ನಾಟಕದ ಸೀಡಿಯನ್ನು ಕೂಡ ಹೊರತಂದಿದೆ. ಈ ತಂಡದ ಪೌರಾಣಿಕ ನಾಟಕದಲ್ಲಿ ಅಭಿನಯಿದ್ದೇನೆ. ಅದು ನನ್ನ ಬದುಕಿನ ಪ್ರಥಮ ಪೌರಾಣಿಕ ನಾಟಕವಾಗಿತ್ತು. ಉತ್ತಮ ನಿರ್ದೇಶಕರು ತಂಡದಲ್ಲಿದ್ದಾರೆ. ಎರಡು ನಾಟಕಗಳು ಯಶಸ್ವಿಯಾಗಿ ಪ್ರದರ್ಶನಗೊಳ್ಳಲಿ ಎಂದು ಅಭಿನಂದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ರಾಜ್ ಕುಮಾರ್ ಕಾರ್ನಾಡ್ ಮಾತನಾಡುತ್ತಾ ಸೆ. ೧೨ರಂದು ಮಾಟುಂಗಾದ ಸಭಾ ಭವನದಲ್ಲಿ ಅಭಿನಯ ಮಂಟಪದ ವಾರ್ಷಿಕೋತ್ಸವದಂದು ’ದೇವಪೂಂಜ’ ನಾಟಕ ಪ್ರದರ್ಶನಗೊಳ್ಳಲಿದೆ. ಇದು ಕಲಾವಿಧರ ಆರೋಗ್ಯನಿಧಿಗಾಗಿ ಹಮ್ಮಿಕೊಂಡ ಕಾರ್ಯಕ್ರಮ. ನಮ್ಮ ತಂಡ ಪ್ರಾರಂಭದಿಂದಲೂ ಪೌರಾಣಿಕ ನಾಟಕಗಳನ್ನೇ ಸಮಾಜಕ್ಕೆ ನೀಡಿದೆ. ಇಂದಿನ ಯುವ ಪೀಳಿಗೆ ನಮ್ಮ ಇತಿಹಾಸವನ್ನು ಈ ಮೂಲಕ ತಿಳಿಯುವಂತಾಗಲು ಪ್ರಯತ್ನಿಸುತ್ತಿದ್ದೇವೆ. ಇಂದಿನ ಈ ಮುಹೂರ್ತದ ಸಂದರ್ಭದಲ್ಲಿ ಪಾಲ್ಗೊಂಡ ಕಲಾವಿದರನ್ನು ಕಂಡಾಗ ಅತೀ ಸಂತೋಷವಾಗುತ್ತಿದೆ. ತಮ್ಮೆಲ್ಲರ ಸಹಕಾರ ನಿರಂತರವಾಗಿರಲಿ ಎಂದರು.
ನಾಟಕದ ಎರಡು ಕೃತಿಗಳನ್ನು ಡಾ. ಎನ್. ಜಿ. ಭಟ್ ಮತ್ತು ಲೀಲಾಧರ ಶೆಟ್ಟಿ ಕಾಪು ಅವರು ತಂಡದ ನಿರ್ದೇಶಕ ಕರುಣಾಕರ ಕಾಪು ಅವರಿಗೆ ಹಸ್ತಾಂತರಿಸಿದರು. ಕಾರ್ಯಕ್ರಮವನ್ನು ತಂಡದ ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ್ಯ ಅನಿಲ್ ಸಾಲ್ಯಾನ್ ಸಸಿಹಿತ್ಲು ನಿರ್ವಹಿಸಿ ವಂದಿಸಿದರು.