ಮುಂಬಯಿ : ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕರ್ನಾಟಕ ಸಂಘ ಮುಂಬಯಿ ಇದರ ಎಂಭತ್ತೊಂದನೇ (81) ವಾರ್ಷಿಕ ಮಹಾಸಭೆಯು ಇಂದು ಸಂಜೆ ಸಂಘದ ಸಮರಸ ಭವನದಲ್ಲಿ ಉಪಾಧ್ಯಕ್ಷ ಶ್ರೀನಿವಾಸ ಜೋಕಟ್ಟೆ ಅವರ ಅಧ್ಯಕ್ಷತೆಯಲ್ಲಿ ಜರಗಿತು.
ಕರ್ನಾಟಕ ಸಂಘವು ಮುಂಬಯಿ ಮಹಾರಾಷ್ಟ್ರ ರಾಜ್ಯಗಳ ನಡುವೆ ರಾಯಭಾರಿಯಾಗಿ ಕೆಲಸ ಮಾಡುತ್ತಾ ಬರುತ್ತಿದ್ದು ಕರ್ನಾಟಕದ ಜನರ ಗಮನ ಸೆಳೆ ಯುವಂತಹ ಅನೇಕ ಗಮನಾರ್ಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಮುಂಬಯಿಯಲ್ಲಿ ಕನ್ನಡವನ್ನು ಜೀವಂತವಾಗಿರಿಸುವಲ್ಲಿ, ಕನ್ನಡದ ಜಾಗೃತಿ ಮೂಡಿಸುವಲ್ಲಿ ಸದಾಕ್ರಿಯಾಶೀಲವಾಗಿರುವ ಕರ್ನಾಟಕ ಸಂಘದ ಚಟುವಟಿಕೆಗಳಿಗೆ ಸದಸ್ಯರ ಸಹಕಾರ ನಿರಂತರ ಸಿಗುತ್ತಿರಲಿ. ಸಾಹಿತ್ಯ ಸಂಸ್ಕೃತಿ – ಸಮಾವೇಶ, ಕಲಾಭಾರತಿ, ಸಾಹಿತ್ಯ ಭಾರತಿ, ಮಕ್ಕಳ ಮೇಳ … ಇತ್ಯಾದಿ ಪ್ರಮುಖ ಕಾರ್ಯಕ್ರಮಗಳ ಜೊತೆ, ವರದರಾಜ ಆದ್ಯ ಪ್ರಶಸ್ತಿ, ಸಾಧನಾ ಶಿಖರ ಪ್ರಶಸ್ತಿ, ಡಾ. ಸುನೀತಾ ಶೆಟ್ಟಿ ಸಾಹಿತ್ಯ ಪ್ರಶಸ್ತಿ… ಇಂತಹ ಪ್ರಶಸ್ತಿಗಳನ್ನೂ ನೀಡುತ್ತಿರುವ ಕರ್ನಾಟಕ ಸಂಘದ ವಿಶ್ವೇಶ್ವರಯ್ಯ ಸಭಾಗೃಹದ ಮೂಲಕ ನೂರಾರು ಪ್ರತಿಭೆಗಳು ಬೆಳಕಿಗೆ ಬಂದಿವೆ ಎಂದು ಶ್ರೀನಿವಾಸ ಜೋಕಟ್ಟೆ ಹೇಳಿದರು.
ಗತವರ್ಷದ ವಾರ್ಷಿಕ ಮಹಾಸಭೆಯ ವರದಿಯನ್ನು ಗೌ. ಜತೆಕಾರ್ಯದರ್ಶಿ ಜಿ. ಪಿ. ಕುಸುಮಾ ಮಂಡಿಸಿದರು. ಅದೇ ರೀತಿ ಆಗಸ್ಟ್ 24, 2015 ರಂದು ಜರಗಿದ ವಿಶೇಷ ಮಹಾಸಭೆಯ ವರದಿಯನ್ನೂ ಅವರೇ ಮಂಡಿಸಿದರು. ಸಭೆ ಎರಡನ್ನೂ ಮಂಜೂರು ಮಾಡಿತು.2014 -2015 ರ ಲೆಕ್ಕ ಪರಿಶೋಧಕರಿಂದ ಪರಿಶೀಲಿಸಲ್ಪಟ್ಟ ವಾರ್ಷಿಕ ಲೆಕ್ಕ ಪತ್ರಗಳ ವರದಿ ಮಂಡನೆಯನ್ನು ಗೌ. ಕೋಶಾಧಿಕಾರಿ ಎನ್. ಎಂ. ಗುಡಿ ಮಂಡಿಸಿದರು. ಸಭೆ ಅದನ್ನು ಮಂಜೂರು ಮಾಡಿತು.
ಇದೇ ಸಮಯ ಆಡಳಿತ ಸಮಿತಿಗೆ 2015-2018 ರ ಅವಧಿಗೆ ಜರಗಿದ ಚುನಾವಣಾ ಫಲಿತಾಂಶವನ್ನು ಚುನಾವಣಾ ಅಧಿಕಾರಿ ನಾರಾಯಣ ಜಿ. ಮೆಂಡನ್ ಘೋಷಿಸಿದರು. ಡಾ. ಭರತ್ ಕುಮಾರ್ ಪೊಲಿಪು, ದುರ್ಗಪ್ಪ ಯ. ಕೊಟಿಯವರ, ಶ್ರೀನಿವಾಸ ಜೋಕಟ್ಟೆ, ಬಿ. ಜಿ. ನಾಯಕ್ ಹಾಗೂ ಜಿ. ಪಿ. ಕುಸುಮ ಅವರು ಅವಿರೋಧವಾಗಿ ಆಯ್ಕೆ ಗೊಂಡರು.
2015-2016 ರ ಅವಧಿಗೆ ವಾರ್ಷಿಕ ಲೆಕ್ಕ ಪರಿಶೋಧಕರಾಗಿ ಅಶ್ವಜಿತ್ ಎಸೋಸಿಯೇಟ್ ಅವರನ್ನು ನೇಮಕ ಮಾಡಲಾಯಿತು. ಹಾಗೂ ಇದೇ ಅವಧಿಗೆ ವಾರ್ಷಿಕ ಮತ್ತು ಆಂತರಿಕ ಲೆಕ್ಕ ಪರಿಶೋಧಕರಾಗಿ ರಾಜೇಶ್ ಶೇಟ್ ಆಂಡ್ ಕಂಪನಿ ಇವರನ್ನು ನೇಮಕ ಮಾಡಲಾಯಿತು.
2015-2016 ರ ಅವಧಿಗೆ ಚುನಾವಣಾ ಅಧಿಕಾರಿಗಳಾಗಿ ನಾರಾಯಣ ಜಿ. ಮೆಂಡನ್, ಹರೀಶ್ ಹೆಜ್ಮಾಡಿ ಮತ್ತು ಮಹೇಶ್ ಕಾರ್ಕಳ್ ಅವರನ್ನು ನೇಮಿಸಲಾಯಿತು. 2015-2016 ರ ಅವಧಿಗೆ ಗೌರವ ಕಾನೂನು ಸಲಹೆಗಾರರಾಗಿ ಅಡ್ವಕೇಟ್ ಅಮಿತಾ ಭಾಗ್ವತ್ ಅವರನ್ನು ನೇಮಕ ಮಾಡಲಾಯಿತು.
ಗೌರವ ಕಾರ್ಯದರ್ಶಿ ಓಂದಾಸ್ ಕಣ್ಣಂಗಾರ್ ಸ್ವಾಗತಿಸಿ, ವಾರ್ಷಿಕ ಮಹಾಸಭೆಯನ್ನು ನಿರೂಪಿಸಿ ವಂದಿಸಿದರು. ಆರಂಭದಲ್ಲಿ ಅಗಲಿದ ಸಂಘದ ಸದಸ್ಯರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಸದಸ್ಯರ ಪರವಾಗಿ ಅಶೋಕ್ ಸುವರ್ಣ, ಸುರೇಂದ್ರ ಮಾರ್ನಾಡ್, ಮನೋಹರ ತೋನ್ಸೆ, ಅವಿನಾಶ್ ಕಾಮತ್, ಬಿ.ಜಿ. ನಾಯಕ್, ಎನ್. ಅರ್. ರಾವ್, ಡಿ. ಅರ್. ಸಾಲಿಯಾನ್, ಡಾ. ಭರತ್ಕುಮಾರ್ ಪೊಲಿಪುಮಲ್ಲಿಕಾರ್ಜುನ ಬಡಿಗೇರ ಮೊದಲಾದವರು ಪ್ರತಿಕ್ರಿಯೆ ವ್ಯಕ್ತ ಪಡಿಸಿದರು.
ವೇದಿಕೆಯಲ್ಲಿ ಆಡಳಿತ ಸಮಿತಿಯ ಗೌ. ಜತೆ ಕೋಶಾಧಿಕಾರಿ ಡಾ. ಈಶ್ವರ ಅಲೆವೂರು, ಮನೋಹರ ಎಂ. ಕೋರಿ, ಶೇಷಗಿರಿ ಟಿ., ಎಂ. ಡಿ. ರಾವ್, ಡಾ. ಎಸ್. ಕೆ. ಭವಾನಿ, ಕುಸುಮಾ ಸಿ. ಅಮೀನ್ ಉಪಸ್ಥಿತರಿದ್ದರು.