ಕುಂದಾಪುರ: ಮರವಂತೆಯಲ್ಲಿ ಮೀನುಗಾರಿಕಾ ತೆರೆದ ಬಂದರು ನಿರ್ಮಾಣ ಕಾಮಗಾರಿಯ ದಕ್ಷಿಣದ ತಡೆಗೋಡೆಯ ಸಮೀಪ ಬುಧವಾರ ಸಂಜೆಯ ವೇಳೆ ಕಡಲ್ಕೊರೆತ ತೀವ್ರ ಸ್ವರೂಪ ತಾಳಿದೆ. ಕೆ. ಎಂ. ಕೃಷ್ಣ ಖಾರ್ವಿ ಎಂಬವರ ತೆಂಗಿನ ತೋಟಕ್ಕೆ ಲಗ್ಗೆ ಹಾಕುತ್ತಿರುವ ಅಬ್ಬರದ ತೆರೆಗಳು ೨೦ ಫಲಭರಿತ ಮರಗಳನ್ನು ಸಮುದ್ರದ ಒಡಲಿಗೆ ಸೇರಿಸುವ ಅಪಾಯವಿದೆ.
ಬಂದರು ಕಾಮಗಾರಿಯ ಗುತ್ತಿಗೆದಾರರು ತಮ್ಮ ಸಂಗ್ರಹದಲ್ಲಿರುವ ಕಲ್ಲು ಹಾಗೂ ತಡೆಗೋಡೆ ನಿರ್ಮಾಣಕ್ಕೆ ಸಿದ್ಧಪಡಿಸಿರುವ ಟೆಟ್ರಾಪಾಡ್ಗಳನ್ನು ಈ ತೋಟದ ಅಂಚಿಗೆ ಪೇರಿಸುವ ಕೆಲಸ ಮಾಡಿದೆ, ಆದರೆ ತೆರೆಗಳು ಅದನ್ನೂ ಮೀರಿ ಮುನ್ನುಗ್ಗುತ್ತಿವೆ. ಗಾಳಿ ಮತ್ತು ತೆರೆಗಳ ಅಬ್ಬರ ಕಡಿಮೆಯಾಗದಿದ್ದರೆ ಎಲ್ಲ ಮರಗಳು ಬುಡಸಹಿತ ಉರುಳಲಿವೆ.
ಕೃಷ್ಣ ಖಾರ್ವಿ ತೋಟದ ರಕ್ಷಣೆಗೆ ಮೊರೆಯಿಡುತ್ತಿದ್ದು, ಜನಪ್ರತಿನಿಧಿಗಳಿಂದಾಗಲೀ ಅಧಿಕಾರಿಗಳಿಂದಾಗಲೀ ಸೂಕ್ತ ಸ್ಪಂದನ ದೊರಕಿಲ್ಲ ಎಂದಿದ್ದಾರೆ.

