ಮಂಗಳೂರು, ಜೂ.25: ಕುದುರೆಮುಖದಿಂದ ಮಂಗಳೂರಿಗೆ ಆಗಮಿಸುವ ಕೆಐಒಸಿಎಲ್ ಪೈಪ್ಲೈನ್ ಹಾದಿಯಲ್ಲಿ ಕಟ್ಟಡ ನಿರ್ಮಾಣ ಪರವಾನಿಗೆ ನೀಡುವಾಗ ಎಲ್ಲ ಗ್ರಾಪಂಗಳು ಸೂಕ್ತ ಪರಿಶೀಲನೆ ನಡೆಸಬೇಕು ಎಂದು ದ.ಕ. ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಸೂಚಿಸಿದ್ದಾರೆ.ಪೈಪ್ಲೈನ್ ಕುರಿತು ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪೈಪ್ಲೈನ್ನ ಎರಡೂ ಬದಿಯಲ್ಲಿ ಕಟ್ಟಡಗಳನ್ನು ನಿರ್ಮಿಸುವಾಗ ನಿಗದಿತ 15 ಮೀ. ಅಂತರವನ್ನು ಕಾಯ್ದುಕೊಳ್ಳಬೇಕು ಎಂದರು. ತೆಂಕ ಮಿಜಾರು ಗ್ರಾಪಂ ವ್ಯಾಪ್ತಿಯಲ್ಲಿ ಮನೆ ನಿರ್ಮಾಣ ಸಂದರ್ಭ ಸಮಸ್ಯೆ ತಲೆದೋರಿದ್ದು, ಸಂತ್ರಸ್ತ ಮನೆಯವರು ಜಿಲ್ಲಾಧಿಕಾರಿಗೆ ಈ ಸಂದರ್ಭ ಮನವಿ ಮಾಡಿದರು.
ಪೈಪ್ಲೈನ್ಗಿಂತ ಸುಮಾರು 7 ಮೀ. ದೂರದಲ್ಲಿ ಮನೆ ನಿರ್ಮಿಸಲಾಗುತ್ತಿದ್ದರೂ, ಕುದುರೆಮುಖ ಸಂಸ್ಥೆಯವರು ಆಕ್ಷೇಪ ಸಲ್ಲಿಸಿದ್ದಾರೆ. ಆದರೆ ಮನೆ ನಿರ್ಮಾಣಕ್ಕೆ ಗ್ರಾಪಂನಿಂದ ಪರವಾನಿಗೆ ನೀಡಲಾ ಗಿದೆ ಎಂದು ಸಂತ್ರಸ್ತ ಮನೆಯವರು ದೂರಿದರು. ಕುದುರೆಮುಖ ಸಂಸ್ಥೆಯ ಅಧಿಕಾರಿ ಕೆ. ವಾದಿರಾಜ ರಾವ್ ಮಾತನಾಡಿ, ಸಂಸ್ಥೆ ಆರಂಭ ಸಂದರ್ಭ ಎಲ್ಲ ಆರ್ಟಿಸಿಯಲ್ಲಿ ಪೈಪ್ಲೈನ್ ಬಗ್ಗೆ ನಮೂದಿಸಲಾಗಿತ್ತು. ಆದರೆ ಬಳಿಕ ಕಟುಂಬದವರ ನಡುವೆ ಪಾಲಾದಾಗ ಯಾರ ಪಾಲಿನ ಜಾಗದಲ್ಲಿ ಪೈಪ್ಲೈನ್ ಹಾದು ಹೋಗುತ್ತಿದೆ ಎಂಬುದು ತಿಳಿಯದೆ ಸಮಸ್ಯೆಯಾಗುತ್ತಿದೆ. ಕಟ್ಟಡ ನಿರ್ಮಾಣ ಸಂದರ್ಭ ಸಂಬಂಧಿತರು ಕಂಪೆನಿ ಯನ್ನು ಸಂಪರ್ಕಿಸಿದರೆ ನಿರಾಕ್ಷೇಪಣ ಪತ್ರ ನೀಡಲಾಗು ವುದು ಎಂದರು.
ಲಕ್ಯಾದಿಂದ ನೀರು:
ಕುದುರೆಮುಖದಲ್ಲಿ ಕೆಐಒಸಿಎಲ್ ಸಂಸ್ಥೆ ಪ್ರಸ್ತುತ ಸ್ಥಗಿತಗೊಂಡಿದ್ದು, ಪಣಂಬೂರಿನಲ್ಲಿರುವ ಕಂಪೆನಿಗೆ ನೀರು ಸರಬರಾಜಿಗಾಗಿ ಸುಪ್ರೀಂ ಕೋರ್ಟ್ನಲ್ಲಿ ಅನುಮತಿ ಪಡೆದು ಲಕ್ಯಾ ಅಣೆಕಟ್ಟಿನಿಂದ ನೀರು ಪಡೆಯಲಾಗುತ್ತಿದೆ. ಕುದುರೆಮುಖ ಕಬ್ಬಿಣದ ಅದಿರು ಸಂಸ್ಥೆ ಕುದುರೆಮುಖದಿಂದ ಮಂಗಳೂರುವರೆಗೆ ಅದಿರು ಸಾಗಾಟಕ್ಕೆ ಹಾಕಿದ ಪೈಪ್ಲೈನ್ ಮೂಲಕ ಮಂಗಳೂರು ಮಹಾನಗರ ಪಾಲಿಕೆಗೆ ಲಕ್ಯಾ ಅಣೆಕಟ್ಟಿನಿಂದ ನೀರು ಪೂರೈಕೆಗೆ ಕೋರಿ ಕಂಪೆನಿಗೆ ಪಾಲಿಕೆ ಪತ್ರ ಬರೆದಿತ್ತು. ಮನಪಾ ಕೂಡಾ ಸುಪ್ರೀಂ ಕೋರ್ಟ್ನಲ್ಲಿ ಈ ಬಗ್ಗೆ ಅನುಮತಿಗಾಗಿ ಬರೆಯಬೇಕಾಗಿದೆ ಎಂದು ಕೆಐಒಸಿಎಲ್ ಅಧಿಕಾರಿಗಳು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಮೂಡುಬಿದಿರೆ ತಹಶೀಲ್ದಾರ್ ಮುಹಮ್ಮದ್ ಇಸ್ಹಾಕ್, ನೀರು ಸರಬರಾಜು ಮಂಡಳಿಯ ಎಕ್ಸಿಕ್ಯೂಟಿವ್ ಎಂಜಿನಿಯರ್ ನಟರಾಜ್, ಮಂಗಳೂರು ಮನಪಾ ಎಕ್ಸಿಕ್ಯೂಟಿವ್ ಎಂಜಿನಿ ಯರ್ ರಾಜಶೇಖರ್ ಉಪಸ್ಥಿತರಿದ್ದರು.