ಬೆಳ್ತಂಗಡಿ,ಜೂನ್. 24: ಮಂಗಳೂರಿನಿಂದ ಬೆಂಗಳೂರಿಗೆ ಡಿಸೇಲ್ ಹೊತ್ತುಕೊಂಡು ಹೋಗುತ್ತಿದ್ದ ಟ್ಯಾಂಕರ್ ನ ಟಯರ್ ಸ್ಫೋಟಗೊಂಡು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಟ್ಯಾಂಕರ್ ಗೆ ಬೆಂಕಿ ಹತ್ತಿಕೊಂಡ ಘಟನೆ ಬೆಳ್ತಂಗಡಿ ಸಮೀಪದ ಲಾಯಿಲಾದಲ್ಲಿ ಬುಧವಾರ ಸಂಜೆ ನಡೆಯಿತು.
ಘಟನೆಯಲ್ಲಿ ಚಾಲಕ ಮತ್ತು ಲಾರಿ ನಿರ್ವಾಹಕ ಅಪಾಯದಿಂದ ಪಾರಾಗಿದ್ದು. ಲಾರಿಯನ್ನು ಹಿಂದಕ್ಕೆ ತೀರುಗಿಸುವ ಬರದಲ್ಲಿ ಲಾರಿ ತನ್ನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯಲ್ಲಿದ್ದ ಬೈಕ್ ಹಾಗೂ ವಿಧ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಟ್ಯಾಂಕರಿಗೆ ಬೆಂಕಿ ಹಚ್ಚಿಕೊಂಡಿತ್ತು.
ಇಂಧನವನ್ನು ಚೆಲ್ಲಿ ಟ್ಯಾಂಕರ್ ರಕ್ಷಣೆ:
ಸುಮಾರು ಮೂರು ಗಂಟೆಗಳ ಕಾಲ ವಾಹನಕ್ಕೆ ನಿರಂತರ ನೀರು ಸುರಿಸಿ ಅದರಲ್ಲಿದ್ದ ಇಂಧನಕ್ಕೆ ಬೆಂಕಿ ತಗುಲದಂತೆ ಮುಂಜಾಗ್ರತೆ ವಹಿಸಲಾಯಿತು. ಅಪಘಾತಕ್ಕೊಳಗಾದ ಟ್ಯಾಂಕರ್ ಮಂಗಳೂರಿನಿಂದ ಉಜಿರೆಯ ಪೆಟ್ರೋಲ್ ಬಂಕ್ಗೆ ಇಂಧನವನ್ನು ಹೊತ್ತು ತರುತ್ತಿತ್ತು. ಅದರ 2 ಬ್ಯಾರಲ್ಗಳಲ್ಲಿ 8 ಸಾವಿರ ಲೀ. ಡೀಸೆಲ್ ಮತ್ತು 4 ಸಾವಿರ ಲೀ. ಪೆಟ್ರೋಲ್ ಇತ್ತು. ಈ ಇಂಧನವನ್ನು ಟ್ಯಾಂಕರ್ನಿಂದ ಹೊರತೆಗೆಯುವ ಪ್ರಯತ್ನ ಕೈಗೂಡದ ಕಾರಣ ರಾತ್ರಿಯ ವೇಳೆ ಅದನ್ನು ಹೊರಚೆಲ್ಲಿ ಟ್ಯಾಂಕರ್ನ್ನು ಮಾತ್ರ ಮೇಲೆತ್ತಲಾಯಿತು.
ತಾಸುಗಟ್ಟಲೆ ಹೆದ್ದಾರಿ ಬ್ಲಾಕ್:
ಈ ಅವಘಡದ ಹಿನ್ನೆಲೆಯಲ್ಲಿ ಒಂದೂವೆರೆ ತಾಸು ಗುರುವಾಯನಕೆರೆ -ಬೆಳ್ತಂಗಡಿ-ಉಜಿರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತು. ಬೆಂಕಿಯನ್ನು ಸಂಪೂರ್ಣ ನಂದಿಸಿದ ಬಳಿಕ ಮತ್ತು ವಿದ್ಯುತ್ ತಂತಿಗಳನ್ನು ರಸ್ತೆಯಿಂದ ತೆರವುಗೊಳಿಸಿದ ಬಳಿಕವಷ್ಟೇ ವಾಹನ ಸಂಚಾರಕ್ಕೆ ಬೆಳ್ತಂಗಡಿ ಪೊಲೀಸರು ಅನುವು ಮಾಡಿಕೊಟ್ಟರು. ಆದರೆ ಅಷ್ಟರಲ್ಲೇ ಹೆದ್ದಾರಿಯುದ್ದಕ್ಕೂ ವಾಹನಗಳ ಸಾಲು ಕಿಲೋಮೀಟರ್ ದೂರದವರೆಗೆ ಜಮಾಯಿಸಿದ್ದವು. ಸಂಚಾರ ಪುನರಾರಂಭಗೊಳ್ಳುತ್ತಿದ್ದಂತೆ ವಾಹನಗಳು ಅಡ್ಡಾದಿಡ್ಡಿ ಚಲಾಯಿಸಿದ ಪರಿಣಾಮ ಮತ್ತೆ ಟ್ರಾಫಿಕ್ ಜಾಮ್ ಆಗಿತ್ತು. ಇದು ರಾತ್ರಿ 10 ಗಂಟೆಯ ಬಳಿಕವೂ ಮುಂದುವರಿದಿತ್ತು.
ಇಂಧನಕ್ಕಾಗಿ ಮುಗಿಬಿದ್ದರು:
ಈ ಅವಘಡ ಘಟಿಸಿದ ಸುತ್ತಮುತ್ತ 5-6 ಮನೆಗಳಿದ್ದು, ಅವುಗಳಲ್ಲಿನ ನಿವಾಸಿಗಳು ಭಯಭೀತರಾಗಿಹೊರಗೋಡಿದ್ದರು. ಘಟನಾ ಸ್ಥಳದಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಮಂದಿ ಸೇರಿದ್ದು, ಮೊಬೈಲ್ ಫೋನ್ಗಳ ಮೂಲಕ ಚಿತ್ರೀಕರಣದಲ್ಲಿ ನಿರತರಾಗಿದ್ದ ದೃಶ್ಯ ಸಾಮಾನ್ಯವಾಗಿತ್ತು. ಇನ್ನೇನೂ ಬೆಂಕಿ ತಹಬದಿಗೆ ಬಂದ ತಕ್ಷಣವೇ ಡೀಸೆಲ್ ತುಂಬಿಸಿಕೊಳ್ಳಲು ಕೆಲವರು ಬ್ಯಾರೆಲ್ಗಳು ಹಿಡಿದುಕೊಂಡು ಬಂದು ದುರಂತದ ಲಾಭ ಪಡೆಯಲು ಯತ್ನಿಸುತ್ತಿರುವುದು ಕಂಡುಬಂತು.
ಇದರಿಂದ ಕೆಲ ಕಾಲ ಬೆಳ್ತಂಗಡಿ-ಧರ್ಮಸ್ಥಳ ರಸ್ತೆ ಸಂಚಾರ ಸ್ಥಗಿತಗೊಂಡಿದ್ದು. ಬೆಳ್ತಂಗಡಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.