ಮಂಗಳೂರು : ರಾಜ್ಯದಲ್ಲಿ 2-3 ಜಿಲ್ಲೆ ಹೊರತು ಪಡಿಸಿ ದಕ್ಷಿಣ ಕನ್ನಡ ಸೇರಿದಂತೆ ಉಳಿದ ಎಲ್ಲ ಜಿಲ್ಲೆಗಳಲ್ಲಿ ಡೀಮ್ಡ್ ಫಾರೆಸ್ಟ್ ಸಂಬಂಧಿಸಿ ಜಂಟಿ ಸರ್ವೆ ಸಂಪೂರ್ಣಗೊಂಡಿದೆ. ಈ ಸರ್ವೆಯಲ್ಲಿ ಅರಣ್ಯ ಭಾಗ ಎಂದು ಗುರುತಿಸಿದ ಜಾಗವನ್ನು ಉಳಿಸಿಕೊಂಡು, ಇತರ ಜಾಗವನ್ನು ಕಂದಾಯ ಇಲಾಖೆಗೆ ಬಿಡಲಾಗುತ್ತಿದೆ. ಈಗಾಗಲೇ ಮರಗಳು ಇಲ್ಲದ ಸುಮಾರು 1 .40 ಲಕ್ಷ ಎಕ್ರೆ ಜಾಗವನ್ನು ಕೈ ಬಿಡಲಾಗಿದೆ. 78 ಸಾವಿರ ಎಕರೆ ಜಾಗ ಉಳಿಸಿಕೊಳ್ಳಲಾಗಿದೆ ಎಂದು ಅರಣ್ಯ ಸಚಿವ ರಮಾನಾಥ ರೈ ತಿಳಿಸಿದರು.
ಮೂರು ಎಕರೆ ಹಾಗೂ ಅದಕ್ಕಿಂತ ಕಡಿಮೆ ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡವರನ್ನು ಒಕ್ಕಲೆಬ್ಬಿಸದಂತೆ ರಾಜ್ಯ ಸಚಿವ ಸಂಪುಟ ನಿರ್ಣಯ ಕೈಗೊಂಡಿದೆ. 1978ರ ಮೊದಲು ಒತ್ತುವರಿ ಮಾಡಿಕೊಂಡವರಿಗೆ ಹಕ್ಕುಪತ್ರ ನೀಡಲು ಯಾವುದೇ ತಕರಾರು ಇಲ್ಲ. 1978ರ ಬಳಿಕ 3 ಎಕರೆಗಿಂತ ಕಡಿಮೆ ಅರಣ್ಯ ಪ್ರದೇಶ ಒತ್ತುವರಿ ಮಾಡಿಕೊಂಡಿದ್ದು , ಸಕ್ರಮಕ್ಕೆ ಅವಕಾಶ ಇಲ್ಲದ ಪ್ರಕರಣಗಳಲ್ಲಿ ಸಂಬಂಧ ಪಟ್ಟ ರೈತರಿಗೆ ಪರ್ಯಾಯವಾಗಿ ಕಂದಾಯ ಜಮೀನು ನೀಡಲಾಗುವುದು ಎಂದು ಅವರು ತಿಳಿಸಿದರು.