ಬೈಂದೂರು: ಅಮಾನುಷವಾಗಿ ಕೊಲೆಗೀಡಾದ ಬೈಂದೂರು ಪದವಿಪೂರ್ವ ಕಾಲೇಜಿನ ದ್ವೀತಿಯ ಪಿಯುಸಿ ವಿದ್ಯಾರ್ಥಿನಿ ಅಕ್ಷತಾ ದೇವಾಡಿಗರ ಹೇನ್ಬೇರ್ ನಿವಾಸಕ್ಕೆ ಮಾಜಿ ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡಿಸ್ ಭೇಟಿ ನೀಡಿ ಕುಟುಂಬಿಕರಿಗೆ ಸಾಂತ್ವನ ಹೇಳಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪ್ರತಿಭಾವಂತ ವಿದ್ಯಾರ್ಥಿನಿಯ ಸಾವು ನೋವು ತಂದಿದೆ, ಸರ್ಕಾರದಿಂದ ಘೋಷಣಿಯಾದ 5 ಲಕ್ಷ ರೂ.ವನ್ನು ಶೀಘ್ರ ಬಿಡುಗಡೆ ಮಾಡುವಂತೆ ಈಗಾಗಲೇ ಸಿಎಂಗೆ ಮನವಿ ಮಾಡಲಾಗಿದೆ, ಶಾಸಕರೊಂದಿಗೆ ಚರ್ಚಿಸಿ ಈ ಭಾಗದಲ್ಲಿ ಮೂಲಸೌಕರ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಶಾಸಕ ಗೋಪಾಲ ಪೂಜಾರಿ ವೈಯಕ್ತಿಕವಾಗಿ 50 ಸಾವಿರವನ್ನು ಅಕ್ಷತಾ ಕುಟುಂಬಕ್ಕೆ ನೆರವು ನೀಡಿದರು. ಬಳಿಕ ಪ್ರತಿಕ್ರಿಯಿಸಿದ ಅವರು ಇಂದಿನಿಂದಲೇ ಈ ಭಾಗದ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ, ಇಲ್ಲಿನ ರಸ್ತೆ ಡಾಂಬರೀಕರಣಗೊಳಿಸಲು ಈಗಾಗಲೇ ಲೋಕೋಪಯೋಗಿ ಇಲಾಖೆಯ ಇಂಜಿನಿಯರಿಂದ ಅಂದಾಜು ಪಟ್ಟಿ ಸಿದ್ದಪಡಿಸಿದ್ದು, ಶೀಘ್ರ ಲೋಕೋಪಯೋಗಿ ಸಚಿವರನ್ನು ಭೇಟಿ ಮಾಡಿ ಅವರಿಗೆ ಸಲ್ಲಿಸಲಾಗುವುದು, ಇಲ್ಲಿ ಬಸ್ ಸಂಚಾರಕ್ಕೆ ಅನುಕೂಲ ಕಲ್ಪಿಸಲು ತಾತ್ಕಲಿಕವಾಗಿ ಮಣ್ಣಿನ ರಸ್ತೆಯನ್ನು ದುರಸ್ತಿಗೊಳಿಸಲಾಗುವುದು ಎಂದರು.
ತಾ.ಪಂ. ಸದಸ್ಯ ರಾಜು ಪೂಜಾರಿ, ಕಾಂಗ್ರೆಸ್ ಮುಖಂಡರಾದ ಎಂ.ಎಂ. ಗಫೂರ್, ರಿಯಾಜ್ ಅಹಮದ್, ಮಂಜುನಾಥ ಬಿಲ್ಲವ, ನೂರ್ ಮಹಮದ್ ಮೊದಲಾದವರು ಉಪಸ್ಥಿತರಿದ್ದರು.