ಮಂಗಳೂರು,ಜೂನ್.22: ಶ್ರೀ ಕ್ಷೇತ್ರ ಕದ್ರಿಯ ಮಂಜುನಾಥ ದೇವಳದಲ್ಲಿ ಲೋಕಕಲ್ಯಾಣಾರ್ಥವಾಗಿ ಸಾಮೂಹಿಕ ಸೀಯಾಳಾಭಿಷೇಕವು ಎ.ಜೆ. ಶೆಟ್ಟಿ ನೇತೃತ್ವದಲ್ಲಿ ಹಾಗೂ ಎಸ್. ಪ್ರದೀಪ ಕುಮಾರ ಕಲ್ಕೂರ ಮಾರ್ಗದರ್ಶನದಲ್ಲಿ ಭಕ್ತಾದಿಗಳು ಸಮರ್ಪಿಸಿದ ಸಾವಿರಾರು ಎಳನೀರುಗಳಿಂದ ಅಭಿಷೇಕ ನಡೆಯಿತು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯಐವನ್ ಡಿ’ಸೋಜಾ, ಕರ್ನಾಟಕ ಮುಜರಾಯಿ ಇಲಾಖೆಯ ರಾಜ್ಯ ಸದಸ್ಯರುಗಳಾದ ಜಗನ್ನಿವಾಸರಾವ್ ಪುತ್ತೂರು ಹಾಗೂ ಪದ್ಮನಾಭ ಕೋಟ್ಯಾನ್ ಅಲ್ಲದೆ ಕಾರ್ಪೊರೇಟರ್ಗಳಾದ ಅಶೋಕ್ ಡಿ.ಕೆ., ಶಶಿಧರ ಹೆಗ್ಡೆ ಮತ್ತು ಉದ್ಯಮಿ ರತ್ನಾಕರ ಜೈನ್, ಸುಂದರ ಶೆಟ್ಟಿ, ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾದ ಮೋಹನ ಕೊಪ್ಪಳ, ದಿನೇಶ್ ದೇವಾಡಿಗ, ದೇವಳದ ಆಡಳಿತಾಧಿಕಾರಿ ನಿಂಗಯ್ಯ, ಸದಸ್ಯರಾದ ಪಿ. ಅನಂತಕೃಷ್ಣ ಭಟ್, ದೇವದಾಸ್, ನಿವೇದಿತಾ ಶೆಟ್ಟಿ ಮೊದಲಾದವರ ಸಹಿತ ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದರು.
ಏಕಾದಶಿ ರುದ್ರಾಭಿಷೇಕದೊಂದಿಗೆ, ಸಾಮೂಹಿಕ ಪ್ರಾರ್ಥನೆ ಹಾಗೂ ಸೀಯಾಳಾಭಿಷೇಕವನ್ನು ದೇವಳದ ಪ್ರಧಾನ ಅರ್ಚಾಕ ರಾಮ ಅಡಿಗರು ನೆರವೇರಿಸಿದರು. ಕಲ್ಕೂರ ಪ್ರತಿಷ್ಠಾನದವತಿಯಿಂದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇದೇ ಸಂದರ್ಭದಲ್ಲಿ ರಾಜ್ಯ ಮುಜರಾಯಿ ಇಲಾಖೆಯ ಸದಸ್ಯರಾಗಿ ನಿಯುಕ್ತಿಗೊಂಡಿರುವ ಜಗನ್ನಿವಾಸರಾವ್ ಹಾಗೂ ಪದ್ಮನಾಭ ಕೋಟ್ಯಾನ್ ಅವರನ್ನು ದೇವಳದ ವತಿಯಿಂದ ಈ ಸಂಧರ್ಭದಲ್ಲಿ ಗೌರವಿಸಲಾಯಿತು.