ಮಂಗಳೂರು: ನಳಿನ್ ಕುಮಾರ್ ಕಟೀಲ್ ಅವರ ಕಠಿಣ ಪರಿಶ್ರಮದ ಈ ಸಾಧನೆ ದೇಶಕ್ಕೆ ಮಾದರಿಯಾಗಿದೆ. ಈ ಮಾದರಿಯಲ್ಲಿ ಅವರು ಮುಂದುವರಿಯಲಿ ಎಂದು ಕೇಂದ್ರ ಸಚಿವ ಅನಂತ ಕುಮಾರ್ ಹೇಳಿದರು.
ನಗರದ ಟಿ.ವಿ. ರಮಣ ಪೈ ಕನ್ವೆನ್ಸನ್ ಸಭಾಂಗಣದಲ್ಲಿ ರಾಜ್ಯದ ನಂ.1 ಸಂಸದರಾಗಿರುವ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಗುರುವಾರ ನಡೆದ ‘ಸಂಸದರಿಗೆ ನಮನ’ ಕಾರ್ಯಕ್ರಮದಲ್ಲಿ ಅಭಿನಂದಿಸಿ ಅವರು ಮಾತನಾಡಿದರು.
ನಳಿನ್ ಕುಮಾರ್ ರಾಜ್ಯದ ನಂ.1 ಸಂಸದ ಎಂಬುವುದನ್ನು ನಿರ್ಧರಿಸಿರುವುದು ಈ ನಾಡಿನ ಜನತೆ . ಬೀದರ್ನಿಂದ ಮೊದಲ್ಗೊಂಡು ತಲಪಾಡಿ, ಸುಳ್ಯದ ವರೆಗಿನ ಜನತೆ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಅಭಿವೃದ್ಧಿ ಕೆಲಸ, ರಾಜ್ಯಕ್ಕೆ ತಂದಯೋಜನೆ, ಹಾಜರಾತಿ ಹೀಗೆ ಎಲ್ಲವನ್ನು ಪರಿಗಣಿಸಿ ಈ ತೀರ್ಪು ನೀಡಿದ್ದಾರೆ. ಇದೊಂದು ಅತ್ಯಂತ ಹೆಮ್ಮೆಯ ವಿಷಯ. ಈ ಮಾದರಿಯಲ್ಲಿ ಅವರು ಮುಂದುವರಿಯಲಿ. ನಿಮ್ಮ ಆಶೀರ್ವಾದ ಅವರ ಮೇಲೆ ಸದಾ ಇರಲಿ ಎಂದರು.
ರಾಜ್ಯದ ಎಲ್ಲಾ ಜಿಲ್ಲೆ ಹಾಗೂ ಪ್ರತೀ ತಾಲೂಕು ಕೇಂದ್ರಗಳಲ್ಲಿ ಜೀವರಕ್ಷಕ ಔಷಧಗಳನ್ನು ನೀಡುವ ಜನೌಷಧ ಕೇಂದ್ರಗಳನ್ನು ತೆರೆಯಲು ಕೇಂದ್ರ ಸರಕಾರ ಬದ್ಧವಾಗಿದ್ದು, ಇದಕ್ಕೆ ರಾಜ್ಯ ಸರಕಾರ ವ್ಯವಸ್ಥೆ ಕಲ್ಪಿಸಿಕೊಡಬೇಕು
ರಾಜ್ಯದ 30ಜಿಲ್ಲೆ ಹಾಗೂ 175ತಾಲೂಕು ಕೇಂದ್ರಗಳಲ್ಲಿ ಜನೌಷಧ ಕೇಂದ್ರಗಳನ್ನು ತೆರೆಯಲು ಕೇಂದ್ರ ಸರಕಾರ ಸಿದ್ಧವಿದ್ದು, ಪ್ರತೀ ಕೇಂದ್ರಕ್ಕೆ ಸುಮಾರು 2.50ಲಕ್ಷ ವೆಚ್ಚವಾಗಲಿದೆ. ಇದರಲ್ಲಿ ಶೇ. 60ರಷ್ಟು ರಿಯಾಯಿತಿ ದರದಲ್ಲಿ ಜೀವರಕ್ಷಕ ಔಷಧಗಳು ಲಭ್ಯವಾಗಲಿದೆ. ಇದಕ್ಕೆ ಸೂಕ್ತ ಸ್ಥಳಾವಕಾಶ ಹಾಗೂ ಇತರ ವ್ಯವಸ್ಥೆಯನ್ನು ಒದಗಿಸಿಕೊಡುವಂತೆ ರಾಜ್ಯ ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರನ್ನು ವಿನಂತಿಸಿದ್ದೇನೆ. ಇದಕ್ಕೆ ತಕ್ಷಣ ರಾಜ್ಯ ಸರಕಾರ ಸ್ಪಂದಿಸಬೇಕು ಎಂದರು.
ಎಂಸಿಎಫ್ ಸಾಮರ್ಥ್ಯ ವೃದ್ಧಿ: ಎಂಸಿಎಫ್ನಲ್ಲಿ ರಸಗೊಬ್ಬರ ತಯಾರಿಕೆ ಘಟಕದ ಉತ್ಪಾದನಾ ಸಾಮರ್ಥ್ಯವನ್ನು ಇಮ್ಮಡಿ ಗೊಳಿಸುವತ್ತ ಚಿತ್ತ ಹರಿಸಬೇಕು. ಉತ್ತರ ಕರ್ನಾಟಕದಲ್ಲಿ ರಸಗೊಬ್ಬರ ಕಾರ್ಖಾನೆ ಆರಂಭಿಸಲು 500 ಎಕರೆ ಭೂಮಿ ಅಗತ್ಯವಿದೆ. ರಾಜ್ಯ ಸರಕಾರ ಇದನ್ನು ಒದಗಿಸಿದ ಮುಂದಿನ ತಿಂಗಳಲ್ಲೆ ಯೋಜನೆಗೆ ಶಿಲಾನ್ಯಾಸ ಮಾಡುವ ವ್ಯವಸ್ಥೆ ಮಾಡುತ್ತೇನೆ ಎಂದರು.
ಪ್ರಧಾನಿ ನರೇಂದ್ರ ಮೋದಿಯವರ ಟೀಮ್ ಇಂಡಿಯಾ ಪರಿಕಲ್ಪನೆಯಾಗಿದ್ದು, 122ಕೋಟಿ ಮಂದಿ ಒಂದು ಹೆಜ್ಜೆ ಮುಂದಡಿಯಿಟ್ಟರೆ ಇಡೀ ದೇಶ 122ಕೋಟಿ ಮುಂದಡಿ ಇಟ್ಟಂತಾಗುತ್ತದೆ. ಶಾಂತಿ, ಪ್ರಗತಿ, ಜನಕಲ್ಯಾಣ ಪ್ರಧಾನಿಯ ಸಂಕಲ್ಪವಾಗಿದೆ. ಈ ಮಾದರಿಯಲ್ಲಿ ಸಮಗ್ರ ರಾಷ್ಟ್ರದ ಅಭಿವೃದ್ಧಿ ಮಾಡಲಾಗುವುದು ಎಂದರು.
ಭಾರತ ಸಹಿಸದು: ಭಾರತ ಆತಂಕವಾದ, ಭಯೋತ್ಪಾದನೆ, ಉಗ್ರವಾದವನ್ನು ಎಂದಿಗೂ ಸಹಿಸುವುದಿಲ್ಲ ಎಂಬುವುದನ್ನು ಪ್ರಧಾನಿ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಉಗ್ರವಾದಕ್ಕೆ ಭಾರತದ ಸೈನ್ಯ ಈಗಾಗಲೇ ತಕ್ಕ ಉತ್ತರ ನೀಡಿದೆ ಎಂದರು.
ಅಭಿನಂದನೆ ಸರ್ವರಿಗೆ ಸಮರ್ಪಣೆ:
ಸನ್ಮಾನ ಸ್ವೀಕರಿಸಿ ಮಾತನಾಡಿದಸಂಸದ ನಳಿನ್ ಕುಮಾರ್ ಕಟೀಲ್, ನಾನು ಇಷ್ಟು ಎತ್ತರಕ್ಕೆ ಬೆಳೆಸಲು, ಸ್ಥಾನ ಮಾನ ಗಳಿಸಲು ಜಿಲ್ಲೆಯ ಮತದಾರರು, ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಬಿಜೆಪಿ ಪಕ್ಷ ಹಾಗೂ ಕಾರ್ಯಕರ್ತರು, ಮಾಧ್ಯಮ ಬಂಧುಗಳು ಕಾರಣ ಕರ್ತರಾಗಿದ್ದಾರೆ. ಇವರಿಗೆಲ್ಲರಿಗೂ ಈ ಅಭಿನಂದನೆಯನ್ನು ಸಮರ್ಪಿಸುತ್ತೇನೆ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವೈಯಕ್ತಿಕ ದ್ವೇಷದ ರಾಜಕಾರಣ ಇಲ್ಲ. ನಾನು ಸರಳ, ಸಜ್ಜನಿಕೆ, ಆದರ್ಶದ ರಾಜಕಾರಣ ಮಾಡಲು ಇಲ್ಲಿದ್ದೇನೆ. ಜಿಲ್ಲೆಗೆ ಯಾವುದೇ ರೀತಿಯಲ್ಲಿ ಕಳಂಕ ಬಾರದ ರೀತಿಯಲ್ಲಿ ಮುಂದೆ ನಡೆದುಕೊಳ್ಳುತ್ತೇನೆ. ಅಭಿನಂದನೆ ಎಂಬುವುದು ಜವಾಬ್ದಾರಿ ಎಂಬ ಪರಿಜ್ಞಾನ ಇಟ್ಟುಕೊಂಡು, ಮುಂದಿನ ಜವಾಬ್ದಾರಿಯನ್ನು ಅತ್ಯಂತ ಪ್ರಮಾಣಿಕತೆಯಿಂದ ಮಾಡುತ್ತೇನೆ. ಜಿಲ್ಲೆಗೆ ಒಂದು ವರ್ಷದಲ್ಲಿ ಸುಮಾರು ಐದು ಸಾವಿರ ಕೋಟಿ ರೂ.ಗಳನ್ನು ಅಭಿವೃದ್ಧಿಗಾಗಿ ತರಲಾಗಿದೆ. ಇನ್ನಷ್ಟು ಯೋಜನೆಗಳನ್ನು ಜಿಲ್ಲೆಗೆ ತರುವ ಪ್ರಯತ್ನವನ್ನು ಮಾಡುತ್ತೇನೆ ಎಂದರು.
ದೇಶದಕ್ಕೆ ನಂ.1 ಆಗಲಿ:
ಎಸ್ಸಿಡಿಸಿ ಬ್ಯಾಂಕಿನ ಅಧ್ಯಕ್ಷ ಡಾ. ರಾಜೇಂದ್ರ ಕುಮಾರ್ ಮಾತನಾಡಿ, ಸಂಸದ ನಳಿನ ಕುಮಾರ್ ಕಟೀಲ್ ಈ ಬಾರಿ ರಾಜ್ಯಕ್ಕೆ ನಂ.1 ಅಗಿದ್ದು, ಮುಂದಿನ ದಿನಗಳಲ್ಲಿ ದೇಶಕ್ಕೆ ನಂ.1 ಸಂಸದರಾಗಿ ಮೂಡಿ ಬರಲಿ ಎಂದರು.
ನಳಿನ್ ಕುಮಾರ್ ಕಟೀಲ್ ಅವರು ಜನಸಾಮಾನ್ಯರೊಬ್ಬರು ಜಿಲ್ಲೆಗೆ, ರಾಜ್ಯಕ್ಕೆ, ಕೇಂದ್ರಕ್ಕೆ ಕೀರ್ತಿ ತರುವ ಕೆಲಸ ಮಾಡಬಲ್ಲ ಎಂಬುವುದನ್ನು ಈ ಮೂಲಕ ತೋರಿಸಿಕೊಟ್ಟಿದ್ದಾರೆ. ಈ ಹಿನ್ನೆಲೆಯಿಂದ ನಾವೆಲ್ಲರೂ ಜಾತಿ, ಧರ್ಮ, ಪಕ್ಷ ಬಿಟ್ಟು ಈ ಸಮಾರಂಭದಲ್ಲಿ ಒಂದಾಗಿದ್ದೇವೆ ಎಂದರು. ನಳಿನ್ ತಾನು ಹತ್ತಿದ ಮೆಟ್ಟಿಲನ್ನು ಎಂದೂ ಮರೆಯಲಿಲ್ಲ. ಅವರ ಈ ಸಾಧನೆಯನ್ನು ಗುರುತಿಸಿ ಕೇಂದ್ರ ಸರಕಾರ ಅವರಿಗೆ ಇನ್ನೂ ಹೆಚ್ಚಿನ ಜವಾಬ್ದಾರಿ ನೀಡಬೇಕು ಎಂದರು.
ಈ ಸಂದರ್ಭ ಯುವ ಬ್ರಿಗೇಡ್ನ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆಅವರು ಮೋದಿ ಪ್ರಧಾನಿ ಆದ ಬಳಿಕ ಬದಲಾದ ಭಾರತದ ಚಿತ್ರಣದ ಕುರಿತು ಉಪನ್ಯಾಸ ನೀಡಿ, ಇಡೀ ಭಾರತಕ್ಕೆ ಭದ್ರತೆ, ಉದ್ಯೋಗ ವ್ಯವಸ್ಥೆ, ಗೌರವ ಹೆಚ್ಚಿಸುವ ಕೆಲಸಕ್ಕೆ ಮೋದಿ ಮುಂದಡಿ ಇಟ್ಟಿದ್ದಾರೆ. ಭಾರತ ವಿಶ್ವ ಗುರು ಸ್ಥಾನಮಾನಕ್ಕೆ ಹೋಗಲಿದೆ. ದೇಶಕ್ಕೆ ಅಚ್ಚೆ ೀ ದಿನ್ ಬರುತ್ತಿದೆ ಎಂದರು.
55 ದಿನಗಳ ಕಾಲ ಪ್ರವಾಸ ಮಾಡಿ ವಿದೇಶಗಳ ಎದುರು ಭಾರತದ ಗೌರವ ಹಾಗೂ ಹೂಡಿಕೆಗೆ ವ್ಯವಸ್ಥೆ ಮಾಡಿದರು, ಗಡಿ ತಂಟೆಗೆ ಸೂಕ್ತ ಉತ್ತರ ನೀಡಿದರು, ದಕ್ಷ ಅಕಾರಿಗಳ ನ್ನು ಭ್ರಷ್ಟಾಚಾರ ರಹಿತ ನೇಮಕ ಮಾಡಿದರು. ಚೀನಾಕ್ಕೆ ಪರೋಕ್ಷವಾಗಿ ಬೆದರಿಕೆ ನೀಡುವ ಮೂಲಕ ಭಾರತವನ್ನು ಶಕ್ತ ರಾಷ್ಟ್ರ ಎಂಬುವುದನ್ನು ತೋರಿಸಿಕೊಟ್ಟಿದ್ದಾರೆ.
ಬ್ಯಾಂಕ್ಗಳಲ್ಲಿ ಅಕೌಂಟ್ ತೆರೆಯದ ಶೇ.85ರಷ್ಟು ಮಂದಿ ಭಾರತೀಯರನ್ನು ಬ್ಯಾಂಕ್ ಬಳಿ ಕರೆತಂದರು, ದಿನಕ್ಕೆ 30ಕಿ.ಮೀ ರಸ್ತೆಗಳ ನಿರ್ಮಾಣ ಮಾಡುವ ಗುರಿ ಇಟ್ಟುಕೊಂಡು, ಒಟ್ಟು 8000ಕಿಮೀ ರಸ್ತೆ ನಿರ್ಮಾಣದ 12 ಯೋಜನೆಗಳಲ್ಲಿ 8ಯೋಜನೆಗಳ ಕಾಮಗಾರಿ ಶುರುವಾಗಿದೆ. ಇನ್ನಷ್ಟು ಯೋಜಿತ ಕಾರ್ಯಕ್ರಮಗಳು ಜಾರಿಯಾಗಲಿದೆ ಎಂದರು.
ನಮ್ಮ ದೇಶ ನಿರುದ್ಯೋಗ, ಆಂತರಿಕ ಒಟ್ಟು ಉತ್ಪನ್ನದ ಕೊರತೆ, ಗಡಿ ತಂಟೆ ಹೀಗೆ ಅತ್ಯಂತಸಂದಿಗ್ಧ ಪರಿಸ್ಥಿತಿಯಲ್ಲಿ ನರೇಂದ್ರ ಮೋದಿ ಅಕಾರ ವಹಿಸಿಕೊಂಡಿದ್ದರು. ಇದೀಗ ಇಡೀ ಭಾರತದ ಚಿಂತನೆಯನ್ನು, ಚಿತ್ರಣವನ್ನು ಬದಲಾಯಿಸುವ ಕೆಲಸಆಗುತ್ತಿದೆ. ಅವರ ಕೆಲಸಗಳಿಗೆ ಪೂರಕವಾಗಿ ಕೆಲಸ ಮಾಡಲು ನಳಿನ ಕುಮಾರ್ ನಂತಹ ನಂ.1 ಸಂಸದರು ಇದ್ದಾರೆ ಎಂದರು. ಹ್ಯಾಂಗ್ಯೋ ಐಸ್ ಕ್ರೀಮ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಪೈ ಅಧ್ಯಕ್ಷತೆ ವಹಿಸಿದ್ದರು.
ಮೈಸೂರು ಸಂಸದ ಪ್ರತಾಪ್ಸಿಂಹಶುಭ ಕೋರಿದರು. ಕರಾವಳಿ ಸಮೂಹ ಶಿಕ್ಷಣ ಸಂಸ್ಥೆಗಳ ಸ್ಥಾಪಕಾಧ್ಯಕ್ಷ ಎಸ್. ಗಣೇಶ್ ರಾವ್, ರೋಹನ್ ಕಾರ್ಪೊರೇಶನ್ ಪೈವೆಟ್ ಲಿಮಿಟೆಡ್ನ ಆಡಳಿತ ನಿರ್ದೇಶಕ ರೋಹನ್ ಮೊಂತೇರೊ, ಸುಳ್ಯದ ಶಾಸಕ ಅಂಗಾರ,ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ನ ಅಧ್ಯಕ್ಷ ಆಶಾ ತಿಮ್ಮಪ್ಪ ಗೌ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಸ್ವಚ್ಛ ಭಾರತ ಅಭಿಯಾನದಲ್ಲಿ ಕೈ ಜೋಡಿಸಿರುವರಾಮಕೃಷ್ಣ ಮಿಷನ್ ಸಂಸೆ, ಮಾತಾ ಅಮೃತಾನಂದಮಯ ಮಠದವರಿಗೆ ಸನ್ಮಾನಿಸಲಾಯಿತು. ಹಾಗೆಯೇ ಗ್ಯಾಸ್ ಸಬ್ಸಿಡಿ ತ್ಯಜಿಸಿರುವನಾಗರಿಕರಾದಪ್ರಭು ವಿ. ಪಿ ಹಾಗೂ ಸೂರ್ಯನಾರಾಯಣ ರಾವ್ ಅವರಿಗೆ ಸಾಂಕೇತಿಕವಾಗಿ ಅಭಿನಂದಿಸಲಾಯಿತು. ಇದೇ ಸಂದರ್ಭ ಸಚಿವ ಅನಂತ ಕುಮಾರ್ಗೆ ಮಂಗಳೂರು ನಾಗರಿಕರು ಹಾಗೂ ಎಂಸಿಎಫ್ ಪರವಾಗಿ ಸನ್ಮಾನಿಸಲಾಯಿತು.
ನಳಿನ್ ಅಭಿನಂದನಾ ಸಮಿತಿಯ ವಿಶ್ವಹಿಂದು ಪರಿಷತ್ನ ದಕ್ಷಿಣ ಪ್ರಾಂತದ ಅಧ್ಯಕ್ಷ ಪ್ರೊ. ಎಂ. ಬಿ. ಪುರಾಣಿಕ್, ಮಾಜಿ ಶಾಸಕ ರುಕ್ಮಯ್ಯ ಪೂಜಾರಿ, ಕೆನರಾ ವಿದ್ಯಾ ಸಂಸ್ಥೆಸಂಸ್ಥೆಗಳ ಅಧ್ಯಕ್ಷ ಎಸ್. ಎಸ್. ಕಾಮತ್, ಉದ್ಯಮಿ ಉದಯಚಂದ್ರ ಸುವರ್ಣ, ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ನಿಗಮ್ ವಸಾನಿ, ಕೆನರಾ ಬಸ್ಸು ಮಾಲೀಕರ ಸಂಘದ ಅಧ್ಯಕ್ಷ ರಾಜವರ್ಮ ಬಳ್ಳಾಲ್, ಕದ್ರಿ ದೇವಸ್ಥಾನದ ಮೊಕ್ತೇಸರರಾದ ನಿವೇದಿತಾ ಎನ್. ಶೆಟ್ಟಿ, ನಾಟ್ಯಾಚಾರ್ಯ ಉಳ್ಳಾಲ ಮೋಹನ್ ಕುಮಾರ್, ಉದ್ಯಮಿ ಗಣೇಶ್ ಶೆಟ್ಟಿ, ಶಿವಕುಮಾರ್ ಕೆ., ಡಾ. ಗಣಪತಿ ಪಿ., ಕ್ಯಾ ಗಣೇಶ್ ಕಾರ್ಣಿಕ್, ಮಾಜಿ ಎಂಎಲ್ಸಿ ಮೋನಪ್ಪ ಭಂಡಾರಿ, ಡಾ. ಶಿವಶಂಕರ್ ಶೆಟ್ಟಿ, ಲೀಲಾಕ್ಷ ಕರ್ಕೇರ, ನರೇಶ್ ಶೆಣೈ ಉಪಸ್ಥಿತರಿದ್ದರು.
ಬಿಜೆಪಿ ಜಿಲ್ಲಾಧ್ಯಕ್ಷ ಪ್ರತಾಪ್ ಸಿಂಹ ನಾಯಕ್ ಸ್ವಾಗತಿಸಿದರು. ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ವೇದವ್ಯಾಸ ಕಾಮತ್ ವಂದಿಸಿದರು. ಪುರುಷೋತ್ತಮ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.