ಕುಂದಾಪುರ: ಬೈಂದೂರು ಜೂನಿಯರ್ ಕಾಲೇಜು ಪ್ರತಿಭಾನ್ವಿತ ವಿದ್ಯಾರ್ಥಿನಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ಅಕ್ಷತಾ ದೇವಾಡಿಗ (17) ಬುಧವಾರ ಕಾಲೇಜು ಮುಗಿಸಿ ಮನೆಗೆ ಈಕೆ ಒತ್ತಿನೆಣೆ ಸಮೀಪದ ಹೇನಬೇರು ಎಂಬಲ್ಲಿ ನಿಗೂಢವಾಗಿ ಸಾವನ್ನಪ್ಪಿ ಶವವಾಗಿ ಪತ್ತೆಯಾಗಿದ್ದಳು. ಹೀಗೆ ನಿಗೂಢವಾಗಿ ಕೊಲೆಯಾದ ಯುವತಿಯ ಮೃತದೇಹವನ್ನು ಮಣಿಪಾಕ್ಕೆ ಕಳುಹಿಸಿದ್ದು ಅಲ್ಲಿ ಮರಣೋತ್ತರ ಪರೀಕ್ಷೆ ನಡೆದ ಬಳಿಕ ಆಕೆ ಶವವನ್ನು ಬೈಂದೂರಿಗೆ ಗುರುವಾರ ಸಂಜೆ ತರಲಾಯಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಕೇ ಹಲವರನ್ನು ವಿಚಾರಣೆಗೆ ಒಳಪಡಿಸಲಾಗಿದೆ.
ಐ.ಜಿ. ಭೇಟಿ: ಬೈಂದೂರಿನ ಕಾಲೇಜು ವಿದ್ಯಾರ್ಥಿನಿ ಅಕ್ಷತಾ ದೇವಾಡಿಗ ಮರ್ಡರ್ ನಡೆದ ಹೇನಬೇರುವಿನ ಅಕೇಶಿಯಾ ಪ್ಲಾಂಟೇಶನ್ಗೆ ಗುರುವಾರ ಮಧ್ಯಾಹ್ನದ ಸುಮಾರಿಗೆ ಪಶ್ಚಿಮವಲಯ ಐ.ಜಿ.ಪಿ. ಅಮೃತ್ಪಾಲ್ ಭೇಟಿ ನೀಡಿದರು. ಇದೇ ಸಂದರ್ಭ ಉಡುಪಿ ಜಿಲ್ಲಾ ಎಸ್ಪಿ ಅಣ್ಣಾಮಲೈ ಅವರಿಂದ ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆದ ಅವರು ಮಾಧ್ಯಮದವರೊಂದಿಗೆ ಮಾತನಾಡುತ್ತಾ, ಗ್ರಾಮೀಣ ಭಾಗದ ವಿದ್ಯಾರ್ಥಿನಿ ಅಕ್ಷತಾ ಅಸಹಜ ಸಾವಿನ ತನಿಖೆ ಬಗ್ಗೆ ಈಗಾಗಲೇ ಎರಡು ತಂಡಗಳನ್ನು ರಚಿಸಲಾಗಿದ್ದು ತನಿಖೆ ಈಗಾಗಲೇ ಚುರುಕುಗೊಂಡಿದೆ. ಮೇಲ್ನೋಟಕ್ಕೆ ಅತ್ಯಾಚಾರ ನಡೆದಿರುವ ಯಾವುದೇ ಲಕ್ಷಣ ಕಂಡುಬಂದಿಲ್ಲ. ಅಕ್ಷತಾ ಕುತ್ತಿಗೆಗೆ ಚೂಡಿದಾರ್ ವೇಲ್ನಿಂದ ಬಿಗಿದಿರುವ ಬಗ್ಗೆ ಕಂಡುಬರುತ್ತಿದೆ. ಈ ಪ್ರಕರಣದ ಬಗ್ಗೆ ಮಹತ್ವದ ಸುಳಿವು ಈಗಾಗಲೇ ಲಭ್ಯವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಶೀಘ್ರವೇ ಬಂಧಿಸುತ್ತೇವೆ, ಅನುಮಾನಾಸ್ಪದ ಸಾವು ಇದಾಗಿದ್ದು ಅಕ್ಷತಾ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಮಣಿಪಾಲದಲ್ಲಿ ನಡೆಸಲಾಗಿದೆ, ಅದರ ವರದಿ ಬಂದ ಬಳಿಕವೇ ಇನ್ನಷ್ಟು ಸತ್ಯಾಸತ್ಯತೆ ಹೊರಬೀಳಲಿದೆ ಎಂದರು.
ಮೃತಳ ಕುಟುಂಬಕ್ಕೆ 5 ಲಕ್ಷ ಪರಿಹಾರ: ಅಸಹಜವಾಗಿ ಸಾವನ್ನಪ್ಪಿದ ಅಕ್ಷತಾ ದೇವಾಡಿಗ ಅವರ ಹೆನಬೇರುವಿನ ನಿವಾಸಕ್ಕೆ ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಭೇಟಿ ನೀಡಿ ಕುಟುಂಬಿಕರಿಗೆ ಸಾಂತ್ವಾನ ಹೇಳಿದರು. ಪ್ರತಿಭಾನ್ವಿತ ವಿದ್ಯಾರ್ಥಿನಿ ಅಕ್ಷತಾ ಸಾವು ಪ್ರಕರಣದ ಬಗ್ಗೆ ತನಗೆ ನೋವಿದೆ. ಮೃತಳ ಕುಟುಂಬಕ್ಕೆ ಪರಿಹಾರ ನೀಡುವ ಬಗ್ಗೆ ಸರಕಾರದ ಬಳಿ ಮಾತನಾಡುವೆ ಎಂದಿದ್ದರು. ಮಧ್ಯಾಹ್ನದ ಸುಮಾರಿಗೆ ಈ ಬಗ್ಗೆ ಪ್ರತಿಕ್ರಿಯಿಸಿದ ಅವರು ರಾಜ್ಯದ ಗೃಹ ಸಚಿವ ಕೆ.ಜೆ.ಜಾರ್ಜ್ ಮೃತಳ ಕುಟುಂಬಕ್ಕೆ ೫ ಲಕ್ಷ ಪರಿಹಾರ ಘೋಶಿಸಿರುವ ತಿಳಿಸಿದ್ದಾರೆ.
ಮೂರು ದಿನ ಟೈಮ್ ಕೊಡಿ ಬಂಧಿಸ್ತೇವೆ: ವಿದ್ಯಾರ್ಥಿನಿ ಅಕ್ಷತಾ ಕೊಲೆ ಪ್ರಕರಣದ ಆರೋಪಿಗಳನ್ನು ಶೀಘ್ರ ಬಂಧಿಸಬೇಕು. ಆಕೆಯ ಸಾವಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿ ಸಾವಿರಾರು ವಿದ್ಯಾರ್ಥಿಗಳು ಬೈಂದೂರು ರಾಷ್ಟ್ರೀಯ ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆ ನಡೆಸಿದರು. ಸುಮಾರು ಒಂದು ತಾಸಿಗೂ ಅಧಿಕ ಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡ ಹಿನ್ನಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಉಡುಪಿ ಎಸ್ಪಿ ಅಣ್ಣಾಮಲೈ ಅವರು ಪ್ರತಿಭಟನಾಕಾರ ಮನವೊಲೀಸುವ ಪ್ರಯತ್ನ ಮಾಡಿದರು. “ತಂಗಿಯರೇ, ತಮ್ಮಂದಿರೇ ಪೊಲೀಸರು ಮನುಷ್ಯರೆನ್ನುವುದನ್ನು ಅರ್ಥಮಾಡಿಕೊಳ್ಳಿ, ನಮಗೂ ಕೂಡ ಕುಟುಂಬವಿದೆ, ಹೆಣ್ಣು ಮಕ್ಕಳಿದ್ದಾರೆ. ಇಲಾಖೆ ಸಮವಸ್ತ್ರ ಧರಿಸಿರುವ ನಮಗೆ ಮಾತನಾಡಲು ಕಷ್ಟ, ಘಟನೆಯಿಂದ ನಮಗೂ ನೋವಾಗಿದೆ. ಅಕ್ಷತಾ ಅಸಹಜ ಸಾವು ಪ್ರಕರಣದ ಬಗ್ಗೆ ಈಗಾಗಲೇ ಸುಳಿವು ಲಭ್ಯವಾಗಿದೆ. ಇನ್ನು ಮೂರು ದಿನದೊಳಗೆ ಆರೋಪಿಯನ್ನು ಬಂಧಿಸ್ತೇವೆ ಎಂದು ಅಣ್ಣಾಮಲೈ ಹೇಳಿದ್ದಾರೆ.
ರೇಪ್ ನಡೆದಿಲ್ಲ: ಸಾರ್ವಜನಿಕ ವಲಯದಲ್ಲಿ ಇದೊಂದು ರೇಪ್& ಮರ್ಡರ್ ಎಂಬ ಬಗ್ಗೆ ಊಹಾಪೋಹದ ಮಾತುಗಳು ಕೇಳಿಬರುತ್ತಿದೆಯಾದರೂ ಈ ಬಗ್ಗೆ ಪೊಲೀಸ್ ಇಲಾಖೆ ಬಾಯ್ಬಿಡುತ್ತಿಲ್ಲ, ಅತ್ಯಾಚಾರ ನಡೆದಿಲ್ಲ ಎಂದೇ ಇನ್ನೂ ಹೇಳುತ್ತಿದೆ. ಆದರೇ ಯಾವ ಉದ್ಧೇಶಕ್ಕಾಗಿ ಈಕೆ ಕೊಲೆ ನಡೆದಿದೆ ಎಂಬುದು ಮಾತ್ರ ಸಾರ್ವಜನಿಕ ವಲಯದಲ್ಲಿ ಉತ್ತರ ಸಿಗದ ಪ್ರಶ್ನೆಯಾಗಿದೆ.
ರಾಜಕೀಯ ಎಂಟ್ರಿ: ಪ್ರತಿ ಸಲದ ಹಾಗೇ ಈ ಬಾರಿಯೂ ಕೂಡ ತಮ್ಮ ಕೊಳಕು ರಾಜಕಾರಣವನ್ನೂ ತೋರಿಸಲು ಕೆಲವರು ಅಕ್ಷತಾ ಪ್ರಕರಣದಲ್ಲೂ ಹೊರಟಿದ್ದಾರೆ. ವಿದ್ಯಾರ್ಥಿಗಳು ನ್ಯಾಯಕ್ಕಾಗಿ ಪ್ರತಿಭಟಿಸುತ್ತಿದ್ದ ಸಂದರ್ಭ ಕೆಲ ರಾಜಕೀಯ ನಾಯಕರು ತಮ್ಮದೇ ಏನೇನೋ ಘೋಷಣೆ ಕೂಗುತ್ತಾ, ವದರುತ್ತಾ ಮಾತನಾಡಲು ಶುರುವಿಟ್ಟುಕೊಂಡಿದ್ದಾರೆ. ಇದಕ್ಕೆ ಆಕ್ರೋಷಗೊಂಡ ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಮತ್ತೆ ಘೋಷಣೆ ಕೂಗುತ್ತಾ, ತಮಗೆ ನ್ಯಾಯ ಬೇಕೇ ಹೊರತು ಇಲ್ಲಿ ರಾಜಕೀಯ ಎಳೆಯಬೇಡಿ ಎಂದು ಘೋಷಣೆ ಕೂಗಿದರು.
ಬೈಂದೂರಿಗೆ ಮೃತದೇಹ: ಮಣಿಪಾಲದಲ್ಲಿ ಮರಣೋತ್ತರ ಪರೀಕ್ಷೆ ನಡೆದ ಬಳಿಕ ಅಕ್ಷತಾ ಮೃತದೇಹವನ್ನು ಗುರುವಾರ ಸಂಜೆ ಬಳಿಕ ಬೈಂದೂರಿಗೆ ತರಲಾಗಿದದ್ದು, ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿ ಅಕ್ಷತಾಳ ಅಂತಿಮ ದರ್ಶನ ಪಡೆದರು. ಇದೇ ವೇಳೆ ವಿವಿಧ ಪಕ್ಷದ ರಾಜಕೀಯ ಮುಖಂಡರು ಆಗಮಿಸಿ ಸಂತಾಪ ಸೂಚಿಸಿದ್ದರು.
ಬೈಂದೂರು ಅಲರ್ಟ್: ಗುರುವಾರ ಮಧ್ಯಾಹ್ನದ ಸುಮಾರಿಗೆ ಬೈಂದೂರಿಗೆ ಆಗಮಿಸಿದ್ದ ಐಜಿಪಿ ಅಮೃತ್ಪಾಲ್ ಸೇರಿದಂತೆ ಉಡುಪಿ ಎಸ್ಪಿ ಅಣ್ಣಾಮಲೈ, ಹೆಚ್ಚುವರಿ ಎಸ್ಪಿ ಸಂತೋಷ್ ಕುಮಾರ್, ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ, ಬೈಂದೂರು ಸರ್ಕಲ್ ಇನ್ಸ್ಪೆಕ್ಟರ್ಗಳಾದ ಸುದರ್ಶನ್, ಬ್ರಹ್ಮಾವರ ಇನ್ಸ್ಪೆಕ್ಟರ್ ಅರುಣ್ ನಾಯಕ್ ಹಾಗೂ ವಿವಿಧ ಠಾಣೆಯ ಎಸ್ಸೈಯವರು ಮತ್ತು ಸಿಬ್ಬಂದಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು ತನಿಖೆ ಪ್ರಗತಿಯಲ್ಲಿ ಸಾಗುತ್ತಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗು ಪೊಲೀಸ್ ಬಂದೋಬಸ್ತ್ ನ್ನು ಏರ್ಪಡಿಸಲಾಗಿದ್ದು ಕ್.ಎಸ್. ಆರ್.ಪಿ. ತುಕಡಿ, ಡಿ.ಎ.ಆರ್. ವಾಹನಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.