ಮಂಗಳೂರು,ಜೂನ್.18 : ಮುಂಬೈನ ಕನ್ನಡಿಗ ಪೊಲೀಸ್ ಅಧಿಕಾರಿ ಪ್ರಕಾಶ್ ಭಂಡಾರಿ ಇದೀಗ ಮಹಾರಾಷ್ಟ್ರ ಪೊಲೀಸ್ ಇಲಾಖೆಯ ಹೆಚ್ಚುವರಿ ಉಪ ಪೊಲೀಸ್ ಆಯುಕ್ತರಾಗಿ (ಎಡಿಸಿಪಿ) ನಿಯುಕ್ತಿಗೊಂಡಿದ್ದಾರೆ.
ಅತ್ಯಂತ ಕನಿಷ್ಠ ಅವಧಿಯಲ್ಲಿ ಮುಂಬೈ ಭೂಗತ ಲೋಕದ 54 ಕ್ರಿಮಿನಲ್ಗಳನ್ನು ಎನ್ಕೌಂಟರ್ ನಡೆಸಿ ಮಾಫಿಯಾ ದೊರೆಗಳ ಚಟುವಟಿಕೆಗಳಿಗೆ ಕಡಿವಾಣ ಹಾಕಿದ್ದ ಪ್ರಕಾಶ್ ಭಂಡಾರಿ ಈ ಹಿಂದೆ ಅಪರಾಧ ನಿಗ್ರಹ ದಳ, ರಿಸರ್ವ್ ಬ್ಯಾಂಕ್ನ ಭದ್ರತಾ ಮುಖ್ಯಸ್ಥರಾಗಿಯೂ ಕಾರ್ಯ ನಿರ್ವಹಿಸಿದ್ದರು.
1985 ಬ್ಯಾಚ್ನ ಪೊಲೀಸ್ ಅಧಿಕಾರಿಯಾಗಿರುವ ಪ್ರಕಾಶ್ ಭಂಡಾರಿ ಬಿಕಾಂ ಹಾಗೂ ಕಾನೂನು ಪದವೀಧರ. ಮಹಾರಾಷ್ಟ್ರ ಪಬ್ಲಿಕ್ ಸರ್ವಿಸ್ ಕಮಿಷನ್ನ ಪರೀಕ್ಷೆ ಹಾಗೂ ಸ್ಪರ್ಧಾಕೂಟದಲ್ಲಿ ಮಹಾರಾಷ್ಟ್ರ ವಲಯದಲ್ಲಿ ಪ್ರಥಮ ಸ್ಥಾನ ಪಡೆದವರು.
ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವ ಅವರು ಆರಂಭಿಸಿರುವ ಚಿಣ್ಣರ ಬಿಂಬ ಸಂಸ್ಥೆ ಮಹಾರಾಷ್ಟ್ರದಾದ್ಯಂತ ದ.ಕ. ಜಿಲ್ಲೆ ಹಾಗೂ ರಾಜ್ಯದ ಸಾಂಸ್ಕೃತಿಕ ಕಲೆಗಳನ್ನು ಪಸರಿಸುತ್ತಿದೆ.
ಮುಂಬೈ ಭೂಗತ ಜಗತ್ತಿನಿಂದ ದ.ಕ. ಹಾಗೂ ಉಡುಪಿ ಜಿಲ್ಲೆಯ ಸುಮಾರು 50ಕ್ಕೂ ಹೆಚ್ಚು ಉದ್ಯಮಿಗಳ ಪ್ರಾಣ ಕಾಪಾಡಿದ ಹೆಗ್ಗಳಿಕೆ ಪ್ರಕಾಶ್ ಭಂಡಾರಿ ಅವರದ್ದಾಗಿದೆ.