ಕನ್ನಡ ವಾರ್ತೆಗಳು

ಪಾಲಿಕೆ ಆಯುಕ್ತರಿಂದಾ ಅಭಿವೃದ್ಧ್ದಿ ಕಾರ್ಯಗಳ ಅನುಷ್ಠಾನದಲ್ಲಿ ವೈಫಲ್ಯ : ಹೆಫ್ಸಿಬಾ ರಾಣಿ ವಿರುದ್ಧ ಕಾಂಗ್ರೆಸ್ ಮುಖಂಡರ ಆರೋಪ

Pinterest LinkedIn Tumblr

sashi_cong_pm_1

ಮಂಗಳೂರು,ಜೂನ್. 18: ಕಳೆದ ಸುಮಾರು ಆರು ತಿಂಗಳ ಅವಧಿಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಆಯುಕ್ತರಿಂದಾಗಿ ಅಭಿವೃದ್ಧ್ದಿ ಕಾರ್ಯಗಳ ಅನುಷ್ಠಾನದಲ್ಲಿ ವೈಫಲ್ಯ ಆಗಿದೆ ಎಂದು ಮನಪಾ ಆಡಳಿತ ಪಕ್ಷದ ಸದಸ್ಯರು ಆರೋಪಿಸಿದ್ದಾರೆ. ಬುಧವಾರ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮನಪಾ ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಆಯುಕ್ತರಾಗಿದ್ದ ಹೆಫ್ಸಿಬಾ ರಾಣಿಯ ವರ ವರ್ತನೆಯಿಂದಾಗಿ ಆಡಳಿತ ವೈಫಲ್ಯ ಆಗಿದೆ. ಅಧಿಕಾರ ಸ್ವೀಕರಿಸಿದ ದಿನದಿಂದಲೇ ಅವರು ಒಂದಿಲ್ಲೊಂದು ಗೊಂದಲಗಳನ್ನು ಸೃಷ್ಟಿಸುವ ಮೂಲಕ ಮನಪಾದ ಕಾಮಗಾರಿಗಳು ಸ್ಥಗಿತಗೊಂಡಿವೆ ಎಂದು ಆರೋಪಿಸಿದರು.

ಜನಪ್ರತಿನಿಧಿಗಳು ಉತ್ತಮ ಆಡಳಿತ ಮಾಡ ಬೇಕಾದರೆ ಅನುಷ್ಠಾನ ಉತ್ತಮವಾಗಿರಬೇಕು. ಜೂ.4ರಂದು ಮೇಯರ್‌ರವರು ಪ್ರೀಮಿಯಂ ಎಫ್‌ಎಆರ್ ನಿಧಿ ಬಳಕೆ, ಎಡಿಬಿ 2ನೆ ಹಂತದ ಯೋಜನೆ ಬಗ್ಗೆ ಚರ್ಚೆ, ಮಾರುಕಟ್ಟೆಗಳ ಅಭಿವೃದ್ಧಿ, ಪಂಪ್‌ವೆಲ್ ವೃತ್ತದಲ್ಲಿ ಬಸ್ ನಿಲ್ದಾಣ ನಿರ್ಮಾಣ ಕುರಿತು ಚರ್ಚೆಗಾಗಿ ಸಭೆ ನಡೆಸುವ ನಿಟ್ಟಿನಲ್ಲಿ ಅಧಿಕಾರಿಗಳನ್ನೊಳಗೊಂಡ ಸಭೆ ಕರೆಯಲು ಸೂಚಿಸಿ ಆಯುಕ್ತರಿಗೆ ಪತ್ರ ಬರೆದಿದ್ದರು. ಇದಕ್ಕೆ ಉತ್ತರವಾಗಿ ಆಯುಕ್ತರು ಸಭೆ ಕರೆಯಲು ಸೂಚಿಸಿರುವ ದಿನದಂದು ಪೂರ್ವನಿಗದಿತ ಕಾರ್ಯಕ್ರಮಗಳು ಇರುವ ಹಿನ್ನೆಲೆಯಲ್ಲಿ ಅಂದು ಸಭೆ ನಡೆಸಲು ಸಾಧ್ಯವಾಗುವುದಿಲ್ಲ. ಮಾತ್ರವಲ್ಲದೆ ಟಿಪ್ಪಣಿಯಲ್ಲಿ ಉಲ್ಲೇಖಿಸಿರುವ ನಾಲ್ಕು ವಿಷಯಗಳ ಬಗ್ಗೆ ಪರಿಷತ್ ವಿಶೇಷ ಸಭೆ ಹಾಗೂ ಪರಿಷತ್ ಸಭೆಯಲ್ಲಿ ಚರ್ಚೆಯಾಗಿದ್ದು, ಈ ವಿಷಯಗಳಿಗೆ ಸಂಬಂಧಿಸಿದಂತೆ ಈಗಾಗಲೇ ನಿಯಮಗಳ ಪ್ರಕಾರ ಕ್ರಮ ಕೈಗೊಳ್ಳುವುದರ ಬಗ್ಗೆ ತಮಗೆ ಪತ್ರ ಮೂಲಕ ತಿಳಿಸಲು ಇಚ್ಛಿಸುವುದಾಗಿ ಆಯುಕ್ತರು ಮೇಯರ್‌ಗೆ ಉಡಾಫೆಯ ಉತ್ತರ ನೀಡಿದ್ದರು. ಮಾತ್ರವಲ್ಲದೆ, ಮರುದಿನ ಸಭೆಯಲ್ಲಿ ಭಾಗವಹಿಸಿ ಅರ್ಧದಲ್ಲೇ ಎದ್ದು ಹೋಗುವ ಮೂಲಕ ಅಗೌರವ ತೋರಿಸಿದ್ದಾರೆ.

sashi_cong_pm_2

ಜನಪ್ರತಿನಿಧಿಗಳಿಗೆ ಗೌರವ ಸಿಗುವುದು ಅಧಿಕಾರಿಗಳ ಕಾರ್ಯವೈಖರಿಯಿಂದ ಆದರೆ, ಅಧಿಕಾರಿಗಳೇ ಈ ರೀತಿಯಲ್ಲಿ ವರ್ತಿಸಿದರೆ ಜನಪ್ರತಿನಿಧಿಗಳು ಜನಸಾಮಾನ್ಯರ ಸಮಸ್ಯೆಗೆ ಹೇಗೆ ಉತ್ತರಿಸುವುದು ಎಂದು ಶಶಿಧರ ಹೆಗ್ಡೆ ಹೇಳಿದರು. ನಗರದಲ್ಲಿ ಸಮಸ್ಯೆ ಹೆಚ್ಚಿದೆ. ಕಳೆದ ಜನವರಿಯಿಂದ ಎಂಜಿನಿಯರಿಂಗ್ ಇಲಾಖೆಯಿಂದ 22 ಕಾಮಗಾರಿಗಳಿಗೆ ಮಾತ್ರವೇ ಮಂಜೂರು ದೊರಕಿದೆ. ಕಾನೂನಿನ ನೆಪವೊಡ್ಡಿ ತುರ್ತು ಕಾಮಗಾರಿಗಳಿಗೆ ಅವಕಾಶ ನೀಡಿಲ್ಲ. ಅನುಭವದ ಕೊರತೆ ಇರುವಾಗ ಅಧಿಕಾರಿಗಳು ಪರಸ್ಪರ ಹಿರಿಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಜತೆ ಚರ್ಚಿಸಿ ಸಮನ್ವಯತೆಯಿಂದ ಕೆಲಸ ಮಾಡಬೇಕು.

ಮೇಯರ್ ಕಪ್, ದಸರಾ ಕಪ್‌ಗೆ ಪ್ರೋತ್ಸಾಹ ಧನವನ್ನೂ ನೀಡಲಾಗಿಲ್ಲ. ಮಳೆಗಾಲದ ಹಿನ್ನೆಲೆಯಲ್ಲಿ ಮೇ 15ರೊಳಗೆ ಚರಂಡಿಗಳ ಹೂಳೆತ್ತುವ ಕೆಲಸ ಆಗಬೇಕು. ವಾರ್ಡ್‌ಗೆ ಒಂದರಂತೆ ಗ್ಯಾಂಗ್‌ಗಳನ್ನು ರಚಿಸಬೇಕು. ಆದರೆ ಮಳೆಗಾಲ ಆರಂಭವಾಗುವವರೆಗೆ ಚರಂಡಿಗಳ ಹೂಳೆತ್ತುವ ಕಾಮಗಾರಿ ಆರಂಭವಾಗಿರಲಿಲ್ಲ. ಕೆಲವು ಕಡೆ ಎರಡು ವಾರ್ಡ್‌ಗಳಿಗೆ ಒಂದು ಗ್ಯಾಂಗ್ ನೀಡಲಾಗಿದೆ ಎಂದು ಶಶಿಧರ್ ಹೆಗ್ಡೆ ಆಯುಕ್ತರನ್ನು ದೂರಿದರು.

ಪುರಭವನದ ಕಾಮಗಾರಿ ಕುರಿತಂತೆ ಜನವರಿ 15ರಂದು ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಆಯುಕ್ತರು ಮೂರು ತಿಂಗಳೊಳಗೆ ಕಾಮಗಾರಿ ಆರಂಭಿಸುವುದಾಗಿ ಭರವಸೆ ನೀಡಿದ್ದರು. ಆದರೆ ಇನ್ನೂ ಏನೂ ಆಗಿಲ್ಲ ಎಂದು ಅವರು ಹೇಳಿದರು.

sashi_cong_pm_3

ವಿಪಕ್ಷವಾದ ಬಿಜೆಪಿ ಸದಸ್ಯರು ಮಾಧ್ಯಮಗಳ ಎದುರು ಅವರು ಒಳ್ಳೆಯ ಆಯುಕ್ತರು ಎಂದು ಹೊಗಳುತ್ತಾರೆ. ಆದರೆ ಮನಪಾ ಸಾಮಾನ್ಯ ಸಭೆಯಲ್ಲಿ ಕೆಲಸ ಆಗುವುದಿಲ್ಲ ಎಂದು ಹೇಳುತ್ತಾರೆ. ಹೆಫ್ಸಿಬಾ ರಾಣಿ ಉಳಿಸಿ ಎಂದು ಹೇಳುವ ಬಿಜೆಪಿಯವರು, 10 ದಿನಗಳಲ್ಲಿ ಹೊಸ ಆಯುಕ್ತರನ್ನು ತರಿಸಿ ಎಂಬ ಗೊಂದಲದ ಹೇಳಿಕೆ ನೀಡುತ್ತಿದ್ದಾರೆ ಎಂದು ಅವರು ತರಾಟೆಗೈದರು.

ಆಯುಕ್ತರು ವರ್ಗಾವಣೆಗೊಂಡು ಹೋದ ಮೇಲೆ ಈ ಆರೋಪ ಯಾಕೆ ಮಾಡುತ್ತಿದ್ದೀರಿ? ಈ ಮೊದಲೇ ಇದನ್ನೆಲ್ಲಾ ಹೇಳಬಹುದಿತ್ತಲ್ಲಾ? ಏನಾದರೂ ಭಯವೇ ಎಂಬ ಎಂಬ ಸುದ್ದಿಗಾರರ ಪ್ರಶ್ನೆಗೆ, ಸಾರ್ವಜನಿಕರಿಗೆ ವಾಸ್ತವ ತಿಳಿಸುವ ಉದ್ದೇಶದಿಂದ ಮಾಹಿತಿ ನೀಡುತ್ತಿದ್ದೇವೆ. ನಮಗೆ ಯಾರ ಬಗ್ಗೆಯೂ ಭಯವಿಲ್ಲ ಎಂದು ಶಶಿಧರ ಹೆಗ್ಡೆ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮನಪಾ ಸದಸ್ಯರಾದ ದೀಪಕ್ ಪೂಜಾರಿ, ಹರಿನಾಥ್, ಭಾಸ್ಕರ ಮೊಯ್ಲಿ, ಕೇಶವ, ಲ್ಯಾನ್ಸಿ ಲೋಟ್ ಪಿಂಟೋ, ಡಿ.ಕೆ. ಅಶೋಕ್, ನಾಗವೇಣಿ, ಅಪ್ಪಿ, ಪ್ರಕಾಶ್ ಸಾಲ್ಯಾನ್, ಸಂತೋಷ್ ಶೆಟ್ಟಿ, ಅಬ್ದುರ್ರವೂಫ್, ಕವಿತಾ ಸನಿಲ್, ರಜನೀಶ್ ಹಾಗೂ ಯುವ ಕಾಂಗ್ರೆಸ್‌ನ ಮಿಥುನ್ ರೈ ಉಪಸ್ಥಿತರಿದ್ದರು.

Write A Comment