ಮಂಗಳೂರು, ಜೂ.16 : ದ.ಕ. ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಸಾಂಕ್ರಾಮಿಕ ರೋಗಗಳ ಬಗ್ಗೆ ಮುಂಜಾಗರೂಕತಾ ಕ್ರಮ ಜರಗಿಸುವ ಕುರಿತು ದ.ಕ. ಜಿಪಂ ಸಿಇಒ ಪಿ.ಐ.ಶ್ರೀವಿದ್ಯಾ ಸೂಚಿಸಿದ್ದಾರೆ.ಸೋಮವಾರ ಆರೋಗ್ಯ ಇಲಾಖಾಧಿಕಾರಿಗಳ ಸಭೆ ನಡೆಸಿ ಅವರು ಮಾತ ನಾಡುತ್ತಿದ್ದರು. ಸಾರ್ವಜನಿಕರಿಗೆ ಸಾಂಕ್ರಾಮಿಕ ರೋಗಗಳ ಬಗ್ಗೆ ಮಾಹಿತಿ ಮತ್ತು ಶಿಕ್ಷಣ ನೀಡುವ ಕಾರ್ಯಕ್ರಮ ವ್ಯಾಪಕಗೊಳಿಸಬೇಕು. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಇದನ್ನು ನಿರಂತರವಾಗಿ ಮುಂದುವರಿಸಬೇಕು. ಎಲ್ಲಾ ಸರಕಾರಿ ಕಚೇರಿ, ಶಾಲಾ, ಕಾಲೇಜು, ಹಾಸ್ಟೆಲ್, ಅಂಗನವಾಡಿಗಳ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಶ್ರೀವಿದ್ಯಾ ತಿಳಿಸಿದರು.
ಯಾವುದೇ ಡೆಂಗ್ ಪ್ರಕರಣ ಪತ್ತೆಯಾದರೆ ತಕ್ಷಣ ಆ ಪ್ರದೇಶದಲ್ಲಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು. ಅಲ್ಲದೆ ಆಸುಪಾಸಿನ ಸಾರ್ವಜನಿಕರ ಎಲಿಝಾ ಪರೀಕ್ಷೆ ನಡೆಸಬೇಕು ಎಂದ ಸಿಇಒ, ಜಿಲ್ಲೆಯ ಎಲ್ಲಾ ಪ್ರದೇಶಗಳಲ್ಲೂ ಫಾಗಿಂಗ್ ಯಂತ್ರದ ಮೂಲಕ ಸೊಳ್ಳೆಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಪ್ರತಿ ತಾಲೂಕಿ ನಲ್ಲಿ 2-3 ತಂಡ ಮಾಡಿ ಫಾಗಿಂಗ್ ಸಿಂಪಡಿಸಬೇಕು. ಕೆಟ್ಟಿರುವ ಫಾಗಿಂಗ್ ಯಂತ್ರಗಳನ್ನು ತಕ್ಷಣ ದುರಸ್ತಿಗೊಳಿಸುವಂತೆ ಸೂಚಿಸಿದರು.
ಗ್ರಾಮೀಣ ಪ್ರದೇಶಗಳ ಕೆಲವು ಕಡೆ ವೈದ್ಯರ ಕೊರತೆಯಿಂದ ತಕ್ಷಣಕ್ಕೆ ಚಿಕಿತ್ಸೆ ನೀಡಲು ತೊಂದರೆಯಾಗುತ್ತಿದೆ. ಈ ನಿಟ್ಟಿನಲ್ಲಿ ಪ್ರತಿ ತಾಲೂಕಿನಲ್ಲೂ ಸುಸಜ್ಜಿತ ಮೊಬೈಲ್ ಕ್ಲಿನಿಕ್ ಸ್ಥಾಪಿಸಿ ನಿರಂತರವಾಗಿ ಗ್ರಾಮೀಣ ಜನರ ಆರೋಗ್ಯದತ್ತ ಗಮನಹರಿಸಲು ಅವರು ತಿಳಿಸಿದರು. ಡೆಂಗ್ ನಿಯಂತ್ರಣಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳು ಮುನ್ನೆಚ್ಚರಿಕಾ ಕ್ರಮಗಳನ್ನು ತೀವ್ರಗೊಳಿಸಬೇಕು. ಡೆಂಗ್ ಭೀತಿಯಿಂದ ತಾಲೂಕು ಆಸ್ಪತ್ರೆಗಳಲ್ಲಿ ಸಾರ್ವಜನಿಕರು ಅಧಿಕ ಸಂಖ್ಯೆಯಲ್ಲಿ ಜಮಾಯಿಸಿ ರೋಗ ಇನ್ನಷ್ಟು ಹರಡುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಸ್ಥಳೀಯವಾಗಿ ಚಿಕಿತ್ಸೆ ನೀಡಲು ಕ್ರಮ ವಹಿಸುವಂತೆ ಸಿಇಒ ಶ್ರೀವಿದ್ಯಾ ತಿಳಿಸಿದರು. ಡೆಂಗ್ ಕುರಿತಂತೆ ಸಭೆಗೆ ಮಾಹಿತಿ ನೀಡಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ರಾವ್, ಜಿಲ್ಲೆಯಲ್ಲಿ 2015ನೆ ವರ್ಷದಲ್ಲಿ ಮೇ ಅಂತ್ಯದವರೆಗೆ ಮಂಗಳೂರು ತಾಲೂಕಿನಲ್ಲಿ 22, ಸುಳ್ಯದಲ್ಲಿ 11, ಬೆಳ್ತಂಗಡಿಯಲ್ಲಿ 10, ಬಂಟ್ವಾಳದಲ್ಲಿ 9, ಪುತ್ತೂರಿನಲ್ಲಿ 3 ಸೇರಿದಂತೆ ಒಟ್ಟು 55 ಡೆಂಗ್ ಪ್ರಕರಣಗಳು ದೃಢಪಟ್ಟಿವೆ. ಡೆಂಗ್ ರೋಗ ಪತ್ತೆಯಾದ ಪರಿಸರದ 500 ಮೀ. ವ್ಯಾಪ್ತಿಯಲ್ಲಿ ಫಾಗಿಂಗ್ ಮಾಡಲಾಗುತ್ತಿದೆ. ಅಲ್ಲದೆ 50 ಮನೆಗಳ ಪರೀಕ್ಷೆ ಮಾಡಲಾಗುತ್ತದೆ ಎಂದು ವಿವರಿಸಿದರು.
ಸಭೆಯಲ್ಲಿ ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಅರುಣ್ ಕುಮಾರ್, ಜಿಲ್ಲಾ ವಿಕ್ಷಣಾಧಿಕಾರಿ ಡಾ.ರಾಜೇಶ್, ತಾಲೂಕು ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.