ಕುಂದಾಪುರ: ಎತ್ತ ನೋಡಿದರೂ ಹಲಸಿನ ಹಣ್ಣುಗಳ ದರ್ಶನ, ಮೂಗಿಗೆ ಹಲಸಿನ ಹಣ್ಣಿನ ಖಾದ್ಯಗಳ ಸುವಾಸನೆ ಘಮ..ಘಮ.. ವಿವಿಧ ಮಳಿಗೆಗಳಲ್ಲಿ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಸುಗಮ..ಹಲಸಿನ ಬಗ್ಗೆ ಗೋಷ್ಟಿಗಳಲ್ಲಿ ವಿವಿಧ ಗಣ್ಯರ-ಸಂಪನ್ಮೂಲ ವ್ಯಕ್ತಿಗಳ ಸಮಾಗಮ…
ಹೌದು.. ಇದೆಲ್ಲಾ ಕಂಡು ಬಂದಿದ್ದು ಕುಂದಾಪುರದಲ್ಲಿ ನಡೆದ “ರಾಜ್ಯ ಮಟ್ಟದ ಹಲಸಿನ ಹಬ್ಬ-2015’ ಕಾರ್ಯಕ್ರಮದಲ್ಲಿ. ಎರಡು ದಿನಗಳ ಕಾಲ ಕುಂದಾಪುರದ ಶ್ರೀ ನಾರಾಯಣ ಗುರು ಕಲ್ಯಾಣ ಮಂದಿರದಲ್ಲಿ ನಡೆದ ‘ಹಲಸಿನ ಹಬ್ಬ’ದ ಝಲಕ್ ಇದು.
ಹಲಸಿನ ವೈವಿಧ್ಯಮಯ ಅಡುಗೆಗಳನ್ನು ಸ್ಥಳದಲ್ಲೇ ಮಾಡಿ ಹಲಸಿನ ರುಚಿಯನ್ನು ಜನರಿಗೆ ಹಲಸಿನ ಖಾದ್ಯದ ಸವಿ ಬಡಿಸಲಾಗಿತ್ತು. ಹಲಸಿನ ಹಬ್ಬದಲ್ಲಿ ಹಲಸಿನ ತಿನಿಸುಗಳಾದ ಐಸ್ಕ್ರೀಮ್, ಪಾಯಸ, ಹಪ್ಪಳ, ಪೇಡಾ, ಸಂಡಿಗೆ, ಮುಳುಕ, ರೊಟ್ಟಿ, ಹಲಸಿನ ಹಣ್ಣಿನ ದೋಸೆ, ಕಡಬು, ಹೋಳಿಗೆ, ಉಪ್ಪಿನಕಾಯಿ ಹಾಗೂ ನೂರಕ್ಕೂ ಹೆಚ್ಚಿನ ಹಲಸುಗಳ ಉತ್ಪನ್ನಗಳು ಹಲಸು ಪ್ರಿಯರ ಬಾಯಲ್ಲಿ ನಿರೂರಿಸಿತು. ಅಲ್ಲದೇ ಮಳಿಗೆಯಲ್ಲಿ ಅತಿಮಧುರ, ಮಲ್ಲಿಗೆ, ಮುಳಿಯ ಸಿಂಗಾರಿ, ಪುತ್ತು ಬಕ್ಕೆ, ಹಪ್ಪಳ ತುಳುವ, ರಾಜಲಕ್ಷ್ಮೀ, ದೋಸೆ ಬಕ್ಕೆ, ಮಿತ್ತಡ್ಕ ಗಮ್ಲೆಸ್, ಅನನ್ಯ, ನಂದನ, ರಾಜ ರುದ್ರಾಕ್ಷಿ ಮೊದಲಾದ ೧೫ಕ್ಕೂ ಅಧಿಕ ಲಭ್ಯವಿದ್ದವು.
.
ಕರ್ನಾಟಕದ ವಿವಿಧ ಜಿಲ್ಲೆಗಳ ಹಲಸು ಕೃಷಿಕರು ಹಾಗೂ ಸ್ವಸಹಾಯ ಸಂಘದ ಸದಸ್ಯರುಗಳು ಹಲಸಿನ ಉತ್ಪನ್ನಗಳನ್ನು, ವಿಭಿನ್ನ ಗಾತ್ರದ ವಿವಿಧ ತಳಿಯ ಹಲಸಿನ ಹಣ್ಣುಗಳನ್ನು ಹಾಗೂ ಹಲಸಿನ ವಿವಿಧ ತಳಿಯ ಕಸಿ ಗಿಡಗಳನ್ನು ಇಡಲಾಗಿತ್ತುಲ್ಲದೇ ವಿವಿಧ ಸಂಘಗಳ ಕಾರ್ಯಕರ್ತರು ತಯಾರಿಸಿದ ಆಕೃತಿಗಳು, ಧಾನ್ಯದಿಂದ ಹಾಗೂ ಹಲಸಿನ ಹಣ್ಣಿನಿಂದಲೇ ಮಾಡಿದ ಕಲಾಕೃತಿಗಳು ಜನರ ಮನವನ್ನು ಸೂರೆಗೊಂಡಿತು.
ಒಟ್ಟಿನಲ್ಲಿ ಎರಡು ದಿನಗಳ ಕಾಲ ಕುಂದಾಪುರದಲ್ಲಿ ನಡೆದ ‘ಹಲಸಿನ ಹಬ್ಬ’ ಹಲಸು ಪ್ರಿಯರನ್ನು ರಂಜಿಸಿದ್ದು ಮಾತ್ರ ಸುಳ್ಳಲ್ಲ..
ವರದಿ,ಚಿತ್ರ- ಯೋಗೀಶ್ ಕುಂಭಾಸಿ