ಮಂಗಳೂರು.ಜೂನ್.15 : ಲಕ್ಷ್ಮೀ ಮೆಮೋರಿಯಲ್ ಕಾಲೇಜಿನ ಕೆಲವು ಮಂದಿ ನರ್ಸಿಂಗ್ ವಿದ್ಯಾರ್ಥಿಗಳಲ್ಲಿ ಎಂಆರ್ಎಸ್ಐ ಸೋಂಕು ತಗುಲಿದ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಕಾಲೇಜಿನ ಎಲ್ಲ ನರ್ಸಿಂಗ್ ವಿದ್ಯಾರ್ಥಿಗಳಿಗೆ 10 ದಿನಗಳ ರಜೆ ನೀಡಲಾಗಿದ್ದು, ಅವರಲ್ಲಿ ಬಹುತೇಕ ಮಂದಿ ಊರಿಗೆ ತೆರಳಿದ್ದಾರೆ. ಎಂಆರ್ಎಸ್ಎ ಸೋಂಕು ಲಕ್ಷಣ ಕಂಡು ಬಂದ ಎಲ್ಲ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಿ ಔಷಧ ನೀಡಲಾಗಿದೆ ಎಂದು ಕಾಲೇಜಿನ ಆಡಳಿತ ಮಂಡಳಿ ತಿಳಿಸಿದೆ.
ಎಂಆರ್ಎಸ್ಎ ಬಗ್ಗೆ ಶನಿವಾರ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗುತ್ತಿದ್ದಂತೆ ಜನರಲ್ಲಿ ಆತಂಕ ಉಂಟಾಗಿತ್ತು. ಬಿಎಸ್ಸಿ ನರ್ಸಿಂಗ್ನ 2, 3, 4ನೇ ವರ್ಷದ ವಿದ್ಯಾರ್ಥಿಗಳಲ್ಲಿ 40ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಈ ಸೋಂಕು ತಗುಲಿತ್ತು. ಸೋಂಕು ಇದ್ದರೂ ತಮ್ಮನ್ನು ಡ್ನೂಟಿಗೆ ಕಳುಹಿಸಲಾಗುತ್ತದೆ ಎಂದು ಆರೋಪಿಸಿ ವಿದ್ಯಾರ್ಥಿನಿಯರು ಶನಿವಾರ ಕಾಲೇಜು ಆವರಣದಲ್ಲಿ ಪ್ರತಿಭಟನೆ ನಡೆಸಿದ್ದರು.
ವಿದ್ಯಾರ್ಥಿಗಳನ್ನು ಆರೋಗ್ಯ ಇಲಾಖೆ ವತಿಯಿಂದ ಪರೀಕ್ಷೆಗೆ ಒಳಪಡಿಸುವ ಆವಶ್ಯಕತೆ ಮತ್ತು ಅವರಿಗೆ ಎಂಆರ್ಎಸ್ಎ ಕುರಿತು ಮಾಹಿತಿ ನೀಡಲು ಕೌನ್ಸೆಲಿಂಗ್ ನಡೆಸುವ ಬಗ್ಗೆ ಜೂ. 15ರಂದು ನಡೆಯುವ ಸಭೆಯಲ್ಲಿ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಅಧಿಕಾರಿ ಡಾ| ರಾಮಕೃಷ್ಣ ರಾವ್ ತಿಳಿಸಿದ್ದಾರೆ.