ಮಂಗಳೂರು,ಜೂನ್.10 : ದ.ಕ. ಜಿಲ್ಲೆಯಲ್ಲಿ 2 ನೇ ಹಂತದ ಬಿಜೆಪಿ ಸದಸ್ಯತ್ವ ನೋಂದಣಿ ಅಭಿಯಾನಕ್ಕಾಗಿ 2,27,000 ಮಂದಿ ಮಿಸ್ಕಾಲ್ ಮೂಲಕ ಸದಸ್ಯತ್ವ ನೋಂದಾಯಿಸಿರುವವರ ಮನೆಮನೆ ಸಂಪರ್ಕ ಕಾರ್ಯಕ್ರಮ “ಮಹಾಸಂಪರ್ಕ ಅಭಿಯಾನ”ಕ್ಕೆ ಜೂ. 16ರಂದು ಚಾಲನೆ ಸಿಗಲಿದೆ ಎಂದು ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಪ್ರತಾಪಸಿಂಹ ನಾಯಕ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಅಭಿಯಾನಕ್ಕೆ ಜಿಲ್ಲಾ ಮಟ್ಟದಲ್ಲಿ ಜೂ. 16 ಹಾಗೂ 17ರಂದು ಸಂಸದ ನಳಿನ್ ಕುಮಾರ್ ಕಟೀಲು ಹಾಗೂ ಇತರ ನಾಯಕರು ಚಾಲನೆ ನೀಡುವರು. 19 ಹಾಗೂ 20ರಂದು ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ಚಾಲನೆ ನೀಡಲಿದ್ದು ಜು. 6ರ ವರೆಗೆ ನಡೆಯಲಿರುವುದು. ಸದಸ್ಯತ್ವ ಅಭಿಯಾನ ಸಂದರ್ಭದಲ್ಲಿ ಮಿಸ್ಕಾಲ್ ನೀಡಿ ನೋಂದಣಿ ಮಾಡಿರುವ ಸದಸ್ಯರ ವಿವರ ಸಂಗ್ರಹದ ಜತೆಗೆ ಹೊಸ ಸದಸ್ಯರ ನೋಂದಣಿಯೂ ನಡೆಯಲಿರುವುದು ಎಂದರು.
ಮಹತ್ವಾಕಾಂಕ್ಷಿ ಯೋಜನೆ:
ಮಹಾಸಂಪರ್ಕ ಅಭಿಯಾನ ಕೇವಲ ಪಕ್ಷದ ಸಂಘಟನಾತ್ಮಕ ಉದ್ದೇಶವನ್ನು ಮಾತ್ರ ಹೊಂದಿಲ್ಲ. ಜತೆಗೆ ತಳಮಟ್ಟದ ಕಾರ್ಯಕರ್ತರರನ್ನು ರಾಷ್ಟ್ರ ನಿರ್ಮಾಣದ, ಸಾಮಾಜಿಕ ಪರಿವರ್ತನೆಯ ಕಾರ್ಯಕರ್ತರಾಗಿ, ಅಭಿವೃದ್ಧಿಯ ಹರಿಕಾರರಾಗಿ, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಸೇವಕರಾಗಿ ರೂಪಿಸುವ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ ಎಂದವರು ವಿವರಿಸಿದರು.
ಅಡಿಕೆ ಅಮದು ಸುಂಕವನ್ನು ಹೆಚ್ಚಳ ಮಾಡಿ ಅಡಿಕೆ ಬೆಳೆಗಾರರ ಬೇಡಿಕೆಗೆ ಸ್ಪಂದಿಸಿರುವ ಪ್ರಧಾನಿಯವರನ್ನು ಜೂ. 6ರಂದು ಜರಗಿದ ಜಿಲ್ಲಾ ಬಿಜೆಪಿ ಕಾರ್ಯಕಾರಿ ಸಭೆಯಲ್ಲಿ ಅಭಿನಂದಿಸಿ ನಿರ್ಣಯ ಕೈಗೊಳ್ಳಲಾಗಿದೆ. 2009ರಲ್ಲಿ ಮೈಸೂರು ಹಾಗೂ 2010ರಲ್ಲಿ ಶಿವಮೊಗ್ಗ ಹಾಗೂ ಹಾಸನದಲ್ಲಿ ಕೋಮುಗಲಭೆ ನಡೆಸಿದ ಆರೋಪಿಗಳ ಮೇಲಿನ ಮೊಕದ್ದಮೆಗಳನ್ನು ಹಿಂದೆಗೆದುಕೊಳ್ಳುವ ರಾಜ್ಯ ಸಚಿವ ಸಂಪುಟದ ನಿರ್ಣಯವನ್ನು ಕಾರ್ಯಕಾರಿ ಸಮಿತಿ ಸಭೆ ಬಲವಾಗಿ ಖಂಡಿಸಿದೆ ಎಂದರು.
ಮಾಜಿ ಸಚಿವ ಜೆ. ಕೃಷ್ಣ ಪಾಲೆಮಾರ್, ಮುಖಂಡರಾದ ನಿತಿನ್ ಕುಮಾರ್, ಕಿಶೋರ್ ರೈ, ಸುಧೀರ್ ಶೆಟ್ಟಿ ಕಣ್ಣೂರು, ಬೃಜೇಶ್ ಚೌಟ, ದಿವಾಕರ ಸಾಮಾನಿ ಸಂಜಯ ಪ್ರಭು, ವಿಕಾಸ್ ಪುತ್ತೂರು ಉಪಸ್ಥಿತರಿದ್ದರು.