ಮಂಗಳೂರು,ಜೂನ್.09: ಜಪ್ಪಿನಮೊಗರುವಿನ ಹೆದ್ದಾರಿಯಲ್ಲಿ ಬೈಕ್ ತನ್ನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಮರಿಗೆ ಬಿದ್ದು ಯುವಕನೊಬ್ಬ ತೀವ್ರ ಗಾಯಗೊಂಡು ಸ್ಥಳದಲ್ಲಿಯೇ ಸಾವನ್ನಪ್ಪಿದ್ದ ಘಟನೆ ನಡೆದಿದೆ. ಬೈಕ್ ಸವಾರನನ್ನು ತೊಕ್ಕೋಟಿನ ಅಶ್ವಿನ್ ಕುಮಾರ್ (26)ಎಂದು ಹೇಳಲಾಗಿದೆ.ರಾತ್ರಿ ಸುಮಾರು 11 ಗಂಟೆಯ ನಂತರ ಸೋಮವಾರ ಬೆಳಗ್ಗೆ 5 ಗಂಟೆಯ ಮಧ್ಯೆ ಈ ಘಟನೆ ನಡೆದಿರಬೇಕೆಂದು ಪೊಲೀಸರು ಶಂಕಿಸಿದ್ದಾರೆ.
ಅಶ್ವಿನ್ ಕುಮಾರ್ ನಗರದ ರಿಯಲ್ ಎಸ್ಟೇಟ್ ಸಂಸ್ಥೆಯೊಂದರಲ್ಲಿ ಸೂಪರ್ವೈಸರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಸೋಮವಾರ ಬೆಳಗ್ಗೆ ಜಪ್ಪಿನಮೊಗರಿನ ಗೀತಾ ಆಟೋ ವರ್ಕ್ಸ್ ಬಳಿ ರಸ್ತೆ ಬದಿಯ ಹೊಂಡದಲ್ಲಿ ಮೃತದೇಹ ಕಂಡು ಬಂದಿದ್ದು, ಸಮೀಪದಲ್ಲಿಯೇ ಬೈಕ್ ಮಗುಚಿ ಬಿದ್ದಿತ್ತು. ರಾತ್ರಿ ವೇಳೆ ಮಂಗಳೂರಿನಿಂದ ಮನೆ ಕಡೆಗೆ ಹೋಗುವಾಗ ಬೈಕ್ ನಿಯಂತ್ರಣ ತಪ್ಪಿ ರಸ್ತೆಯಿಂದ ಕೆಳಗೆ ಬಿದ್ದಿರಬೇಕೆಂದು ಅಂದಾಜಿಸಲಾಗಿದೆ.
ಅಶ್ವಿನ್ ಬಿದ್ದ ಕಡೆ ಹಳೆಯ ಲಾರಿಯೊಂದು ನಿಂತಿದ್ದು, ಬೈಕ್ ಕೆಳಗೆ ಬಿದ್ದಾಗ ಢಿಕ್ಕಿಯ ರಭಸಕ್ಕೆ ಅವರ ತಲೆ ಲಾರಿಯ ಬಾಡಿಯ ಹಿಂಬದಿಗೆ ತಗುಲಿ ತೀವ್ರ ರಕ್ತಸ್ರಾವದಿಂದಾಗಿ ಸ್ಥಳದಲ್ಲಿಯೇ ಸಾವನ್ನಪ್ಪಿರಬೇಕೆಂದು ಶಂಕಿಸಲಾಗಿದೆ. ಬೆಳಗ್ಗೆ ಗ್ಯಾರೇಜಿನ ಕೆಲಸಕ್ಕೆ ಬಂದವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.