ಉಳ್ಳಾಲ,ಜೂನ್.09 : ಇಲ್ಲಿನ ಕೇಂದ್ರ ಮಸೀದಿ ಮತ್ತು ಸಯ್ಯದ್ ಮದನಿ ದರ್ಗಾ ದಕ್ಷಿಣ ಭಾರತದಲ್ಲಿ ಪ್ರಸಿದ್ಧಿಗಳಿಸಿದ ಪವಿತ್ರ ಸ್ಥಳವಾಗಿದ್ದು, ಇದರ ಅಭಿವೃದ್ಧಿಗೆ ಮತ್ತು ಶೈಕ್ಷಣಿಕ ರಂಗಕ್ಕೆ ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ನಿಂದ ಆಗುವಷ್ಟು ಸಹಾಯ ಮಾಡುವುದಾಗಿ ರಾಜ್ಯ ವಕ್ಫ್ ಬೋರ್ಡ್ನ ಅಧ್ಯಕ್ಷ ಡಾ. ಯೂಸುಫ್ ಅಹ್ಮದ್ ಭರವಸೆ ನೀಡಿದರು. ಅವರು ಸೋಮವಾರ ಉಳ್ಳಾಲ ದರ್ಗಾಕ್ಕೆ ಭೇಟಿ ನೀಡಿ ಝಿಯಾರತ್ ಮಾಡಿ ದರ್ಗಾದ ಕಾರ್ಯವೈಖರಿಯನ್ನು ಪರಿಶೀಲಿಸಿದ ಬಳಿಕ ಮಾತನಾಡಿದರು.
ಶಿಕ್ಷಣ ಮಾನವ ಸಮುದಾಯದ ಭವಿಷ್ಯವನ್ನು ನಿರ್ಧರಿಸುವ ಸಾಧನ. ಶಿಕ್ಷಣವನ್ನು ದೋಚಲು ಯಾರಿಗೂ ಆಗದು. ಪ್ರಸಕ್ತ ಕಾಲದಲ್ಲಿ ಶಿಕ್ಷಣದ ಅಗತ್ಯತೆ ಬಹಳಷ್ಟಿದೆ ಎಂದರು. ಈ ಸಂದರ್ಭದಲ್ಲಿ ದರ್ಗಾ ಸಮಿತಿಯ ವತಿಯಿಂದ ದರ್ಗಾ ಅಧ್ಯಕ್ಷರಾದ ಹಾಜಿ ಯು.ಎಸ್ ಹಂಝರವರು ವಕ್ಫ್ ಅಧ್ಯಕ್ಶರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ದರ್ಗಾ ಅಧ್ಯಕ್ಷರಾದ ಹಾಜಿ ಯು.ಎಸ್ ಹಂಝ, ವಕ್ಫ್ ಬೋರ್ಡ್ನ ಮಾಜಿ ಅಧ್ಯಕ್ಷ ಖಾಲಿದ್ ಅಹ್ಮದ್, ದರ್ಗಾ ವಕ್ಫ್ ಬೋರ್ಡ್ ಸದಸ್ಯ ಶಾಫಿ ಸಅದಿ ಯೆನೆಪೋಯ ಮಹಮ್ಮದ್ ಕುಂಞಿ, ದರ್ಗಾ ಪ್ರಧಾನ ಕಾರ್ಯದರ್ಶಿ ಯು.ಟಿ. ಇಲ್ಯಾಸ್, ದರ್ಗಾ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಹನೀಫ್ ಹಾಜಿ, ಕೋಶಾಧಿಕಾರಿ ನಾಝಿಂ, ಮಂಗಳೂರು ವಕ್ಫ್ ಆಫೀಸರ್ ಅಬೂಬಕರ್ ಮೊದಲಾದವರು ಉಪಸ್ಥಿತರಿದ್ದರು.