ಕುಂದಾಪುರ: ಮದುವೆಯಾಗುವುದಾಗಿ ನಂಬಿಸಿ, ಕುಮಟಾ ಮೂಲದ ಯುವತಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿ ಇದೀಗಾ ವಂಚಿಸಿದ ಆರೋಪದಡಿಯಲ್ಲಿ ಅಮಾಸೆಬೈಲು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಉಡುಪಿ ಮೆಸ್ಕಾಂ ಎಲ್.ಟಿ. ರೇಟಿಂಗ್ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ಎಇಇ) ಕುಂದಾಪುರ ಮೂಲದ ರಾಕೇಶ್ ಎಂಬಾತನೇ ಬಂಧಿತ ಆರೋಪಿ.
ಕುಮಟಾ ಮೂಲದ 29 ವರ್ಷದ ಯುವತಿಗೆ ಕಳೆದ ಕೆಲವು ವರ್ಷಗಳಿಂದ ಕಾರವಾರದಲ್ಲಿ ಪರಿಚಯವಾಗಿದ್ದ ರಾಕೇಶ ಆಕೆಯನ್ನು ಪ್ರೀತಿ ಪ್ರೇಮದ ನಾಟಕವಾಡಿ ಬಲೆಗೆ ಕೆಡವಿಕೊಂಡಿದ್ದನಂತೆ. ಬಳಿಕ ಅಲ್ಲಲ್ಲಿ ಸುತ್ತಾಡಿಸುವುದು, ಆಕೆಯ ಮನೆಗೆ ಹೋಗುವ ಪರಿಪಾಠವನ್ನಿಟ್ಟುಕೊಂಡಿದ್ದ ಈತ ಜನವರಿ ತಿಂಗಳಿನಲ್ಲಿ ಈ ಯುವತಿಯನ್ನು ಶೇಡಿಮನೆಯ ಎಸ್ಟೇಟ್ವೊಂದಕ್ಕೆ ತನ್ನ ಕಾರಿನಲ್ಲಿ ಕರೆದೊಯ್ದು ಬಲತ್ಕಾರವಾಗಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ಯುವತಿ ತನ್ನ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಇತ್ತೀಚೆಗೆ ತನ್ನ ಸಂಪರ್ಕವನ್ನು ಬಿಟ್ಟು ತನಗೆ ಕೈಕೊಟ್ಟಿದ್ದಾನೆ ಎಂದು ಆಕೆ ಹೇಳಿದ್ದಾಲೆ.
ಆಕೆ ಶನಿವಾರ ಸಂಜೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಂತೆ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿ ರಾಕೇಶನನ್ನು ಬಂಧಿಸಿದ್ದಾರೆ.
ಈತನ್ಮಧ್ಯೆ ಕೇಸು ದಾಖಲಾದ ಬಳಿಕವೂ ಯುವತಿ ಸಂಬಂಧಿಕರು ಹಾಗೂ ರಾಕೇಶನ ಕುಟುಂಬಿಕರು ಹಾಗೂ ಸ್ನೇಹಿತರು ಮಾತುಕತೆ ನಡೆಸಿ ಮದುವೆ ಮಾಡಿಸುವ ಪ್ರಯತ್ನವನ್ನು ಠಾಣೆಯಲಿಯೇ ಮಾಡಿಸಿದರಾದರೂ ಈ ಪ್ರಯತ್ನ ವಿಫಲವಾದ ಕಾರಣ ಕೊನೆಗೂ ರಾಕೇಶ ಜೈಲಿನ ಹಾದಿ ಹಿಡಿದಿದ್ದಾನೆ.