ಮಂಗಳೂರು,ಜೂನ್.06 : ಕೆರಿಯರ್ ಗೈಡೆನ್ಸ್ ಎಂಡ್ ಇನ್ಫೊರ್ಮೇಶನ್ ಸೆಂಟರ್ ಸಂಸ್ಥೆಯು ಸಿಇಟಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಕೌನ್ಸಿಲಿಂಗ್ ಪೂರ್ವ ಉಚಿತ ಮಾರ್ಗದರ್ಶನ ಶಿಬಿರವು ನಿನ್ನೆ ನಗರದ ಬದ್ರಿಯಾ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಕೇಂದ್ರ ಬ್ಯಾರಿ ಸಾಹಿತ್ಯ ಪರಿಷತ್ನ ಸ್ಥಾಪಕಾಧ್ಯಕ್ಷ ಅಬ್ದುಲ್ ರಹೀಮ್ ಟೀಕೆ ಶಿಬಿರ ಉದ್ಘಾಟಿಸಿದರು. ಸಾಮಾಜಿಕ ಕಾರ್ಯಕರ್ತೆ ವಿದ್ಯಾ ದಿನಕರ್, ಬದ್ರಿಯಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಇಸ್ಮಾಯಿಲ್ ಎನ್. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಕೆರಿಯರ್ ಗೈಡೆನ್ಸ್ ಎಂಡ್ ಇನ್ಫೊರ್ಮೇಶನ್ ಸೆಂಟರ್ನ ಸ್ಥಾಪಕಾಧ್ಯಕ್ಷ ಉಮರ್ ಯು.ಹೆಚ್. ವಿದ್ಯಾರ್ಥಿಗಳಿಗೆ ವೈದ್ಯಕೀಯ, ದಂತ ವೈದ್ಯಕೀಯ, ಆಯುರ್ವೇದ, ಉನಾನಿ, ಹೋಮಿಯೋಪಥಿ, ಯೋಗ – ನ್ಯಾಚುರಾಪಥಿ, ಬಿ ಫಾರ್ಮ, ಫಾರ್ಮ ಡಿ., ಹಾಗೂ ಬಿಇ, ಬಿಟೆಕ್, ಬಿಎಸ್ಸಿಗಳ ವಿವಿಧ ಕೋರ್ಸುಗಳಿಗೆ ನಡೆಯಲಿರುವ ಆನ್ಲೈನ್ ಸಿಇಟಿ ಕೌನ್ಸಿಲಿಂಗ್ನ ವಿಧಾನ, ದಾಖಲಾತಿ ಪರಿಶೀಲನೆಗೆ ಬೇಕಾಗಿರುವ ಅಗತ್ಯ ಕಾಗದಪತ್ರಗಳು, ಸೀಟುಗಳ ಆಯ್ಕೆ ಪ್ರಕಿಯೆ ಮತ್ತು ಇತರ ಪೂರಕ ಮಾಹಿತಿ ನೀಡಿದರು.