ಮಂಗಳೂರು: ರೈತ ಬಂದು ಎದ್ದು ನಿಂತಾಗ ಸಮಾಜ ಸುಖಿ, ಹೈನುಗಾರಿಕೆಯಲ್ಲಿ ಅತ್ಯುತ್ತಮ ಅಭಿವೃದ್ಧಿ ಕಾಣುವ ಮೂಲಕ ನಮ್ಮ ಜಿಲ್ಲೆ ವೃದ್ಧಿಯಾಗಿದೆ. ಜೊತೆಗೆ ಕೆ.ಎಂ.ಎಫ್ ಸ್ವಾವಲಂಭಿ ಸಂಸ್ಥೆಯಾಗಿ ಅಭಿವೃದ್ದಿ ಹೊಂದಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಅಭಿಪ್ರಾಯಪಟ್ಟರು. ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವತಿಯಿಂದ ನಗರದ ಕೆಎಂಎಫ್ ಡೈರಿಯಲ್ಲಿ ಏರ್ಪಡಿಸಿದ ವಿಶ್ವ ಹಾಲು ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಆಗ್ರೋ ವೇಸ್ಟ್ ಆಧಾರಿತ ಹಬೆ ಯಂತ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೃಷಿ ಎನ್ನುವುದು ನಮ್ಮ ಸಂಸ್ಖೃತಿ. ಅದನ್ನು ವ್ಯಾಪರೀಕರಣ ಮಾಡಬಾರದು. ಉತ್ಪಾದಕರು, ಮಾರಾಟಗಾರರು ಹಾಗೂ ಗ್ರಾಹಕರ ನಡುವೆ ಉತ್ತಮವಾದ ಕೊಂಡಿಯಿದ್ದು, ವ್ಯಾಪಾರ ಬೆಳೆಯಲು ಸಹಕಾರಿಯಾಗಿದೆ. ಜನರು ಹಾಗೂ ಕೆಎಂಎಫ್ನ ಚಿಂತನೆಗಳು ಒಗ್ಗೂಡುತ್ತಿರುವುದರಿಂದ ಬದಲಾವಣೆ ಸಾಧ್ಯವಾಗಿದ್ದು, ಹಾಲು ಉತ್ಪಾದನೆಯಲ್ಲಿ ಜಿಲ್ಲೆಯು ರಾಜ್ಯದಲ್ಲೇ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ ಎಂದರು.
ಒಕ್ಕೂಟದ ಸಭಾಭವನ ಉದ್ಘಾಟಿಸಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ನ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಅವರು, ಮಹಾಮತ್ಸಕಾಭಿಷೇಕದ ಸಂದರ್ಭದಲ್ಲಿ ಜಿಲ್ಲಾ ಕೆಎಂಎಫ್ ಅಗತ್ಯದಷ್ಟು ಹಾಲು ಹಾಗೂ ಮೊಸರನ್ನೂ ಪೂರೈಸಿದೆ. ಸಹಕಾರಿ ಸಂಘ ಬ್ಯಾಂಕ್ನ ಕಮಿಷನ್ ಕಡಿಮೆಗೊಳಿಸಿ ಉತ್ಪಾದಕರಿಗೆ ಹೆಚ್ಚು ಲಾಭವಾಗುವಂತೆ ಹಾಗೂ ಉತ್ಪಾದಕರಿಗೆ ಡೆಬಿಟ್ ಕಾರ್ಡ್ ನೀಡುವ ವ್ಯವಸ್ಥೆಯನ್ನು ಮಾಡಲಾಗುವುದು ಎಂದರು.
ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಕ್ಯಾ| ಗಣೇಶ್ ಕಾರ್ಣಿಕ್, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ| ಬಿ.ವಿ. ಸತ್ಯನಾರಾಯಣ, ಒಕ್ಕೂಟದ ಕಾರ್ಯಕಾರಿ ಮಂಡಳಿಯ ನಿರ್ದೇಶಕ ಕೆ. ಸೀತಾರಾಮ ರೈ ಮತ್ತಿತರರು ಉಪಸ್ಥಿತರಿದ್ದರು.
ಕೆಎಂಎಫ್ನ ಉತ್ತಮ ಡೀಲರ್ ಹಿನ್ನೆಲೆಯಲ್ಲಿ ಮೇಯರ್ ಜೆಸಿಂತಾ ವಿಜಯಾ ಆಲ್ರೆಡ್ ಅವರನ್ನು ಸಮ್ಮಾನಿಸಲಾಯಿತು.
ಉತ್ತಮ ಸೇವೆ ಸಲ್ಲಿಸಿದ ಹಾಲು ವಿತರಣಾ ವಾಹನದ ಸಿಬ್ಬಂದಿ ಸುರೇಂದ್ರ, ಕಿಶನ್, ವಿಶ್ವನಾಥ ಅವರನ್ನು ಸಮ್ಮಾನಿಸಿ 5,000 ರೂ., ನಗದು ನೀಡಲಾಯಿತು.