ಬೆಂಗಳೂರು,ಮೇ.27 : ಪ್ರತಿ ವರ್ಷ ಶೈಕ್ಷಣಿಕ ವರ್ಷದ ಆರಂಭವಾದಂತೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯಲು ಹೆಚ್ಚಿನ ಅರ್ಜಿಗಳು ಬರುತ್ತಿದ್ದವು. ಈ ಪ್ರಮಾಣ ಪತ್ರ ಪಡೆಯಲು ವಿದ್ಯಾರ್ಥಿಗಳು ನಾಡ ಕಚೇರಿಗೆ, ತಹಶೀಲ್ದಾರ್ ಕಚೇರಿಗೆ ಅಲೆಯಬೇಕಾಗಿತ್ತು. ಈ ಅಲೆದಾಟವನ್ನು ತಪ್ಪಿಸಲು ಸರ್ಕಾರ ಕಾಗದ ರಹಿತವಾಗಿ ನೀಡುವ ವ್ಯವಸ್ಥೆ ರೂಪಿಸುವಂತೆ ಭೂಮಿ, ಅಟಲ್ಜಿ ಜನಸ್ನೇಹಿ ಕೇಂದ್ರ ಯೋಜನೆಯ ನಿರ್ದೇಶಕರಿಗೆ ಸೂಚಿಸಿದ್ದಾರೆ. ಮೇ 22ರಂದು ಕಾಗದ ರಹಿತ ಪತ್ರ ಸಿದ್ದಪಡಿಸಲು ಸರ್ಕಾರ ಆದೇಶ ನೀಡಿದೆ.
ಕಂದಾಯ ಇಲಾಖೆಯು ಅಟಲ್ಜೀ ಜನಸ್ನೇಹಿ ಕೇಂದ್ರದ ಮೂಲಕ ವಿತರಿಸುತ್ತಿದ್ದ ಎಲ್ಲಾ 25 ಬಗೆಯ ಪ್ರಮಾಣ ಪತ್ರಗಳೂ ಇನ್ನು ಮುಂದೆ ಡಿಜಿಟಲ್ ರೂಪದಲ್ಲಿ ಸಿಗಲಿವೆ.
ಪ್ರತಿ ಪ್ರಮಾಣ ಪತ್ರಕ್ಕೂ15 ಅಂಕಿಗಳ ವಿಶಿಷ್ಟ ಗುರುತಿನ ಸಂಖ್ಯೆ ನೀಡಲಾಗುತ್ತದೆ. ಯಾವುದಾದರೂ ಸವಲತ್ತು ಪಡೆಯಲು ಪ್ರಮಾಣ ಪತ್ರದ ಬದಲು ಈ ಗುರುತಿನ ಸಂಖ್ಯೆಯನ್ನು ಒದಗಿಸಿದರೆ ಸಾಕು.
ಪ್ರಮಾಣ ಪತ್ರಕ್ಕಾಗಿ ಅಟಲ್ಜಿ ಜನಸ್ನೇಹಿ ಕೇಂದ್ರಕ್ಕೆ ಅರ್ಜಿ ಸಲ್ಲಿಸಿದಾಗ 15 ಅಂಕಿಗಳ ಗುರುತಿನ ಸಂಖ್ಯೆ ನೀಡಲಾಗುತ್ತದೆ. ಈ ಅರ್ಜಿ ಸ್ವೀಕೃತವಾದ ಬಗ್ಗೆ ಅರ್ಜಿದಾರರ ಮೊಬೈಲ್ಗೆ ಸಂದೇಶ ಕಳುಹಿಸುವ ವ್ಯವಸ್ಥೆಯೂ ಇದೆ.
ಗ್ರಾಮ ಲೆಕ್ಕಿಗರು ಈ ಅರ್ಜಿಯನ್ನು ಪರಿಶೀಲಿಸಿ, ಪ್ರಮಾಣ ಪತ್ರ ನೀಡುವ ಬಗ್ಗೆ ತಹಸೀಲ್ದಾರ್ಗೆ ಶಿಫಾರಸು ಮಾಡುತ್ತಾರೆ. ತಹಸೀಲ್ದಾರ್ ಅವರು ಪ್ರಮಾಣಪತ್ರಕ್ಕೆ ಸಹಿ ಹಾಕಿದ ಬಳಿಕ ಅರ್ಜಿದಾರ ಮೊಬೈಲ್ ಸಂಖ್ಯೆಗೆ ಅವರ ಪ್ರಮಾಣ ಪತ್ರದ ಸಂಖ್ಯೆಯನ್ನು ಒಳಗೊಂಡ ಸಂದೇಶ ರವಾನೆ ಆಗುತ್ತದೆ.
‘ಪ್ರಮಾಣ ಪತ್ರದ ಗುರುತಿನ ಸಂಖ್ಯೆ ಇದ್ದರೆ, ಇಲಾಖೆಯ ವೆಬ್ಸೈಟ್ನಲ್ಲಿ (www.nadakacheri.karnataka.gov.in) ಪ್ರಮಾಣ ಪತ್ರವನ್ನು ಪರಿಶೀಲಿಸಬಹುದು. ಅಗತ್ಯಬಿದ್ದರೆ ವೆಬ್ಸೈಟ್ನಿಂದ ಪ್ರಮಾಣ ಪತ್ರವನ್ನು ಡೌನ್ಲೋಡ್ ಮಾಡಿಕೊಂಡು ಅದರ ಪ್ರತಿಯನ್ನು ಮುದ್ರಿಸಿಕೊಳ್ಳಬಹುದು’ ಅಟಲ್ಜಿ ಜನಸ್ನೇಹಿ ಕೇಂದ್ರ ಯೋಜನೆಯ ಅಧಿಕಾರಿ ತಿಳಿಸಿದ್ದಾರೆ.