ಕುಂದಾಪುರ: ಇಲ್ಲಿನ ಎಪಿಎಂಸಿ ಯಾರ್ಡ್ನಲ್ಲಿರುವ ಹೋಲ್ಸೆಲ್ ವ್ಯಾಪಾರದ ಅಂಗಡಿಯೊಂದಕ್ಕೆ ಬೆಂಕಿ ಬಿದ್ದ ಘಟನೆ ಕುಂದಾಪುರದಲ್ಲಿ ಮಂಗಳವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ನಗರದ ಸಂತೆ ಮಾರ್ಕೇಟ್ ಆವರಣದ ಎಪಿಎಂಸಿ ಯಾರ್ಡ್ನಲ್ಲಿರುವ ಗಂಗೊಳ್ಳಿ ನಿವಾಸಿ ವೆಂಕಟೇಶ ಎನ್ನುವವರ ಅಂಗಡಿಗೆ ಬೆಂಕಿ ಬಿದ್ದಿದ್ದುಇ ಒಳಗಿರುವ ದಿನಸಿ ಸಾಮಾನುಗಳು, ಪೀಟೋಪಕರಣಗಳು ಸೇರಿದಂತೆ ಹಲವು ವಸ್ತುಗಳು ಬೆಂಕಿಗಾಹುತಿಯಾಗಿ ಅಪಾರ ನಷ್ಟ ಸಂಭವಿಸಿದೆ.
ಹಲವು ವರ್ಷಗಳಿಂದ ಈ ಭಾಗದಲ್ಲಿ ಹೋಲ್ಸೆಲ್ ವ್ಯಾಪಾರದ ಅಂಗಡಿ ಇದಾಗಿತ್ತು. ಹಲವು ಅಂಗಡಿಗಳಿರುವ ಈ ಪ್ರದೇಶದಲ್ಲಿ ರಾತ್ರಿ ಇಬ್ಬರು ಸೆಕ್ಯೂರಿಟಿಗಳು ಕಾರ್ಯ ಮಾಡುತ್ತಿದ್ದರು. ಮಂಗಳವಾರ ಮುಂಜಾನೆ ಅಂಗಡಿ ಕೋಣೆಯಿಂದ ದಟ್ಟ ಹೊಗೆ ಬರುತ್ತಿರುವುದನ್ನು ಗಮನಿಸಿದಾಗ ಬೆಂಕಿ ಅವಘಡ ಸಂಭವಿಸಿರುವುದು ತಿಳಿದಿದೆ. ಕೂಡಲೇ ಬೆಂಕಿ ನಂದಿಸುವ ಕಾರ್ಯ ಮಾಡಲಾಯಿತಾದರೂ ಅಂಗಡಿಯೊಳಗೆ ಎಣ್ಣೆ ಪದಾರ್ಥಗಳು ಇರುವ ಕಾರಣ ಬಹುತೇಕ ಅಂಗಡಿಯೊಳಗಿದ್ದ ಸಾಮಾಗ್ರಿಗಳು ಸುಟ್ಟು ಕರಕಲಾಗಿದೆ. ಅಲ್ಲದೇ ಅಂಗಡಿ ಮೇಲ್ಚಾವಣಿ, ಗೋಡೆಗಳಿಗೂ ಹಾನಿಯಾಗಿದೆ.
ಇನ್ನು ಗಂಗೊಳ್ಳಿಯಲ್ಲೂ ಅಂಗಡಿ ಹೊಂದಿರುವ ವೆಂಕಟೇಶ್ ಅವರ ಅಂಗಡಿಗೆ ಕಳೆದ ಕೆಲವು ತಿಂಗಳ ಹಿಂದೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು ಅಪಾರ ನಷ್ಟವಾಗಿತ್ತು.
ಬೆಂಕಿ ಘಟನೆಯು ಶಾರ್ಟ್ ಸರ್ಕೂಟ್ನಿಂದ ಆಗಿದೆಯೇ ಅಥವಾ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆಯೇ ಎಂಬ ಕುರಿತು ಈಗಾಗಲೇ ತನಿಖೆ ನಡೆಯುತ್ತಿದ್ದು, ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ, ಸರ್ಕಲ್ ಇನ್ಸ್ಪೆಕ್ಟರ್ ದಿವಾಕರ್, ಉಪನಿರೀಕ್ಷಕ ನಾಸೀರ್ ಹುಸೇನ್ ಮೊದಲಾದವರು ಭೇಟಿ ನೀಡಿದ್ದಾರೆ.