ವರದಿ : ಈಶ್ವರ ಎಂ. ಐಲ್
ಚಿತ್ರ,: ದಿನೇಶ್ ಕುಲಾಲ್
ಮುಂಬಯಿ : ಕಲ್ಬಾದೇವಿ ಕಟ್ಟಡದ ಅಗ್ನಿ ದುರಂತದ ರಕ್ಷಾಣಾ ಕಾರ್ಯದಲ್ಲಿ ಗಾಯಗೊಂಡು ಮೇ 14ರಂದು ವಿಧಿವಶರಾದ ಮುಂಬಯಿ ಅಗ್ನಿಶಾಮಕ ದಳದ ಅಧಿಕಾರಿ ಸುಧೀರ್ ಜಿ. ಅಮೀನ್ ಅವರಿಗೆ ಮೇ 23ರಂದು ಬಿಲ್ಲವ ಭವನದಲ್ಲಿ ಶ್ರಂದ್ಧಾಂಜಲಿ ಅರ್ಪಿಸಲಾಯಿತು.
ಬಿಲ್ಲವರ ಅಸೋಷಿಯೇಷನ್ ಮುಂಬಯಿಯ ಅಧ್ಯಕ್ಷ ನಿತ್ಯಾನಂದ ಕೋಟ್ಯಾನ್, ಗೌರವ ಪ್ರಧಾನ ಕಾರ್ಯದರ್ಶಿ ಡಾ. ಯು. ಧನಂಜಯ ಕುಮಾರ್, ಭಾರತ್ ಬ್ಯಾಂಕಿನ ಮಾಜಿ ಕಾರ್ಯಧ್ಯಕ್ಷ ವಾಸುದೇವ ಆರ್ ಕೋಟ್ಯಾನ್ ಹಾಗೂ ಬಿಲ್ಲವರ ಅಸೋಷಿಯೇಷನ್ ನ ಇತರ ಪದಾಧಿಕಾರಿಗಳು, ಭಾರತ್ ಬ್ಯಾಂಕಿನ ನಿರ್ದೇಶಕರು ಹಾಗೂ ಉನ್ನತ ಅಧಿಕಾರಿಗಳು ಸುಧೀರ್ ಜಿ. ಅಮೀನ್ ಅವರ ಭಾವಚಿತ್ರಕ್ಕೆ ಪುಷ್ಪಾಂಜಲಿ ಅರ್ಪಿಸಿದರು.
ಜಯಕೃಷ್ಣ ಪರಿಸರ ಪ್ರೇಮಿಯ ಅಧ್ಯಕ್ಷ ಹರೀಶ್ ಕುಮಾರ್ ಎಂ. ಶೆಟ್ಟಿ, ತೀಯಾ ಸಮಾಜದ ಅಧ್ಯಕ್ಷ ಚಂದ್ರಶೇಖರ ಬೆಳ್ಚಡ, ಉದ್ಯಮಿ ರೋಹಿದಾಸ ಬಂಗೇರ, ಸುಧಾಕರ ಉಚ್ಚಿಲ್, ಕೆ. ಪಿ. ಅರವಿಂದ್, ಜಿ. ಟಿ. ಆಚಾರ್ಯ ಹಾಗೂ ಅಮೀನರ ಹಿತೈಷಿಗಳು ಹೆಚ್ಚಿನ ಸಂಖ್ಯಯಲ್ಲಿ ಉಪಸ್ಥಿತರಿದ್ದು ಅಗಲಿದ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸಿದರು.
ಮಹಾರಾಷ್ಟ್ರ ಮುಖ್ಯಮಂತ್ರಿಗೆ ಮನವಿ:
ಸುಧೀರ್ ಜಿ. ಅಮೀನ್ ಕುಟುಂಬಕ್ಕೆ ಸರಕಾರದಿಂದ ಸಿಗಬೇಕಾದ ಸವಲತ್ತುಗಳನ್ನು ಶೀಘ್ರ ನೀಡುವಂತೆ ಬಿಲ್ಲವ ಅಸೋಸಿಯೇಶನ್ ಮೇ 20 ರಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ. ಅಸೋಸಿ ಯೇಶನ್ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್, ಬಿಜೆಪಿ ಧುರೀಣ ಮತ್ತು ಅಸೋಸಿಯೇಶನ್ ನಿಕಟಪೂರ್ವ ಅಧ್ಯಕ್ಷ ಎಲ್. ವಿ. ಅಮೀನ್ ಹಾಗೂ ಅಸೋಸಿಯೇಶನ್ ಪದಾಧಿಕಾರಿಗಳ ನಿಯೋಗ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿತು.
ಮನವಿಯನ್ನು ಅವಲೋಕಿಸಿದ ಮುಖ್ಯಮಂತ್ರಿ, ಬಿ. ಜೆ. ಪಿ. ಶಾಸಕ ರಾಜ್ಪುರೋಹಿತ್ ಅವರೊಂದಿಗೆ ಚರ್ಚಿಸಿ, ಸುಧೀರ್ ಕುಟುಂಬಕ್ಕೆ ಸರಕಾರದಿಂದ ಸಿಗಬೇಕಾದ ಯಾವುದೇ ನೆರವಿಗೆ ಅನ್ಯಾಯವಾಗದ ರೀತಿಯಲ್ಲಿ ಕೆಲಸಗಳು ನಡೆಯಬೇಕು ಎಂದು ಆದೇಶಿಸಿದರು.
ಮುಖ್ಯಮಂತ್ರಿ ಆದೇಶದಂತೆ ಶಾಸಕ ರಾಜ್ ಪುರೋಹಿತ್ ಅವರು ಮೇ 21ರಂದು ಸುಧೀರ್ ಅಮೀನ್ ಅವರ ಚೆಂಬೂರಿನ ನಿವಾಸಕ್ಕೆ ಆಗಮಿಸಿ, ಮುಖ್ಯಮಂತ್ರಿ ಶಿಫಾರಸು ಮಾಡಿದ ಸವಲತ್ತುಗಳನ್ನು ಶೀಘ್ರದಲ್ಲೇ ಕೊಡಿಸಲಾಗುವುದು ಎಂದು ತಿಳಿಸಿದರು. ಅವರು ಸುಧೀರ್ ಕುಟುಂಬಕ್ಕೆ ಸಾಂತ್ವನ ಹೇಳಿ, ಧೈರ್ಯ ತುಂಬಿಸಿ, ಈ ದುಃಖದ ಸನ್ನಿವೇಶದಲ್ಲಿ ಮಹಾರಾಷ್ಟ್ರ ಜನತೆ ನಿಮ್ಮ ಜತೆಗಿದೆ ಎಂದು ಸಮಾಧಾನಪಡಿಸಿದರು.
ಎಲ್. ವಿ. ಅಮೀನ್ ಶಾಸಕ ಪುರೋಹಿತ್ ಅವರಿಗೆ ಸುಧೀರ್ ಕುಟುಂಬದ ಬಗ್ಗೆ ವಿವರಿಸಿ, ನಿಷ್ಠಾವಂತ ಅಧಿಕಾರಿಗಳಿಗೆ ಅನ್ಯಾಯ ವಾಗದಂತೆ ಸಹಕಾರ ನೀಡಬೇಕು ಎಂದರು. ಈ ಸಂದರ್ಭದಲ್ಲಿ ಕುಮಾರ್ ಬಂಗೇರ ಅವರೂ ಉಪಸ್ಥಿತರಿದ್ದರು.