ಮಂಗಳೂರು,ಮೇ.23 : ಚುನಾವಣೆ ವೇಳೆ ಜನತೆಗೆ ಭಾರಿ ಭರವಸೆ ನೀಡಿ ಬಂದಿರುವ ಮೋದಿಯವರು ಅಧಿಕಾರಕ್ಕೆ ಬಂದು ವರ್ಷವಾಗುತ್ತಿದೆ. ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸಿ , ಜನತೆಯಿಂದ `ಜೋಕರ್’ ಎಂದು ಕರೆಸಿಕೊಳ್ಳಬೇಡಿ ಎಂದು ಶನಿವಾರ ದ. ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮ ದವರೊಂದಿಗೆ ಮಾತನಾಡಿದ ಕಾಂಗ್ರೆಸ್ ಹಿರಿಯ ಮುಖಂಡ ಬಿ. ಜನಾರ್ದನ ಪೂಜಾರಿ ಅವರು ಹೇಳಿದರು.
ಕಪ್ಪು ಹಣ ತರುತ್ತೇನೆ ಎಂದು ಹೇಳಿದ್ದೀರಿ, ಕಪ್ಪು ಹಣ ಏನಾಯಿತು? ಭೂಸ್ವಾಧೀನ ಕಾಯ್ದೆ ತರುವ ಮೂಲಕ ರೈತ ವಿರೋಧಿ ನಿಲುವು ಅನುಸರಿಸುತ್ತಿದ್ದೀರಿ. ಜಮ್ಮು – ಕಾಶ್ಮೀರದಲ್ಲಿ ಸದಾ ಪ್ರತ್ಯೇಕತೆಯ ಮಂತ್ರ ಜಪಿಸುತ್ತಿರುವ ಪಿಡಿಪಿ ಜತೆ ಅಧಿಕಾರಕ್ಕಾಗಿ ಕೈ ಜೋಡಿಸಿದ್ದೀರಿ. ಹತ್ತು ಲಕ್ಷ ರೂ. ಮೌಲ್ಯದ ಸೂಟ್ ಧರಿಸುವುದರಿಂದ ದೇಶದ ಗೌರವ ಹೆಚ್ಚಾಗುತ್ತದೆಯೇ, ಮಹಿಳೆಯ ಬಗ್ಗೆ ಮಾತನಾಡುವ ನೀವು ನಿಮ್ಮ ಪತ್ನಿಗೆ ಇನ್ನೂ ಗೌರವ ಸ್ಥಾನ ನೀಡಿಲ್ಲ. ಭಾರತಕ್ಕೆ ಆತಂಕ ತಂದಿರುವ ಚೀನಾಕ್ಕೆ ಪ್ರವಾಸ ಕೈಗೊಳ್ಳುತ್ತೀರಿ. ಇದು ನಿಮ್ಮ ದೇಶ ಪ್ರೇಮವೇ, ನಿಮ್ಮನ್ನು ದೇಶಪ್ರೇಮಿ ಎಂದು ಕರೆಯಲು ಸಾಧ್ಯವೇ ಎಂದು ಟೀಕಾ ಪ್ರಹಾರ ನಡೆಸಿದರು.
ಮ,ನ.ಪಾ ಮಾಜಿ ಮೇಯರ್ ಮಹಾಬಲ ಮಾರ್ಲ, ಕಾಂಗ್ರೇಸ್ ನಾಯಕ ಸುರೇಶ್ ಬಲ್ಲಾಲ್, ಬಲರಾಜ್ ರೈ, ವಿಜಯ ಕುಮಾರ್ ಶೆಟ್ಟಿ, ಮೊದಲಾದವರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.