ಕನ್ನಡ ವಾರ್ತೆಗಳು

ಸಚಿವರ ಭೇಟಿಗೆ ಬಂದ ಇನ್ಸ್ ಪೆಕ್ಟರ್ ನಾಗರಾಜ್ ಹೊನ್ನೂರು ಹೃದಯಾಘಾತದಿಂದ ಮೃತ್ಯು.

Pinterest LinkedIn Tumblr

Nagaraj_honnur_photo

ಬೆಂಗಳೂರು,ಮೇ.20: ಸಮಾಜಕಲ್ಯಾಣ ಸಚಿವ ಆಂಜನೇಯ ಅವರ ಭೇಟಿಗೆ ಬಂದಿದ್ದ ಇನ್ಸ್ ಪೆಕ್ಟರ್ ಒಬ್ಬರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಮಂಗಳವಾರ ರಾತ್ರಿ ನಗರದಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ಚಿತ್ರದುರ್ಗ ನಿವಾಸಿ ನಾಗರಾಜ್ ಹೊನ್ನೂರು (37) ಎಂಬುವುದಾಗಿ ಗುರುತಿಸಲಾಗಿದೆ.

ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಆಂಜನೇಯರನ್ನು ಭೇಟಿಯಾಗಲೆಂದು ನಾಗರಾಜ್ ಅವರು ಧಾರವಾಡ ಲೋಕಾಯುಕ್ತ ಎಸ್ಪಿ ಪರಶುರಾಮ್ ಜೊತೆ ನಗರಕ್ಕೆ ಬರುವಾಗ ಮೃತಪಟ್ಟಿದ್ದಾರೆ. ಸಚಿವರ ಮನೆ ಬಳಿ ಆಟೋ ರಿಕ್ಷಾದಲ್ಲಿ ಬರುತ್ತಿದ್ದಾಗ ನಾಗರಾಜ್‍ಗೆ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆ ವೇಳೆಗೆ ತೀವ್ರ ಹೃದಯಾಘಾತವಾಗಿದ್ದ ಕಾರಣ ಚಿಕಿತ್ಸೆ ಫಲಕಾರಿಯಾಗದೇ ನಾಗರಾಜ್ ಮೃತಪಟ್ಟಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ನಾಗರಾಜ್ ಮೃತದೇಹವನ್ನು ಬೌರಿಂಗ್ ಆಸ್ಪತ್ರೆಗೆ ಸಾಗಿಸಲಾಗಿದೆ.

ಸಾಹಿತ್ಯದ ಬಗ್ಗೆ ಅಪಾರವಾದ ಆಸಕ್ತಿ ಹೊಂದಿದ್ದ ನಾಗರಾಜ್ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪೊಲೀಸ್ ಇಲಾಖೆಗೆ ಸೇರುವ ಮೊದಲು ಕೆಲವು ಕಾಲ ಅವರು ಪತ್ರಕರ್ತರಾಗಿಯೂ ಕಾರ್ಯನಿರ್ವಹಿಸಿದ್ದರು. ಬಳ್ಳಾರಿ ಜಿಲ್ಲೆಯ ಕಮಲಾಪುರ, ಗಂಡಸಿ, ಹಾಸನ, ಸಕಲೇಶಪುರದಲ್ಲಿ ಅವರು ಕಾರ್ಯನಿರ್ವಹಿಸಿದ್ದಾರೆ. 9 ತಿಂಗಳ ಹಿಂದೆ ಚಿತ್ರದುರ್ಗಕ್ಕೆ ವರ್ಗಾವಣೆಗೊಂಡಿದ್ದರು.

Write A Comment