ಬೆಳ್ತಂಗಡಿ,ಮೇ.20 : ಮದರಸ ಅಧ್ಯಾಪಕ ರಾತ್ರಿಯ ವೇಳೆ ಮನೆಗೆ ಹಿಂತಿರುಗುತ್ತಿದ್ದಾಗ ದುಷ್ಕರ್ಮಿಗಳ ತಂಡ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಚಾರ್ಮಾಡಿಯಲ್ಲಿ ರಾತ್ರಿ ಸಂಭವಿಸಿದೆ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿರುವ ಸಮೀರ್ ಮುಸ್ಲಿಯಾರ್(29) ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಬೆಳ್ತಂಗಡಿ ಪೋಲೀಸರಿಗೆ ದೂರು ನೀಡಿದ್ದಾರೆ.
ಸಮೀರ್ ಮುಸ್ಲಿಯಾರ್ ಅವರು ಎಂದಿನಂತೆ ಮದರಸದಿಂದ ಕೆಲಸ ಮುಗಿಸಿ ರಾತ್ರಿ 10.30 ರ ಸುಮಾರಿಗೆ ಮನೆಗೆ ಹಿಂತಿರುಗುತ್ತಿದ್ದ ವೇಳೆ ಅವರು ಬರುವ ದಾರಿಯಲ್ಲಿ ಮಸನಗುಡ್ಡೆ ಎಂಬಲ್ಲಿ ಕಾದು ಕುಳಿತ ಸ್ಧಳೀಯರಾದ ನವೀನ್, ಪುಟ್ಟು, ಅಶೋಕ, ಕುಶಲ, ವಿಕ್ಕಿ, ವಿನೋದ್, ಹರಿಕಿಶನ್ ಹಾಗು ಇತರರು ಅಡ್ಡಗಟ್ಟಿ ಮಾರಕಾಯುಧಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಹಲ್ಲೆಗೆ ಒಳಗಾದ ಸಮೀರ್ ಗಾಯಗಳೊಂದಿಗೆ ಮನೆಗೆ ಬಂದಿದ್ದು ಮನೆಯವರು ಅವರನ್ನು ಕೂಡಲೆ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಆತನ ತಂದೆ ಸಿ ಕೆ ಪುತ್ತುಮೋನು ಬೆಳ್ತಂಗಡಿ ಪೋಲೀಸರಿಗೆ ದೂರು ನೀಡಿದ್ದಾರೆ.
ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಿಂಗಳ ಹಿಂದೆ ಚಾರ್ಮಾಡಿಯಲ್ಲಿ ಯುವಕನೋರ್ವ ಸಮೀರ್ ನ ಸಂಬಂಧಿ ಯುವತಿಯ ಮನೆಗೆ ನುಗ್ಗಿ ಆಕೆಗೆ ಕಿರುಕುಳ ನೀಡಿದ್ದ. ಈ ಘಟನೆಯಲ್ಲಿ ಗಲಾಟೆಗಳು ನಡೆದು ಪ್ರಕರಣ ದಾಖಲಾಗಿತ್ತು. ಇದರ ಪ್ರತಿಕಾರವಾಗಿ ತೀರಿಸಲು ಇವರ ತಂಡ ಹಲ್ಲೆ ನಡೆಸಿದ್ದಾರೆ ಎಂದು ಅನುಮಾನಿಸಲಾಗಿದೆ.
ಎಸ್ಪಿ ಬೇಟಿ
ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಾ. ಶರಣಪ್ಪ ಅವರು ಬೆಳ್ತಂಗಡಿಗೆ ಬೇಟಿ ನೀಡಿ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡರು ಬಳಿಕ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆಯಲ್ಲಿ ಗಾಯಾಳು ಸಮೀರ್ ನನ್ನು ಬೇಟಿಯಾಗಿ ಮಾಹಿತಿ ಪಡೆದುಕೊಂಡರು. ಹಲ್ಲೆ ನಡೆಸಿರುವ ಆರೋಪಿಗಳನ್ನು ಎರಡು ದಿನದಲ್ಲಿ ಬಂಧಿಸುವ ಭರವಸೆ ನೀಡಿದರು.