ಮಂಗಳೂರು,ಮೇ.20 : ಮಂಗಳೂರು ಪೂರ್ವ ಮತ್ತು ಪಶ್ಚಿಮ ಸಂಚಾರ ಠಾಣೆಯ ಪೊಲೀಸರು ಮೆಕ್ಯಾನಿಕ್ಗಳ ಸಹಾಯದಿಂದಾಗಿ ಬೆಂದೂರ್ವೆಲ್, ನಂತೂರು, ಕಂಕನಾಡಿ ಪ್ರದೇಶಗಳಲ್ಲಿ ಕರ್ಕಶ ಧ್ವನಿ ಮಾಡುವ ವಾಹನಗಳನ್ನು ಅಡ್ಡಗಟ್ಟಿ ಹಾರನ್ ಹಾಗೂ ಟೇಪ್ ರೆಕಾರ್ಡ್ಗಳನ್ನು ವಶಪಡಿಸಿಕೊಂಡಿದ್ದಾರೆ. ಇದೀಗ ನಗರದ ಪೊಲೀಸರು ಇಂತಹ ವಾಹನಗಳ ವಿರುದ್ಧ ಶಿಸ್ತು ಕ್ರಮ, ಕಾರ್ಯಾಚರಣೆ ಆರಂಭಿಸಿದ್ದರಿಂದ ಟ್ರಾಫಿಕ್ ಕಿರಿಕಿರಿ ಹಾಗೂ ವಾಹನಗಳ ಕರ್ಕಶ ಹಾರನ್ ಸೌಂಡ್ನಿಂದ ಜನತೆ ಈಗ ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ.
ಕರ್ಕಶ ಹಾರನ್ ಮಾಡಿಕೊಂಡು ಸಂಚರಿಸುತ್ತಿದ್ದ 200 ವಾಹನ ಚಾಲಕರ ವಿರುದ್ಧ ಒಂದೇ ದಿನದಲ್ಲಿ ಕ್ರಮ ಕೈಗೊಂಡಿದ್ದಾರೆ. ಇದರಿಂದ ಶಾಲೆ, ದೇವಸ್ಥಾನ ಇತರ ಶಾಂತಿಯುತ ಪ್ರದೇಶಗಳು ನಿರಾಳವಾಗಿವೆ. ಅಲ್ಲದೆ ಸಾರ್ವಜನಿಕರು ನೆಮ್ಮದಿಯಿಂದ ಅಡ್ಡಾಡುವಂತಾಗಿದೆ. ಮೇಲಿಂದ ಮೇಲೆ ನಾಗರಿಕರಿಂದ ಬಂದ ದೂರಿನನ್ವಯ ಈ ಕಾರ್ಯಾಚರಣೆ ನಡೆಸಲಾಗಿದೆ. ನಿಯಂತ್ರಣ ಬರುವವರೆಗೂ ಈ ಕಾರ್ಯಾಚರಣೆ ಮುಂದುವರೆಯಲಿದೆ. ಅಲ್ಲದೆ ಇದು ಕೇವಲ ಎಚ್ಚರಿಕೆ, ಇನ್ನು ಮುಂದೆ ಇಂತಹ ಪ್ರಸಂಗ ಕಂಡು ಬಂದಲ್ಲಿ ಚಾಲಕರ ವಿರುದ್ಧ ಮೊಕದ್ದಮೆ ದಾಖಲಿಸಿ, ದಂಡ ವಿಧಿಸಲಾಗುವುದು ಎಂದು ಸಂಚಾರಿ ವಿಭಾಗದ ಉಪಪೊಲೀಸ್ ಕಮಿಷನರ್ ಉದಯ ನಾಯಕ್ ತಿಳಿಸಿದ್ದಾರೆ.