ಉಳ್ಳಾಲ,ಮೇ.20 : ಭಿನ್ನತೆ, ಪಂಗಡ ಪ್ರವಾದಿಯವರ ಕಾಲದಲ್ಲಿ ಇತ್ತು. ಇಸ್ಲಾಂನ ವಿಚಾರದಲ್ಲಿ, ಇಸ್ಲಾಂನ ನೈಜ ಸಿದ್ಧಾಂತಗಳ ವಿಚಾರಗಳಲ್ಲಿ ಭಿನ್ನ ನಿಲುವು ಆ ಕಾಲದಲ್ಲಿ ಚರ್ಚೆಯಾಗುತ್ತಿತ್ತು. ಅದಕ್ಕೆ ತಕ್ಕ ಪರಿಹಾರವನ್ನು ಪ್ರವಾದಿಯವರು ಒದಗಿಸುತ್ತಿದ್ದರು ಎಂದು ಬೇಕಲ ಇಬ್ರಾಹಿಂ ಮುಸ್ಲಿಯಾರ್ ಹೇಳಿದರು.ಅವರು ಎಸ್ವೈಎಸ್ ಮೊಂಟೆಪದವು ಶಾಖೆ ಇದರ ಆಶ್ರಯದಲ್ಲಿ ಮೊಂಟೆಪದವಿನಲ್ಲಿ ನಡೆದ ಸುನ್ನಿ ಆದರ್ಶ ಸಮ್ಮೇಳನ, ತಾಜುಲ್ ಉಲಮಾ, ನೂರುಲ್ ಉಲಮಾ, ಎನ್.ಎಂ. ಉಸ್ತಾದ್ ಅನುಸ್ಮರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಸಕ್ತ ಕಾಲದಲ್ಲಿ ನೈಜ ಆಶಯದ ಬಗ್ಗೆ ಭಿನ್ನ ನಿಲುವು, ಚರ್ಚೆ, ವಾಗ್ವಾದ ವ್ಯಕ್ತವಾಗುವುದು ಸಾಮಾನ್ಯ. ಆದರೆ ನೈಜ ಆಶಯದ ಬಗ್ಗೆ ಚರ್ಚೆ ಮಾಡುವ ಬದಲು ನೈಜ ಆಶಯ ಯಾವುದು ಎಂಬುದರ ಬಗ್ಗೆ ಕೂಲಂಕಷ ಅರ್ಥಮಾಡಿಕೊಂಡು ಸಮಸ್ಯೆಗೆ ಪರಿಹಾರ ಸಿಗುತ್ತದೆ. ಅನಗತ್ಯ ಚರ್ಚೆ ಮಾಡುವ ಬದಲು ಶಾಂತಿ ಸಮಾಧಾನದಿಂದ ಜೀವಿಸಿದರೆ ಉತ್ತಮ ಎಂದು ಪ್ರವಾದಿಯವರು ಹೇಳಿದ್ದಾರೆ. ನಾವು ಅದೇ ಹಾದಿಯಲ್ಲಿ ಸಾಗಬೇಕು ಎಂದರು.
ಹುಸೈನ್ ಸಅದಿ ಮಾತನಾಡಿ ಸುನ್ನಿ ವಿರೋಧಿಗಳ ವಿರುದ್ಧ ಹೋರಾಟ ನಡೆಸಲು ಸುನ್ನಿಗಳು ಒಂದಾಗಬೇಕು. ನೈಜ ಆಶಯ ಯಾವುದು ಎನ್ನುವುದರ ಬಗ್ಗೆ ಅರ್ಥ ಮಾಡಿಕೊಂಡು ಎಲ್ಲರು ಒಗ್ಗಟ್ಟಾಗಿ ಸುನ್ನಿ ವಿರೋಧಿಗಳ ವಿರುದ್ಧ ಸಮರ ಸಾರಬೇಕು. ಆಗ ಮಾತ್ರ ಸುನ್ನಿಗಳಿಗೆ ಯಶಸ್ಸು ಸಿಗಬಹುದು.ಪ್ರವಾದಿಯವರು ಏನನ್ನು ಕಲಿಸಿದ್ದಾರೆಯೋ ಅದನ್ನು ಜೀವನದಲ್ಲಿ ಅಳವಡಿಸಿಕೊಂಡು ಜೀವಿಸಬೇಕು. ಇದಕ್ಕೆ ವಿರುದ್ಧ ಹಾದಿಯಲ್ಲಿ ಜೀವಿಸುವತ್ತ ನಾವು ಹೆಜ್ಜೆ ಹಾಕಬಾರದು ಎಂದರು.ವಡಶ್ಯೇರಿ ಹಸನ್ ಮುಸ್ಲಿಯಾರ್ ಮುಖ್ಯ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಅಸಯ್ಯದ್ ಹಾಮಿದ್ ಇಂಬಿಚ್ಚಿಕೋಯ ತಂಙಳ್, ಪಿ.ಎಂ. ಅಬ್ಬಾಸ್ ಮುಸ್ಲಿಯಾರ್, ಮಾಣಿ ಉಸ್ತಾದ್, ಮುಮ್ತಾಝ್ ಅಲಿ, ಜಿ.ಪಂ. ಸದಸ್ಯ ಎನ್.ಎಸ್. ಕರೀಂ, ವಕ್ಫ್ ಬೋರ್ಡ್ನ ಜಿಲ್ಲಾಧ್ಯಕ್ಷ ಎಸ್.ಎಂ. ರಶೀದ್ ಹಾಜಿ,ಮುಸ್ಲಿಂ ಜಮಾಅತ್ ಕೌನ್ಸಿಲ್ನ ಜಿಲ್ಲಾಧ್ಯಕ್ಷ ಹೈದರ್ ಪರ್ತಿಪ್ಪಾಡಿ, ಉಪಾಧ್ಯಕ್ಷ ಆಲಿಕುಂಞಿ ಪಾರೆ, ಸಿದ್ದೀಕ್ ಮೋಂಟುಗೋಳಿ, ತಾ,ಪಂ. ಸದಸ್ಯ ಅಹ್ಮದ್ ಕುಂಞಿ, ಅಬ್ದುಲ್ ರಶೀದ್ ಝೈನಿ, ರಝಾಕ್ ಮದನಿ, ಉಮರ್ ಅಹ್ಸನಿ ಇನೋಳಿ, ಮುಹಮ್ಮದ್ ಸಖಾಫಿ, ಉಮರ್ ಸಖಾಫಿ ಕಲ್ಮಿಂಜ, ಮೊಯ್ಯದ್ದೀನ್ ಸಅದಿ ತೋಟಾಲ್, ಅಬ್ಬಾಸ್ ಸಖಾಫಿ ಮಡಿಕೇರಿ, ಅಬ್ದುಲ್ ಹಮೀದ್ ಸಖಾಫಿ, ಅಬೂಬಕರ್ ಮದನಿ, ಶರೀಫ್ ಸಅದಿ, ಸುಲೈಮಾನ್ ಹಾಜಿ, ಇಸ್ಮಾಯಿಲ್ ಮಾಸ್ಟರ್, ಇಲ್ಯಾಸ್ ಅಮ್ಜದಿ,ಉಸ್ಮಾನ್ ಸಅದಿ ಪಟ್ಟೋರಿ ಮೊದಲಾದವರು ಉಪಸ್ಥಿತರಿದ್ದರು. ಖಾಲಿದ್ ಹಾಜಿ ಭಟ್ಕಳ ಅತಿಥಿಗಳನ್ನು ಸ್ವಾಗತಿಸಿದರು