ಮಂಗಳೂರು/ ಬೆಳ್ತಂಗಡಿ,ಮೇ.20: ಧರ್ಮಸ್ಥಳ ಗ್ರಾಮದ ನೀರಚಿಲುಮೆ ಎಂಬಲ್ಲಿ ಕೆಲವು ದುಷ್ಕರ್ಮಿಗಳು ಉದ್ಯಮಿ ಹಾಗೂ ನ್ಯಾಯವಾದಿ ರಾಮಚಂದ್ರ ಶೆಣೈ (47) ಅವರನ್ನು ಸೋಮವಾರ ತಡ ರಾತ್ರಿ ಅಪಹರಿಸಿದ ಘಟನೆ ಬೆಳಕಿಗೆ ಬಂದಿದೆ.
ಘಟನೆಯ ವಿವರ :
ಧರ್ಮಸ್ಥಳದ ಗ್ರೀನ್ಪಾರ್ಕ್ ಲಾಡ್ಜ್ ನ ಮಿನರಲ್ ವಾಟರ್ ಹಾಗೂ ತಂಪು ಪಾನೀಯ ಉತ್ಪಾದನಾ ಫ್ಯಾಕ್ಟರಿಯಲ್ಲಿ ಈ ಘಟನೆ ನಡೆದಿದ್ದು, ರಾಮಚಂದ್ರ ಶೆಣೈ ಹಾಗೂ ಅವರ ಪತ್ನಿ ರಶ್ಮಿ ಆರ್. ಶೆಣೈ ಅವರು ದಿನಾಲೂ ಫ್ಯಾಕ್ಟರಿಗೆ ಜೋತೆಯಾಗಿಯೇ ಹೋಗಿ ಬರುತ್ತಿದ್ದರು. ಸೋಮವಾರ ಸಂಜೆ ಎಂದಿನಂತೆ ತನ್ನ ಎಲ್ಲಾ ಕೆಲಸ ಮುಗಿಸಿ ರಶ್ಮಿ ಆರ್ ಶೆಣೈ ಮನೆಗೆ ಬಂದಿದ್ದರು. ರಾತ್ರಿ ಫ್ಯಾಕ್ಟರಿ ಮೆನೇಜರ್ ಅವಿನಾಶ ಅವರು ರಶ್ಮಿ ಅವರಿಗೆ ದೂರವಾಣಿ ಮೂಲಕ ರಾಮಚಂದ್ರ ಶೆಣೈ ಅವರು ಕಾಣಿಸುತ್ತಿಲ್ಲ ಎಂದು ಮಾಹಿತಿ ನೀಡಿದರು. ಬಳಿಕ ರಶ್ಮಿ ಅವರು ಪುತ್ರ ರಾಹುಲ್ ಶೆಣೈ ಜತೆಗೆ ಫ್ಯಾಕ್ಟರಿಗೆ ತೆರಳಿ ಫ್ಯಾಕ್ಟರಿ ಉದ್ಯೋಗಿಗಳಾದ ಗಜೇಂದ್ರ, ಅವಿನಾಶ್ರ ಜತೆ ತಪಾಸಣೆ ನಡೆಸಿದರು. ಈ ಸಂಧರ್ಭದಲ್ಲಿ ರಸ್ತೆ ಬದಿಯಲ್ಲಿ ಶೆಣೈ ಅವರ ಚಪ್ಪಲಿಗಳು ಪ್ರತ್ಯೇಕಿಸಿ ಬಿದ್ದಿದ್ದವು. ಸ್ಥಳೀಯರಿಗೆ ರಾತ್ರಿ ವೇಳೆ ಬೊಬ್ಬೆ ಹೊಡೆದ ಸದ್ದು ಕೇಳಿಸಿದ್ದು ನಂಬರ್ ಪ್ಲೇಟ್ ಇಲ್ಲದ ಕಾರು ವೇಗವಾಗಿ ಉಜಿರೆ ಕಡೆಗೆ ಹೋಗುವುದನ್ನು ಅವರು ಗಮನಿಸಿದವರಿದ್ದಾರೆ.
ತನ್ನ ಪತಿ ಹಾಗೂ ಚಿಕ್ಕಮಗಳೂರಿನ ವಲೇರಿಯನ್ ಕ್ರಾಸ್ತಾ ಅವರ ಮಧ್ಯೆ ಹಣಕಾಸಿನ ವ್ಯವಹಾರ ಇದೆ. ಶೆಣೈ ಅವರು ಕ್ರಾಸ್ತಾರಿಂದ 4 ವರ್ಷಗಳ ಹಿಂದೆ 70 ಲಕ್ಷ ರೂ. ಸಾಲ ಪಡೆದಿದ್ದರು. ಅನಂತರ ಬಡ್ಡಿ ಪಾವತಿಸುತ್ತಾ ಬಂದಿದ್ದರು. ಬಡ್ಡಿ ಕೊಡಲು ಅಸಾಧ್ಯವಾದಾಗ ಉಜಿರೆಯಲ್ಲಿ ಜಾಗ ನೀಡುವುದೆಂದು ಮಾತುಕತೆಯಾಗಿತ್ತು. ಎಂದು ರಶ್ಮಿ ಶೆಣೈ ಅವರು ಇಲ್ಲಿನ ಪೊಲೀಸರಿಗೆ ದೂರು ನೀಡಿದ್ದು ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.