ಮಂಗಳೂರು,ಮೇ.18: ವೈದ್ಯಕೀಯ ವಿದ್ಯಾರ್ಥಿಗಳು ಹಿಂದಿನ ವೈದ್ಯಕೀಯ ಸ್ಥಿತಿಗತಿ ಬಗ್ಗೆ ಸಮಗ್ರವಾಗಿ ಅರಿತುಕೊಂಡು ಈ ಕ್ಷೇತ್ರದ ಹೊಸ ಆವಿಷ್ಕಾರಗಳನ್ನು ಬಳಸಿಕೊಳ್ಳಬೇಕು. ಅವಕಾಶಗಳು ಹುಡುಕಿಕೊಂಡು ಬರುವುದಿಲ್ಲ. ಇದ್ದ ಪರಿಸ್ಥಿತಿಯನ್ನು ಅವಕಾಶವನ್ನಾಗಿ ಪರಿವರ್ತಿಸಿಕೊಂಡು ಸಾಧನೆ ಮಾಡಬೇಕು ಎಂದು ವಿಶ್ವವಿದ್ಯಾನಿಲಯ ಅನುದಾನ ಆಯೋಗದ (ಯುಜಿಸಿ) ಮಾಜಿ ಅಧ್ಯಕ್ಷ ಡಾ. ಹರಿ ಗೌತಮ್ ಅವರು ನಗರದ ಟಿಎಂಎ ಪೈ ಇಂಟರ್ನ್ಯಾಷನಲ್ ಕನ್ವೆನ್ಶನ್ ಸೆಂಟರ್ನಲ್ಲಿ ನಡೆದ ಮಣಿಪಾಲ ವಿಶ್ವವಿದ್ಯಾನಿಲಯದ 20ನೇ ಘಟಿಕೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು.
754 ಪದವೀಧರರು ಹಾಗೂ 674 ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪದವಿ ಹಾಗೂ 35 ವಿದ್ಯಾರ್ಥಿಗಳಿಗೆ ಪಿಎಚ್ಡಿ ಪದವಿ ಪ್ರದಾನಿಸಲಾಯಿತು. ಮಂಗಳೂರಿನ ಕಸ್ತೂರ್ಬಾ ಮೆಡಿಕಲ್ ಕಾಲೇಜಿನಲ್ಲಿ ಪದವಿ ಪಡೆದ ಡಾ. ಮಧುಮಿತ ವಿ.ಹೆರಾಡಿ ಅವರಿಗೆ ಚಿನ್ನದ ಪದಕ ನೀಡಿ ಗೌರವಿಸಲಾಯಿತು. ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಘಟಿಕೋತ್ಸವಕ್ಕೆ ಚಾಲನೆ ನೀಡಿದರು. ಕುಲಪತಿ ಡಾ. ಕೆ. ರಾಮ್ನಾರಾಯಣ್ ಅವರು ಮಣಿಪಾಲ ವಿ.ವಿ.ಯ ವರದಿ ಮಂಡಿಸಿದರು. ಸಹಕುಲಪತಿ ಡಾ.ಎಚ್.ವಿನೋದ್ ಭಟ್ ಸ್ವಾಗತಿಸಿದರು.
ಸಹ ಕುಲಪತಿ ಡಾ. ವಿ. ಸುರೇಂದ್ರ ಶೆಟ್ಟಿ ಅತಿಥಿ ಪರಿಚಯ ಮಾಡಿದರು. ಪರೀಕ್ಷಾಂಗ ಕುಲಸಚಿವ ಡಾ. ಪಿಎಲ್ಎನ್ ರಾವ್, ಕುಲಸಚಿವ ಡಾ. ಜಿ.ಕೆ. ಪ್ರಭು, ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶಕ ಡಾ. ಸುಮಾ ನಾಯರ್ ಉಪಸ್ಥಿತರಿದ್ದರು.
ಡಾ. ಜಿ.ಕೆ. ಪ್ರಭು ಪ್ರಮಾಣವಚನ ಬೋಧಿಸಿದರು. ಮಂಗಳೂರು ಕೆಎಂಸಿಯ ಸಹಾಯಕ ಡೀನ್ ಡಾ. ಆನಂದ್ ಆರ್ ವಂದಿಸಿದರು. ಡಾ. ಕಾರ್ತಿಕ್ ಶೆಟ್ಟಿ ಹಾಗೂ ನಂದಿತಾ ಶೆಣೈ ಕಾರ್ಯಕ್ರಮ ನಿರೂಪಿಸಿದರು.