ಚಿತ್ರ / ವರದಿ : ಸತೀಶ್ ಕಾಪಿಕಾಡ್
ಮಂಗಳೂರು ನಗರದ ಬಲ್ಮಠ ರಸ್ತೆಯ ಮೇಘಾ ಬಿಲ್ಡಿಂಗ್ ನಲ್ಲಿರುವ ಲಕ್ಷ್ಮಿದಾಸ್ ಜುವೆಲ್ಲರ್ಸ್ ಬೆಳ್ಳಿ ಮಳಿಗೆಯಿಂದ ಮೇ 12 ರಂದು ರಾತ್ರಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಠಾಣೆ ಪೊಲೀಸರು ಬಿಹಾರ ಮೂಲದ ಇಬ್ಬರನ್ನು ಶುಕ್ರವಾರ ರಾತ್ರಿ ಬಂಧಿಸಿದ್ದಾರೆ.ಬಂಧಿತರನ್ನು ಮಹಮ್ಮದ್ ಇಫ್ತೀಕರ್(22) ಹಾಗೂ ಮಹಮ್ಮದ್ ಸಬೀರ್ (22) ಎಂದು ಹೆಸರಿಸಲಾಗಿದೆ. ಬಂಧಿತರಿಂದ 10 ಲಕ್ಷ ಮೌಲ್ಯದ ಬೆಳ್ಳಿಯ ಆಭರಣಗಳು, ಲ್ಯಾಪ್ ಟಾಪ್, ಎರಡು ಮೊಬೈಲ್, ಪರ್ಸ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎಸ್. ಮುರುಗನ್ ತಿಳಿಸಿದ್ದಾರೆ.
ಶನಿವಾರ ತಮ್ಮ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಮೇ `12ರಂದು ರಾತ್ರಿ ಕಳ್ಳರು ಲಕ್ಷ್ಮಿದಾಸ್ ಜುವೆಲ್ಲರ್ಸ್ ಬೆಳ್ಳಿ ಮಳಿಗೆಯ ಬಾಗಿಲಿನ ಬೀಗ ಮುರಿದು ಒಳ ಪ್ರವೇಶಿ ರೂ 7,00,000/- (ಏಳು ಲಕ್ಷ) ಮೌಲ್ಯದ 20.420 ಕೆಜಿ ಬೆಳ್ಳಿಯ ಆಭರಣಗಳನ್ನು ಕಳವು ಮಾಡಿರುವ ಬಗ್ಗೆ ಉತ್ತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಗಳು ಕದ್ದ ವಸ್ತುಗಳನ್ನು ಬಂದರಿನಲ್ಲಿ ಮಾರಲು ಯತ್ನಿಸುತ್ತಿದ್ದಾಗ ಪೊಲೀಸರು ದಾಳಿ ನಡಸಿ ಬಂಧಿಸಿದ್ಧಾರೆ.
ಪ್ರಕರಣಕ್ಕೆ ಸಂಬಂಧಿಸಿ ಉತ್ತರ ಠಾಣಾ ಪೊಲೀಸರು ಖಚಿತ ವರ್ತಮಾನದ ಮೇರೆಗೆ ಕಾರ್ಯಾಚರಣೆ ನಡೆಸಿ ಬಿಹಾರ ಮೂಲದ ಆರೋಪಿಗಳನ್ನು ಬಂದಿಸಿ ಕಳವಾದ ಸೊತ್ತನ್ನು ಸ್ವಾಧೀನ ಪಡಿಸಿರುತ್ತಾರೆ. ಆರೋಪಿಗಳ ಮೇಲೆ ಬೆಂಗಳೂರಿನಲ್ಲಿ ಹಲ್ಲೆ ಯತ್ನ, ದರೋಡೆ ಯತ್ನ ಪ್ರಕರಣಗಳು ದಾಖಲಾಗಿವೆ ಎಂದು ಹೇಳಿದರು
ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಎಸ್.ಮುರುಗನ್ ಐ.ಪಿ.ಎಸ್, ಡಿ.ಸಿ.ಪಿ ವಿಷ್ಣುವರ್ಧನ್ , ಎಸಿಪಿ ತಿಲಕ್ ಚಂದ್ರ.ಕೆ ರವರ ಮಾರ್ಗದರ್ಶನದಂತೆ ಉತ್ತರ ಠಾಣೆ ಪೊಲೀಸ್ ನಿರೀಕ್ಷಕರಾದ ಬಿ.ಶಾಂತರಾಮ,ಉಪನಿರೀಕ್ಷಕರುಗಳಾದ ಕೆಕೆ ರಾಮಕೃಷ್ಣ, ಮದನ್ ಎಂ.ಸಿ ,ಎ.ಎಸ್.ಐ ನಾಗೇಶ್, ದಯಾನಂದ ಹಾಗೂ ಸಿಬ್ಬಂದಿಗಳಾದ ಸಂಜೀವ್, ಶೈಲ , ಶಕುಮಾರ , ಜಯರಾಮ ಮುಂತಾದವರು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು ಎಂದು ಅಯುಕ್ತರು ತಿಳಿಸಿದರು.
ಆರೋಪಿಗಳ ಸಂಪೂರ್ಣ ಮಾಹಿತಿ:
1. ಮಹಮ್ಮದ್ ಇಪ್ತಿಕರ್ ಅಲಂ (22) ತಂದೆ ಮಹಮ್ಮದ್ ಜೈನುದ್ದೀನ್ ವಾಸ: ರಾಮಂಪುರ ಮನೆ ಬಿತ್ನೋಳಿ ಅಂಚೆ ಪೂರ್ಣಿಮ ಜಿಲ್ಲೆ ಬಿಹಾರ ರಾಜ್ಯ, ಪ್ರಸ್ತುತ್ತಾ ಮನೆ ನಂ ೩೬, ೫ ನೇ ಕ್ರಾಸ್ ದೇವಸಂದ್ರ ಮುಖ್ಯ ರಸ್ತೆ ಕೆಂಪಿ ಲೇಔಟ್ ಕೆ.ಆರ್ ಪುರಂ ಬೆಂಗಳೂರು.
2. ಮಹಮ್ಮದ್ ಸಬೀರ್ (22) ತಂದೆ ಮನ್ನನ್ ವಾಸ: ಬೆಲವಾ ಘಾಟ್ ಸ್ಕೂಲ್ ತೊಲ ಬೇಲವರ್ ಘಾಟ್ ಗೈಯಾಡಿ ಅರಾರಿ ಜಿಲ್ಲೆ ಬಿಹಾರ ರಾಜ್ಯ ಪ್ರಸ್ತುತ್ತಾ ಶಿಕಾಡಿ ಪಾಳ್ಯ ಗೊನ್ನಳ್ಳಿ ರೋಡ್ ಬೆಂಗಳೂರು.
9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೊಲೆ ಆರೋಪಿ ಬಂಧನ:
2006ರಲ್ಲಿ ನಡೆದ ವಿದ್ಯಾರಾಜ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಸುಮಾರು 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಉಮೇಶ್ ಯಾನೆ ಉಮ್ಮುವನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ಧಾರೆ ಎಂದು ಮುರುಗನ್ ಈ ಸಂದರ್ಭದಲ್ಲಿ ಹೇಳಿದರು.
ಕೊಲೆ ಪ್ರಕರಣ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಬೇಕಾಗಿದ್ದ ಉಮೇಶ್ ಯಾನೆ ಉಮ್ಮುವನ್ನು ಖಚಿತ ಮಾಹಿತಿ ಮೇರೆಗೆ ನಂತೂರು ಬಸ್ ನಿಲ್ದಾಣದ ಬಳಿ ಬಂಧಿಸಲಾಗಿದೆ. ಈತ ಹುಬ್ಬಳಿಯ ಹೊಟೇಲ್ವೊಂದರಲ್ಲಿ ಕೆಲಸ ಮಾಡುವ ನೆಪದಲ್ಲಿ ತಲೆಮರೆಸಿಕೊಂಡಿದ್ದ ಎಂದು ಕಮಿಷನರ್ ವಿವರ ನೀಡಿದರು.
ವಿದ್ಯಾರಾಜ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳ ಪೈಕಿ ಸಂದೀಪ್ ಶೆಟ್ಟಿ ಎಂಬತನನ್ನು ನಾಲ್ಕು ವರ್ಷದ ಹಿಂದೆ ಆತನ ಮನೆಯ ಬಳಿಯಲ್ಲೇ ಚೋನಿ ಯಾನೆ ಕೇಶವ ಪೂಜಾರಿ ಮತ್ತು ಇತರರು ಸೇರಿ ಕೊಲೆ ಮಾಡಿದ್ದರು. ಇದೀಗ ಉಮೇಶ್ ಅಲಿಯಾಸ್ ಉಮ್ಮುವನ್ನು ಮುಂದಿನ ಕ್ರಮಕ್ಕಾಗಿ ಮಂಗಳೂರು ಉತ್ತರ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ ಎಂದು ಹೇಳಿದರು.
ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಎಸ್.ಮುರುಗನ್ ಐ.ಪಿ.ಎಸ್, ಡಿ.ಸಿ.ಪಿ ವಿಷ್ಣುವರ್ಧನ್.ಎನ್ ರವರ ಮಾರ್ಗದರ್ಶನದಂತೆ ಮಂಗಳೂರು ಸಿಸಿಬಿ ಘಟಕದ ಇನ್ಸ್ಪೆಕ್ಟರ್ ವೆಲೆಂಟೈನ್ ಡಿ’ಸೋಜ ಹಾಗೂ ಪಿ.ಎಸ್.ಐ ಶ್ಯಾಮ್ ಸುಂದರ್ ಮತ್ತು ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು ಎಂದು ಅಯುಕ್ತರು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಡಿಸಿಪಿ ವಿಷ್ಣುವರ್ಧನ್ ಉಪಸ್ಥಿತರಿದ್ದರು.