ಸುರತ್ಕಲ್,ಮೇ.16 : ಸುರತ್ಕಲ್ ಸಮೀಪದ ಖಂಡಿಗೆ ಶ್ರೀ ಧರ್ಮರಸು ಉಳ್ಳಾಯ ದೈವಸ್ಥಾನದ ಜಾತ್ರಾ ಮಹೋತ್ಸವದಂದು ನಡೆಯುವ ಮೀನು ಹಿಡಿಯುವ ಕಾರ್ಯಕ್ರಮ ಅತೀ ವಿಜೃಂಭಣೆಯಿಂದ ನಡೆಯಿತು. ತುಳುನಾಡಿನಲ್ಲಿ ಹೆಸರಾಂತ ಎರ್ಮಾಳು ಜೆಪ್ಪು ಖಂಡೇವು ಅಡೆಪು ನಾಣ್ಣುಡಿ ಜಾರಿಯಲ್ಲಿದೆ. ಉಡುಪಿ ಜಿಲ್ಲೆಯ ಎರ್ಮಾಳು ದೇವಳದಲ್ಲಿ ಜಾತ್ರೆ ಪ್ರಾರಂಭಗೊಳ್ಳುವ ಮೂಲಕ ಅವಿಭಜಿತ ದ.ಕ. ಜಿಲ್ಲೆಯಲ್ಲಿ ತುಳು ನಾಡಿನ ಜಾತ್ರೆಗಳು ಪ್ರಾರಂಭಗೊಂಡು ಖಂಡಿಗೆ ಶ್ರೀ ಧರ್ಮರಸು ಕ್ಷೇತ್ರದ ಜಾತ್ರೆಯ ದಿನ ಜಾತ್ರೆ, ನೇಮಗಳು ಮುಕ್ತಾಯಗೊಳ್ಳುತ್ತದೆ.
ಚೇಳಾಯರು ಗ್ರಾಮದ ಖಂಡಿಗೆಯ ಇತಿಹಾಸ ಪ್ರಸಿದ್ಧ ಶ್ರೀ ಧರ್ಮರಸು ಕ್ಷೇತ್ರವು ಪಾವಂಜೆಯ ರಾಷ್ಟ್ರೀಯ ಹೆದ್ದಾರಿಯ ಸೇತುವೆ ಸಮೀಪ ನಂದಿನಿ ನದಿಯ ತಟದಲ್ಲಿದ್ದು ದೈವಸ್ಥಾನದಲ್ಲಿ ವರ್ಷಾವಧಿ ಜಾತ್ರೆ ಪ್ರತಿ ವರ್ಷ ಮೇ ವೃಷಭ ಸಂಕ್ರಮಣದಂದು ನಡೆಯುತ್ತದೆ. ಈ ನದಿಯಲ್ಲಿ ಮೀನು ಹಿಡಿಯುವ ಪದ್ದತಿ ಬೃಹತ್ ಮಟ್ಟದಲ್ಲಿ ನಡೆಯುವುದು ವಾಡಿಕೆ. ಮೇಷ ಸಂಕ್ರಮಣ ದಿಂದ ವ್ರಷಭ ಸಂಕ್ರಮಣದ ತನಕ ಇಲ್ಲಿ ಮೀನು ಹಿಡಿಯಲು ನಿಷೇದವಿದೆ, ಈ ಹಿಂದೆ ಇದನ್ನು ಮೀರಿ ಈ ನಡುವೆ ಇಲ್ಲಿ ಮೀನು ಹಿಡಿದ ಪರಿಣಾಮ ಮೀನು ಹಿಡಿಯುತ್ತಿದ್ದ ಬಲೆಯಲ್ಲಿ ನಾಗರಹಾವೂ ಬಂಧ ಉದಾಹರಣೆಗಳಿವೆ.
ಅಂದು ಬೆಳಿಗ್ಗೆ 7 ರ ಸುಮಾರಿಗೆ ದೈವಸ್ಥಾನದಲ್ಲಿ ದೈವಸ್ಥಾನಕ್ಕೆ ಸಂಭಂದ ಪಟ್ಟವರು ದೈವಕ್ಕೆ ಪ್ರಾಥನೆ ಸಲ್ಲಿಸಿ ನಂದಿನಿ ನದಿಯ ದಡಕ್ಕೆ ಆಗಮಿಸಿ ನದಿಗೆ ಪ್ರಸಾದ ಹಾಕಲಾಗುತ್ತದೆ ಅದೇ ಸಂದರ್ಭ ಸುಡು ಮದ್ದು ಸಿಡಿದ ತಕ್ಷಣ ಬಂದ ಜನರು ನದಿಗೆ ಧುಮುಕಿ ಮೀನು ಹಿಡಿಯಲು ತೊಡಗುತ್ತಾರೆ.
ವಿಶೇಷವೆಂದರೆ 50-60 ಕಿ.ಲೋ ಮೀಟರ್ ದೂರದಿಂದಲೂ ಇಲ್ಲಿ ಮೀನು ಹಿಡಿಲು ಜನರು ಆಗಮಿಸುತ್ತಾರೆ, ಹಿಡಿದ ಮೀನನ್ನು ಮನೆಗೆ ತೆಗೆದು ಕೊಂಡು ಹೋಗಿ, ಸತ್ತ ತಮ್ಮ ಪ್ರೇತಾತ್ಮಗಳಿಗೆ ಬಡಿಸುವ ಕ್ರಮ ಇಲ್ಲಿಯದು, ಇದು ಈಗಲೂ ಹೆಚ್ಚಿನ ಮನೆಗಳಲ್ಲಿ ಆಚರಿಸಿಕೊಂಡೂ ಬರುತ್ತಿದ್ದಾರೆ, ಕೆಲವರು ವ್ಯಾಪಾರದ ದ್ರಷ್ಟಿಯಿಂದ ಇಲ್ಲಿ ಹಿಡಿದ ಮೀನನ್ನು ಇಲ್ಲಿಯೇ ಮಾರುತ್ತಾರೆ. ವರ್ಷದಲ್ಲಿ ಒಂದು ದಿನ ಇಲ್ಲಿನ ಮೀನನ್ನು ಪದಾರ್ಥ ಮಾಡಿ ತಿನ್ನುವುದೇ ಇಲ್ಲಿನ ದೈವದ ಪ್ರಸಾದವೆಂದು ಇಲ್ಲಿನ ಭಕ್ತರು ನಂಬುವುದರಿಂದ ಜಾತ್ರೆಗೆ ವಿಶೇಷ ಪ್ರಾಮುಖ್ಯತೆ ದೊರೆತಿದೆ. ಕ್ಷೇತ್ರದಲ್ಲಿ ರಾತ್ರಿ ನೇಮೋತ್ಸವ ನಡೆದು ಬಳಿಕ ಧ್ವಜಾವರೋಹಣ ನಡೆಯುತ್ತದೆ ಅಲ್ಲಿಗೆ ತುಳುನಾಡಿನಲ್ಲಿ ಹೆಚ್ಚಿನ ಜಾತ್ರೆ, ನೇಮೋತ್ಸವಗಳು ಅಂತ್ಯಗೊಳ್ಳುತ್ತಿದೆ. ಏನೇ ಆಗಲಿ ಆಧುನಿಕ ಯುಗದಲ್ಲೂ ಇಂತಹ ಸಂಸ್ಕ್ರತಿಯೊಂದು ನಡೆದುಕೊಂಡು ಬರುತಿರುದು ವಿಶೇಷವೇ ಸರಿ.