ಕುಂದಾಪುರ: ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ಸರಕಾರಿ ನೌಕರಿಯಲ್ಲಿರುವ ಯುವತಿಯನ್ನು ವಿವಾಹವಾಗುವುದಾಗಿ ನಂಬಿಸಿ, ಆಕೆಯಿಂದ ಎರಡು ಲಕ್ಷ ರೂ. ಹಣ ಪಡೆದು ಆಕೆಯ ವಸತಿಗೃಹದಲ್ಲಿ ಆಕೆಯ ಶೀಲಹರಣ ಮಾಡಿ ನಂತರ ವಂಚಿಸಿ ಇನ್ನೊಬ್ಬಳೊಂದಿಗೆ ವಿವಾಹವಾದ ಕುಂದಾಪುರ ಮೂಲದ ರಾಘವೇಂದ್ರನಿಗೆ ಧಾರವಾಡ ನ್ಯಾಯಾಲಯ ಶರ್ತಬದ್ಧ ಜಾಮೀನು ನೀಡಿದೆ.
ಆರೋಪಿಯು ಸುಮಾರು 5 ತಿಂಗಳಿನಿಂದ ಧಾರವಾಡದ ಕಾರಾಗೃಹದಲ್ಲಿದ್ದು, ಈ ಹಿಂದೆ ಆತನ ಜಾಮೀನು ಅರ್ಜಿಯು ಧಾರವಾಡದ ಉಚ್ಚ ನ್ಯಾಯಾಲಯದಲ್ಲಿ ವಜಾಗೊಂಡಿತ್ತು. ದೂರುದಾರ ಯುವತಿ ಆರೋಪಿಯ ವಿರುದ್ಧ ಎರಡು ಪ್ರತ್ಯೇಕ ಪ್ರಕರಣಗಳನ್ನು ಕಲಘಟಗಿ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದು. ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ ತನಿಖೆ ನಡೆಸಿದ್ದರು.
ಧಾರವಾಡದ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶ ಹೊಸಮನಿ ಸಿದ್ದಪ್ಪ ಎಚ್. ಅವರು ಜಾಮೀನು ಆದೇಶ ನೀಡಿದ ಎರಡು ಪ್ರಕರಣಗಳಲ್ಲಿ ಆರೋಪಿಗೆ ಜಾಮೀನು ಕೋರಿ ಕುಂದಾಪುರ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ಅವರು ವಾದಿಸಿದ್ದರು.