ಕುಂದಾಪುರ: ಸುಮಾರು ಇಪ್ಪತ್ತೈದು ಜನರ ತಂಡವೊಂದು ರಸ್ತೆಯಲ್ಲಿಯಲ್ಲಿಯೇ ಕ್ಯಾಮೆರಾ, ಕುರ್ಚಿ ಹಾಕಿ ಕುಳಿತುಕೊಳ್ಳುವ ಮೂಲಕ ಗೆರುವಾರ ಮಧ್ಯಾಹ್ನದಿಂದ ಸಂಜೆಯವರೆಗೆ ಕುಂದಾಪುರದ ಮುಖ್ಯ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ಥಗೊಂಡ ಪರಿಣಾಮ ಸ್ಥಳಕ್ಕಾಗಮಿಸಿದ ಸಂಚಾರಿ ಪೊಲೀಸರು ತಂಡವನ್ನು ರಸ್ತೆಯಿಂದ ಹೊರಕ್ಕೆ ಕಳುಹಿಸಿದ ಘಟನೆ ನಡೆದಿದೆ.
ವಾರಿಯರ್ ಎನ್ನುವ ಚಲನಚಿತ್ರವೊಂದನ್ನು ಚಿತ್ರೀಕರಿಸಲು ತಂಡವೊಂದು ಕುಂದಾಪುರಕ್ಕೆ ಗುರುವಾರ ಆಗಮಿಸಿತ್ತು. ಈ ಸಂಬಂಧ ಚಿತ್ರೀಕರಣ ತಂಡದ ಮ್ಯಾನೇಜರ್ ಕುಂದಾಪುರ ಠಾಣೆಯಲ್ಲಿ ಮೌಖಿಕ ಅನುಮತಿ ಪಡೆದುಕೊಂಡಿದ್ದು, ಈ ಸಂದರ್ಭ ಯಾವುದೇ ಸಂಚಾರಕ್ಕೆ ಅಡಚಣೆ ಉಂಟುಮಾಡುವುದಿಲ್ಲ ಎನ್ನುವ ಭರವಸೆ ನೀಡಿದ್ದರು.
ಆದರೆ ಗುರುವಾರ ಮಧ್ಯಾಹ್ನದಿಂದ ಆರಂಭಗೊಂಡ ಚಿತ್ರೀಕರಣದ ಸಂದರ್ಭ ರಸ್ತೆಯಲ್ಲಿ ಬರುತ್ತಿದ್ದ ವಾಹನಗಳನ್ನು ತಡೆದು ಬದಿಗೆ ಸರಿಯಿರಿ ಎನ್ನುತ್ತಿದ್ದ ಚಿತ್ರೀಕರಣದ ತಂಡದಿಂದ ಸುಮಾರು ಮೂರು ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ಥವಾಗಿತ್ತು. ಇದೇ ಸಂದರ್ಭ ದಾರಿಹೋಕರೂ ಚಿತ್ರೀಕರಣವನ್ನು ವೀಕ್ಷಿಸಲು ಜಮಾಯಿಸಿದ್ದು ಸಂಚಾರಕ್ಕೆ ತೊಂದರೆಯುಂಟಾಯಿತು.
ಈ ಸಂದರ್ಭ ಸ್ಥಳಕ್ಕಾಗಮಿಸಿದ ಸಂಚಾರಿ ಪೊಲೀಸರು ಚಿತ್ರೀಕರಣದ ಅನುಮತಿ ಪತ್ರ ಕೇಳಿದಾಗ ತಂಡ ತಬ್ಬಿಬ್ಬಾಗಿದ್ದು, ತಕ್ಷಣ ಅಲ್ಲಿಂದ ಜಾಗ ಖಾಲಿ ಮಾಡಿದೆ.