ಕನ್ನಡ ವಾರ್ತೆಗಳು

ಮಂಗಳೂರಿನಿಂದ ಮಲೇರಿಯಾ ನಿರ್ಮೂಲನೆಗೆ ಯೋಜನೆ ರೂಪಿಸಿ : ಎ.ಬಿ.ಇಬ್ರಾಹಿಂ

Pinterest LinkedIn Tumblr

malriy_press_meet

ಮಂಗಳೂರು,ಮೇ.14: ಮಂಗಳೂರು ನಗರದಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡ ಕಾಮಗಾರಿ ಕೆಲಸಗಳಿಗೆ ರಾಜ್ಯದ ಹಾಗೂ ಇತರೆ ರಾಜ್ಯಗಳ ಕೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಇಲ್ಲಿಯ ಪರಿಸರ ಮಾಲಿನ್ಯದಿಂದಾಗಿ ಈ ಕಟ್ಟಡ ಕಾರ್ಮಿಕರಲ್ಲಿ ಮಲೇರಿಯಾ ಪ್ರಕರಣಗಳು ಹೆಚ್ಚುತ್ತಿದ್ದು ಇವರಿಂದಾಗಿ ಮಂಗಳೂರು ನಗರದಲ್ಲಿ ಮಲೇರಿಯಾ ರೋಗ ನಿಯಂತ್ರಣಕ್ಕೆ ಸಿಲುಕದಷ್ಟು ಪರಿಸ್ಥಿತಿ ಉಂಟಾಗುತ್ತಿರುವ ಬಗ್ಗೆ ಜಿಲ್ಲಾಡಳಿತ ಆತಂಕಗೊಂಡಿದ್ದು, ಈ ಬಗ್ಗೆ ಪರಿಣಾಮಕಾರಿ ಯೋಜನೆಗಳನ್ನು ರೂಪಿಸುವ ಮೂಲಕ ಮಲೇರಿಯಾ ರೋಗವನ್ನು ಮಂಗಳೂರಿನಿಂದ ಹಾಗೂ ಜಿಲ್ಲೆಯಿಂದ ನಿರ್ಮೂಲನೆ ಮಾಡಬೇಕೆಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಅವರು ಗುರುವಾರ ತಮ್ಮ ಕಛೇರಿಯಲ್ಲಿ ಜರುಗಿದ ಮಂಗಳೂರಿನಲ್ಲಿ ಮಲೇರಿಯಾ ನಿಯಂತ್ರಣ ಕುರಿತ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಂದುವರೆದು ಮಾತನಾಡಿದ ಜಿಲ್ಲಾಧಿಕಾರಿಗಳು, ಮಲೇರಿಯಾ ನಿಯಂತ್ರಣಕ್ಕಾಗಿ ಯುದ್ದವನ್ನೇ ಸಾರಬೇಕು. ಮಂಗಳೂರು ನಗರದಲ್ಲಿ ಕಾರ್ಯಾಚರಿಸುತ್ತಿರು ವ  80 ಕ್ಕೂ ಹೆಚ್ಚು ಪ್ರಯೋಗಶಾಲೆ(ಲ್ಯಾಬ್)ಗಳಲ್ಲಿ ಕೈಗೊಳ್ಳುವ ರಕ್ತ ಪರೀಕ್ಷೆಗಳ ನಿಖರ ವರದಿಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ತಲುಪಿಸುವ ವ್ಯವಸ್ಥೆಗೆ ನೂತನ ತಂತ್ರಜ್ಙಾನವನ್ನು ಅಳವಡಿಸಿಕೊಳ್ಳಲು ಸೂಚಿಸಿದರು.

ಜಿಲ್ಲೆಯಲ್ಲಿ 2014 ನೇ ಸಾಲಿನಲ್ಲಿ 3,42,758 ಜನರ ರಕ್ತ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ಮಾಡಿ 1432 ಮಂದಿಯಲ್ಲಿ ಮಲೇರಿಯಾ ಸೋಂಕು ಕಂಡುಬಂದಿತ್ತು, ಇದೇ ಅವಧಿಯಲ್ಲಿ ಮಂಗಳೂರು ನಗರದಲ್ಲಿ 70,968 ಮಂದಿಯ ರಕ್ತ ಮಾದರಿಗಳನ್ನು ಪರೀಕ್ಷಿಸಿ 7360 ಮಂದಿಯಲ್ಲಿ ಮಲೇರಿಯಾ ಸೋಂಕು ಪತ್ತೆ ಹಚ್ಚಲಾಗಿತ್ತು, 2015 ರ ಎಪ್ರಿಲ್ ವರೆಗೆ ಜಿಲ್ಲೆಯಲ್ಲಿ 90,989 ಜನರ ರಕ್ತ ಮಾದರಿಗಳನ್ನು ಸಂಗ್ರಹಿಸಿದ್ದು ಪರೀಕ್ಷಿಸಲಾಗಿ ಅವರಲ್ಲಿ 1432 ಮಲೇರಿಯಾ ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ. ಈ ಅವಧಿಯಲ್ಲಿ ಮಂಗಳೂರು ನಗರದಲ್ಲಿ 22,342 ಜನರ ರಕ್ತ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಿಸಿದ ಮೇರೆಗೆ  1296 ಜನರಲ್ಲಿ ಮಲೇರಿಯಾ ಲಕ್ಷಣಗಳು ಕಂಡುಬಂದಿದ್ದವು ಎಂದುಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ||ಅರುಣಕುಮಾರ್ ಸಭೆಗೆ ಮಾಹಿತಿ ನೀಡಿದರು. 2015 ರ ಜನವರಿ – ಏಪ್ರಿಲ್ ವರೆಗೆ ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ 1 , ಫಾದರ್‌ಮುಲ್ಲ್‌ರ್ ಅಸ್ಪತ್ರೆಯಲ್ಲಿ 1 , ಮತ್ತು ಕೆ.ಎಂ.ಸಿ. ಯಲ್ಲಿ 2  ಸೇರಿ ಒಟ್ಟ 4  ಮಲೇರಿಯಾ ರೋಗಿಗಳು ಮರಣಿಸಿರುತ್ತಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ||ರಾಮಕೃಷ್ಣರಾವ್ ತಿಳಿಸಿದರು.

ಮಂಗಳೂರು ಮಹಾನಗರಪಾಲಿಕೆಯಲ್ಲಿ ಶೇ.2.2%ರಷ್ಟು ಮಲೇರಿಯಾ ಪ್ರಕರಣಗಳು ಕಡಿಮೆಯಾಗಿದೆ ಎಂದು ಮಹಾನಗರಪಾಲಿಕೆ ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಐ.ಶ್ರೀವಿದ್ಯಾ, ಮಹಾನಗರಪಾಲಿಕೆ ಗೋಪಾಲದಾಸ ನಾಯಕ್ ಮುಂತಾದವರು ಹಾಜರಿದ್ದರು.

Write A Comment