ಮಂಗಳೂರು,ಮೇ.13: ಸಾಂಕ್ರಾಮಿಕ ರೋಗ ತಡೆಗೆ ಜನಸಹಭಾಗಿತ್ವ ಅಗತ್ಯವಾಗಿ ಬೇಕಾಗಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ತಿಳಿಸಿದ್ದಾರೆ.
ಅವರು ನಗರದ ಲೇಡಿಗೋಶನ್ ಆಸ್ಪತ್ರೆಗೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಸ್ಥಳೀಯ ಸಂಸ್ಥೆಗಳು, ಜಿ.ಪಂ. ಹಾಗೂ ನಗರಾಡಳಿತ ಸಂಸ್ಥೆಗಳ ಜೊತೆ ಜನಸಾಮಾನ್ಯರು ಹಾಗೂ ಸಂಘ ಸಂಸ್ಥೆಗಳ ಸಹಕಾರ ಅಗತ್ಯ ಎಂದ ಅವರು, ಲೇಡಿಗೋಶನ್ ಆಸ್ಪತ್ರೆಯಲ್ಲಿ ದಾದಿಯರ ಸಂಖ್ಯೆ ಕಡಿಮೆ ಇದೆ ಶೇ.50ರಷ್ಟು ದಾದಿಯರ ಕೊರತೆ ಇದೆ. ಈ ಹಿನ್ನೆಲೆಯಲ್ಲಿ ಕೊರತೆ ಸರಿಪಡಿಸಲು ಪ್ರಸಕ್ತ ವೆನ್ಲಾಕ್ನಲ್ಲಿ ನರ್ಸಿಂಗ್ ಶಿಕ್ಷಣ ಪೂರ್ಣ ಗೊಳಿಸಿದವರನ್ನು ಸ್ಟೈಪೆಂಡ್ ನೀಡಿ ನೇಮಿಸಿಕೊಳ್ಳುವ ಮೂಲಕ ತಾತ್ಕಾಲಿಕ ವಾಗಿ ಸಮಸ್ಯೆಯನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು. ಪ್ರಸಕ್ತ ಲೇಡಿ ಗೋಶನ್ ಆಸ್ಪತ್ರೆಯಲ್ಲಿ ಜಿಲ್ಲೆ ಯಲ್ಲಾಗುತ್ತಿರುವ ಹೆರಿಗೆಯಲ್ಲಿ ಶೇ.30ರಷ್ಟು ಹೆರಿಗೆ ನಡೆಯುತ್ತಿರುವುದರಿಂದ ಆಸ್ಪತ್ರೆಯ ಮೇಲೆ ಹೆಚ್ಚಿನ ಹೊರೆ ಬೀಳುತ್ತಿದೆ. ಈಗ ಸ್ವಲ್ಪಮಟ್ಟಿನ ದಾದಿಯರ ಕೊರತೆ ಇದೆ. ಆದರೆ ಪ್ರಸಕ್ತ ಲೇಡಿಗೋಶನ್ ಹಾಗೂ ಕೆಎಂಸಿಯ ದಾದಿಯರ ಮೂಲಕ ನಿರ್ವಹಿಸಲಾಗುತ್ತಿದೆ ಎಂದು ಸಚಿವ ಯು.ಟಿ.ಖಾದರ್ ತಿಳಿಸಿದರು.
ಪ್ರಸಕ್ತ ಲೇಡಿ ಗೋಶನ್ ಆಸ್ಪತ್ರೆಯಲ್ಲಿ ಗೈನೊಕಾಲಜಿಸ್ಟ್ ಹಾಗೂ ಮಕ್ಕಳ ತಜ್ಞರ ತಂಡ ಕಾರ್ಯನಿರ್ವಹಿಸುತ್ತಿದೆ. ಇತ್ತೀಚೆಗೆ ಕಳೆದ ಒಂದೂವರೆ ತಿಂಗಳಲ್ಲಿ ಐದು ಸಾವು ಸಂಭವಿಸಿದ ಹಿನ್ನೆಲೆಯಲ್ಲಿ ಪ್ರಕರಣವನ್ನು ಸರಕಾರ ಗಂಭೀರವಾಗಿ ಪರಿಗಣಿಸಿದೆ. ಈ ಬಗ್ಗೆ ತಜ್ಞರ ತಂಡವನ್ನು ಕಳುಹಿಸಿ ವರದಿ ನೀಡಲು ಸೂಚಿಸಲಾಗಿದೆ. ವರದಿ ಬಂದ ಬಳಿಕ ಈ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಖಾದರ್ ತಿಳಿಸಿದರು.
ಲೇಡಿಗೋಶನ್ ಹಾಗೂ ವೆನ್ಲಾಕ್ ನಡುವಿನ ವೈದಾಧಿಕಾರಿ ವರ್ಗಾವಣೆ ಆಡಳಿತಾತ್ಮಕ ಕಾರಣಗಳಿಗಾಗಿ ನಡೆದಿದೆ ಹೊರತು ಬೇರೆ ಉದ್ದೇಶವಿರಲಿಲ್ಲ ಎಂದು ಖಾದರ್ ತಿಳಿಸಿದ್ದಾರೆ. ಈ ಸಂದರ್ಭ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ, ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀವಿದ್ಯಾಹಾಗೂ ಜಿಲ್ಲಾ ಆರೋಗ್ಯಾಧಿಕಾರಿ, ವೆನ್ಲಾಕ್ ಹಾಗೂ ಲೇಡಿಗೋಶನ್ ಆಸ್ಪತ್ರೆಯ ಅಧಿಕಾರಿಗಳು ಉಪಸ್ಥಿತರಿದ್ದರು.