ಮಂಗಳೂರು,ಮೇ.07: ರಾಷ್ಟ್ರೀಯ ಹೆದ್ದಾರಿ 234ರಲ್ಲಿ ಮರಳು ಸಾಗಾಟದ ಲಾರಿಗಳೆರಡು ಪರಸ್ಪರ ಢಿಕ್ಕಿ ಹೊಡೆದು ಲಾರಿ ಚಾಲಕನೋರ್ವ ಗಂಭೀರ ಗಾಯಗೊಂಡ ಘಟನೆ ಬುಧವಾರ ಬೆಳಗ್ಗೆ ನಡೆದಿದೆ . ಅಪಘಾತದ ತೀವ್ರತೆಗೆ ಗೂಡ್ಸ್ ಲಾರಿಯ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಈ ಸಂದರ್ಭ ಲಾರಿಯ ಚಾಲಕನಿಗೆ ಗಂಭೀರ ಸ್ವರೂಪದ ಗಾಯವಾಗಿದ್ದು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಿ.ಸಿ.ರೋಡ್ ಕಡೆಯಿಂದ ಮರಳು ಹೇರಿಕೊಂಡು ಕಡೂರು ಕಡೆ ಸಾಗುತ್ತಿದ್ದ ಲಾರಿಗೆ ಎದುರು ಭಾಗದಿಂದ ಬಂದ ಮರಳು ಸಾಗಾಟದ ಖಾಲಿ ಲಾರಿ ಢಿಕ್ಕಿ ಹೊಡೆದಿತ್ತು . ಅಪಘಾತದಲ್ಲಿ ಕಡೂರು ಕಡೆ ಸಾಗುತ್ತಿದ್ದ ಲಾರಿ ಚಾಲಕ ಗಂಭೀರ ಗಾಯಗೊಂಡಿದ್ದು ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಸಾಗಿಸಲಾಗಿದ್ದು ಇನ್ನೋರ್ವ ಚಾಲಕ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾನೆ ಎಂದು ತಿಳಿದುಬಂದಿದೆ. ಗಾಯಾಳು ಲಾರಿ ಚಾಲಕ ಕಡೂರು ನಿವಾಸಿಯಾಗಿದ್ದು ಹೆಚ್ಚಿನ ವಿವರ ಲಭ್ಯವಿಲ್ಲ . ಅಪಘಾತಕ್ಕೆ ಲಾರಿಗಳೆರಡು ರಸ್ತೆ ಮಧ್ಯದಲ್ಲಿ ನಿಂತ ಪರಿಣಾಮ ರಸ್ತೆತಡೆ ಉಂಟಾಗಿತ್ತು . ಬಳಿಕ ರಸ್ತೆ ಬದಿಯಿಂದ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ಮರಳು ಸಾಗಾಟದ ಲಾರಿ ಚಾಲಕನ ಅವಸರವೇ ಈ ಅಪಘಾತಕ್ಕೆ ಕಾರಣವೆಂದು ಸ್ಥಳೀಯರು ತಿಳಿಸಿದ್ದಾರೆ. ಘಟನೆ ಕುರಿತು ಬಂಟ್ವಾಳ ಟ್ರಾಫಿಕ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.