ಮಂಗಳೂರು,ಮೇ.07 : ಭಾರತ ಸೇವಾದಳ ವತಿಯಿಂದ ಸೇವಾದಳದ ಸ್ಥಾಪಕ ದಿ| ಡಾ. ನಾ. ಸು. ಹರ್ಡೀಕರ್ರವರ 126ನೇ ಜನ್ಮದಿನಾಚರಣೆಯನ್ನು ಕಂಕನಾಡಿಯಲ್ಲಿರುವ ಚೆಶೈರ್ಹೋಮ್ ಆಶ್ರಮದಲ್ಲಿ ಆಚರಿಸಲಾಯಿತು.
ಡಾ. ಹರ್ಡೀಕರ್ರವರು ಶಿಸ್ತಿಗೆ ಹೆಸರಾದವರು ಅವರು ತನ್ನ ಜೀವನದುದ್ದಕ್ಕೂ ಶಿಸ್ತನ್ನು ಅಳವಡಿಸಿಕೊಂಡ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಬಡವರಿಗೆ, ನಿರ್ಗತಿಕರಿಗೆ ತುಂಬಾ ಸಹಾಯ ಮಾಡಿದ್ದರು. ಸ್ವಾತಂತ್ರ್ಯ ಹೋರಾಟ ಸಮಯದಲ್ಲಿ ಲಕ್ಷಾಂತರ ಯುವಕರು ಪಾಲ್ಗೊಂಡಿದ್ದ ವೇಳೆಯಲ್ಲಿ ಎಲ್ಲರಲ್ಲೂ ಶಿಸ್ತಿನ ಪರಿಪಾಠವನ್ನು ಹೇಳಿಕೊಡುತ್ತಿದ್ದರು. ಅವರ ಸೇವೆ ನಮಗೆಲ್ಲರಿಗೂ ಮಾರ್ಗದರ್ಶನವಾಗಿದೆ ಎಂದು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಂಗಳೂರು ಮ.ನ.ಪಾ ಮೇಯರ್ ಶ್ರೀಮತಿ ಜೆಸಿಂತಾ ಅಲ್ಫ್ರೇಡ್ರವರು ಹೇಳಿದರು.
ಕಾರ್ಯಕ್ರಮದಲ್ಲಿ ತಾಲೂಕು ಅಧ್ಯಕ್ಷ ಪ್ರಭಾಕರ ಶ್ರೀಯಾನ್, ಸಿಸ್ಟರ್ ಥೆರೆಸಿಟಾ, ಕಾರ್ಪೋರೇಟರ್ ಆಶಾ ಡಿ’ಸಿಲ್ವ, ಕಾರ್ಯದರ್ಶಿ ಉದಯ ಕುಂದರ್, ಸುರೇಶ್ ಶೆಟ್ಟಿ, ಸುನೀಲ್ ದೇವಾಡಿಗ, ಪ್ರೇಮಚಂದ್ರ, ಮೋಹನದಾಸ್ ಕೊಟ್ಟಾರಿ ಮೊದಲಾದವರು ಉಪಸ್ಥಿತರಿದ್ದರು. ಆಶ್ರಮದಲ್ಲಿ ವಾಸಿಸುತ್ತಿರುವ ಆಶ್ರಮವಾಸಿಗಳಿಗೆ ಈ ಸಂದರ್ಭದಲ್ಲಿ ಹಣ್ಣು ಹಂಪಲುಗಳನ್ನು ವಿತರಿಸಲಾಯಿತು. ಜಿಲ್ಲಾ ಕಾರ್ಯದರ್ಶಿ ಟಿ.ಕೆ. ಸುಧೀರ್ ಸ್ವಾಗತಿಸಿ, ಸಂಘಟಕ ಮಂಜೇಗೌಡ ವಂದಿಸಿದರು.