ಬೆಳ್ತಂಗಡಿ,ಮೇ.05 : ತಾಲೂಕು ಪಂಚಾಯತ್ನ ಕೆಡಿಪಿ ಸಭೆಯಲ್ಲಿ ಮರಳು ಲಾರಿಗಳ ಅಟ್ಟಹಾಸದ ಬಗ್ಗೆ ಚರ್ಚೆಯಾದ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಕಂದಾಯ ಇಲಾಖೆಯ ಅಧಿಕಾರಿಗಳು ಸೋಮವಾರ 15 ಮರಳು ಲಾರಿಗಳನ್ನು ವಶಕ್ಕೆ ತೆಗೆದುಕೊಂಡಿ ದ್ದಾರೆ. ಬೆಳ್ತಂಗಡಿ ಮುಖ್ಯರಸ್ತೆಯಲ್ಲಿ ಸಾಗುತ್ತಿದ್ದ ಮರಳು ಸಾಗಿಸುತ್ತಿದ್ದ ಲಾರಿಗಳನ್ನು ಇಲಾಖಾಧಿಕಾರಿಗಳು ತಡೆದು ಪರಿಶೀಲನೆ ನಡೆಸಿದ್ದಾರೆ. ಅಧಿಕ ಭಾರ ಕಂಡುಬಂದ 15 ಲಾರಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
ಮರಳು ಲಾರಿಗಳ ಸಂಚಾರ ದಿನದಿಂದ ದಿನಕ್ಕೆ ವಿಪರೀತವಾಗುತ್ತಿದೆ. ಈಗಾಲೇ ಹೆಚ್ಚು ದಟ್ಟಣೆಯಿಂದ ಕೂಡಿರುವ ಗುರುವಾಯನಕರೆಯಿಂದ ಉಜಿರೆಯ ತನಕದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮರಳು ಲಾರಿಗಳ ಸೇರ್ಪಡೆಯಿಂದಾಗಿ ಸಂಚಾರದ ಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ. ಲಾರಿಗಳ ಹಿಂದಿನಿಂದ ಹೋಗುವ ದ್ವಿಚಕ್ರ ವಾಹನ ಸವಾರರಿಗೆ ಮರಳು ಮಿಶ್ರಿತ ಧೂಳಿನ ಸ್ನಾನ ನಿಶ್ಚಿತ. ಅಂತೂ ಶಿರಾಡಿ ಘಾಟಿ ಸಂಚಾರ ಮುಕ್ತವಾ ಗುವವರೆಗೆ ಇದು ಮುಂದುವರಿಯಲಿದೆ ಎನ್ನಲಾಗುತ್ತಿದೆ.