ಕುಂದಾಪುರ: ಬೈಕ್ ಸ್ಕಿಡ್ ಆಗಿ ಸವಾರ ರಸ್ತೆಗೆ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟ ಘಟನೆ ಕೊಲ್ಲೂರು ಪೊಲೀಸ್ ಠಾಣೆ ವ್ಯಾಪ್ತಿಯ ಜಡ್ಕಲ್ ಸಮೀಪದ ಮುದೂರು ಎಂಬಲ್ಲಿ ಸೋಮವಾರ ನಡೆದಿದೆ.
ಮುದೂರು ನಿವಾಸಿ ಗೋಪಾಲ್ ಎನ್ನುವವರ ಪುತ್ರ ಸಂತೋಷ್ (29) ಎನ್ನುವವರೇ ಮೃತಪಟ್ಟ ದುರ್ದೈವಿಯಾಗಿದ್ದಾರೆ.
ಘಟನೆ ವಿವರ: ಕೂಲಿ ಕೆಲಸ ಮಾಡಿಕೊಂಡಿದ್ದ ಸಂತೋಷ್ ಅವರು ಸೋಮವಾರ ಮಧ್ಯಾಹ್ನ ಕೆಲಸ ಮುಗಿಸಿ ಊಟಕ್ಕಾಗಿ ಮನೆಗೆ ಬರುವ ವೇಳೆಯಲ್ಲಿ ಬೈಕ್ ಸ್ಕಿಡ್ ಆದ ಪರಿಣಾಮ ಈ ಘಟನೆ ನಡೆದಿದೆ. ಸಂತೋಷ್ ಅವರು ಅವಿವಾಹಿತರಾಗಿದ್ದು ತಂದೆ ಗೋಪಾಲ, ಓರ್ವ ಸಹೋದರ ಹಾಗೂ ಮೂವರು ಸೋದರಿಯರನ್ನು ಅಗಲಿದ್ದಾರೆ. ಸಂತೋಷ್ ದುರ್ಮರಣದಿಂದಾಗಿ ಬಡಕುಟುಂಬ ಇನ್ನಷ್ಟು ಜರ್ಜರಿತವಾಗಿದೆ.
ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.