ಮಂಗಳೂರು, ಮೇ 02: ನಗರದ ಆರ್ ಟಿಓ ಬಸ್ ನಿಲ್ದಾಣ ಬಳಿ ಶನಿವಾರ ಮಧ್ಯಾಹ್ನ ಆಕ್ಟಿವ್ ಹೋಂಡಾ ಸ್ಕೂಟರ್ ಹಾಗೂ ಸಿಟಿ ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಸ್ಕೂಟರ್ ಸಹ ಸವಾರೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಮೃತ ದುರ್ದೈವಿ ಮಹಿಳೆಯನ್ನು ವಾಮಂಜೂರು ನಿವಾಸಿ ಪ್ರೇಮಾ (56) ಎಂದು ಗುರುತಿಸಲಾಗಿದೆ. ಇವರು ತಮ್ಮ ಪತಿ ಕೃಷ್ಣ ಗಟ್ಟಿ ಎಂಬವರೊಂದಿಗೆ ಸ್ಕೂಟರ್ ನಲ್ಲಿ ತೆರಳುತ್ತಿದ್ದ ವೇಳೆ ಉರ್ವಸ್ಟೋರ್ – ಸ್ಟೇಟ್ ಬ್ಯಾಂಕ್ ನಡುವೆ ಸಂಚರಿಸುವ ರೂಟ್ ನಂಬರ್ 13 ಬಸ್ ಡಿಕ್ಕಿಯಾಯಿತೆನ್ನಲಾಗಿದೆ. ಈ ಸಂದರ್ಭ ಸ್ಕೂಟರ್ ಮಗುಚಿ ಬಿದ್ದಿದ್ದು ರಸ್ತೆಗೆ ಬಿದ್ದ ಮಹಿಳೆಯ ಮೇಲೆ ಬಸ್ ಹರಿದ ಪರಿಣಾಮ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಮೃತ ಮಹಿಳೆ ಪ್ರೇಮಾ ಬಜಪೆ ಗ್ರಾಮ ಪಂಚಾಯತ್ ಸದಸ್ಯೆಯಾಗಿದ್ದು, ಪುತ್ರ ಪೊಲೀಸ್ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಟ್ರಾಫಿಕ್ ಜಾಮ್: ಅಪಘಾತದಿಂದಾಗಿ ಸ್ಥಳದಲ್ಲಿ ಜನ ಜಮಾಯಿಸಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಯಿತು. ಸುಮಾರು ತಾಸುಗಳ ಕಾಲ ವಾಹನಗಳು ಸಂಚರಿಸಲಾಗದೆ ಪರದಾಟ ನಡೆಸಬೇಕಾಯಿತು. ಘಟನಾ ಸ್ಥಳಕ್ಕೆ ಧಾವಿಸಿ ಬಂದ ಪಾಂಡೇಶ್ವರ ಪೊಲೀಸರು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಇನ್ನಷ್ಟು ಲಭ್ಯವಾಗಬೇಕಷ್ಟೆ.
ಈ ಬಗ್ಗೆ ಪಾಂಡೇಶ್ವರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.