ಕನ್ನಡ ವಾರ್ತೆಗಳು

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸಾರ್ವಕಾಲಿಕ ಗರಿಷ್ಠ 22.75 ಕೋಟಿ ರೂಪಾಯಿ ಲಾಭ – ಇದು ಬ್ಯಾಂಕಿನ ಇತಿಹಾಸದಲ್ಲೇ ಅಪೂರ್ವ ದಾಖಲೆ : ಡಾ|| ಎಂ. ಎನ್. ರಾಜೇಂದ್ರ ಕುಮಾರ್

Pinterest LinkedIn Tumblr

Scdcc_anul_Press_1

ಮಂಗಳೂರು : ಹೊಸ ಬ್ಯಾಂಕಿಂಗ್ ವ್ಯವಸ್ಥೆಯನ್ನು ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅಳವಡಿಸಿ ತನ್ನ ಗ್ರಾಹಕರಿಗೆ ಉತ್ಕೃಷ್ಟ ಸೇವೆಯನ್ನು ನೀಡುತ್ತಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ದೇಶದಲ್ಲೇ ಬ್ಯಾಂಕಿಂಗ್ ಕ್ಷೇತ್ರದಲ್ಲಿ ವಿಶಿಷ್ಟ ರೀತಿಯ ಕಾರ್‍ಯ ಯೋಜನೆಗಳೊಂದಿಗೆ ಗುರುತಿಸಿಕೊಂಡಿರುವುದ ಮಾತ್ರವಲ್ಲದೇ ಬ್ಯಾಂಕ್ ದಿನಾಂಕ 31-03-2015ಕ್ಕೆ ಅಂತ್ಯವಾದ ಆರ್ಥಿಕ ವರ್ಷದಲ್ಲಿ ಸಾರ್ವಕಾಲಿಕ ಗರಿಷ್ಠವಾದ 22.75 ಕೋಟಿ ರೂಪಾಯಿ ಲಾಭಗಳಿಸಿದೆ. ಇದು ಬ್ಯಾಂಕಿನ ಇತಿಹಾಸದಲ್ಲೇ ಅಪೂರ್ವ ದಾಖಲೆಯಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ ಇದರ ಅಧ್ಯಕ್ಷರಾದ ಡಾ|| ಎಂ. ಎನ್. ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.

ಗುರುವಾರ ಸಂಜೆ ಮಂಗಳೂರಿನಲ್ಲಿರುವ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಒದಗಿಸಿಯೂ ಬ್ಯಾಂಕ್ ಗರಿಷ್ಠ ಲಾಭ ಗಳಿಸಿ ಸಾಧನೆಯ ಪಥದಲ್ಲಿದೆ. ಶತಮಾನೋತ್ಸವದ ಮುನ್ನಡೆಯೊಂದಿಗೆ ಬ್ಯಾಂಕ್ ವರದಿ ವರ್ಷದಲ್ಲಿ ಒಟ್ಟು ವ್ಯವಹಾರದ ಗುರಿ 4050 ಕೋಟಿ ರೂಪಾಯಿಗಳನ್ನು ದಾಟಿ ೪೫೩೬.೨೪ ಕೋಟಿ ರೂಪಾಯಿ ವ್ಯವಹಾರ ಸಾಧಿಸುವ ಮೂಲಕ ಗುರಿ ಮೀರಿದ ಸಾಧನೆಗೈದಿದೆ. ಪ್ರಸಕ್ತ ವರ್ಷ 5500 ಕೋಟಿ ವ್ಯವಹಾರದ ಗುರಿ ಹೊಂದಿದೆ ಎಂದರು.

ವರದಿ ವರ್ಷದಲ್ಲಿ ಎಲ್ಲಾ ಬ್ಯಾಂಕುಗಳಲ್ಲೂ ಠೇವಣಾತಿಯಲ್ಲಿ ಪೈಪೋಟಿ ಇದ್ದರು ಕೂಡಾ ಹಾಗೂ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರದ ಯಾವುದೇ ಠೇವಣಾತಿ ಇಲ್ಲದೆಯೂ ಈ ಬ್ಯಾಂಕು ತನ್ನ 96 ಶಾಖೆಗಳ ಮುಖಾಂತರ 2014-15ಸಾಲಿನಲ್ಲಿ ಒಟ್ಟು 2568.83 ಕೋಟಿ ರೂಪಾಯಿ ಠೇವಣಿ ಸಂಗ್ರಹಿಸಿ, ಅತೀ ಹೆಚ್ಚು ಠೇವಣಿ ಸಂಗ್ರಹಿಸಿದ ರಾಜ್ಯದ ಪ್ರಥಮ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕೆಂಬ ಕೀರ್ತಿಗೂ ಪಾತ್ರವಾಗಿದೆ. ಇದು ಕಳೆದ ಸಾಲಿಗಿಂತ ಶೇಕಡ 28.35ರಷ್ಟು ಏರಿಕೆಯಾಗಿದೆ.

Scdcc_anul_Press_2

ಬ್ಯಾಂಕು ಈ ವರ್ಷ ನೂತನವಾಗಿ 25 ಶಾಖೆಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ತೆರೆದಿದೆ. ನಮ್ಮ ಬ್ಯಾಂಕಿನ ಶಾಖೆಗಳ ಗುರಿ 101 ಆಗಿದ್ದು ಈಗಾಗಲೇ ಒಟ್ಟು 96 ಶಾಖೆಗಳು ತೆರೆಯಲ್ಪಟ್ಟಿದೆ. 5 ಶಾಖೆಗಳು ಶೀಘ್ರದಲ್ಲೇ ಆರಂಭಗೊಳ್ಳಲಿದೆ.

ಸಾಲ ನೀಡಿಕೆ – ವಸೂಲಿಯಲ್ಲಿ ದಾಖಲೆ

ಸ್ಪರ್ಧಾತ್ಮಕ ಆರ್ಥಿಕ ಹಿನ್ನಲೆಯಲ್ಲಿಯೂ ಬ್ಯಾಂಕ್ ಆರ್ಥಿಕ ವರ್ಷದಲ್ಲಿ ೨೪೪೭ ಕೋಟಿ ರೂಪಾಯಿ ಮುಂಗಡ ನೀಡಿದೆ. ಕೃಷಿ ಹಾಗೂ ಕೃಷಿ ಅಭಿವೃದ್ಧಿಗೆ ಅಲ್ಪಾವಧಿ ಸಾಲವಾಗಿ ೮೨೯.೩೫ ಕೋಟಿ ರೂಪಾಯಿ, ಮಧ್ಯಮಾವಧಿ ಸಾಲ ೩೦.೦೨ ಕೋಟಿ ರೂಪಾಯಿ, ಹೀಗೆ ಕೃಷಿ ಕ್ಷೇತ್ರಕ್ಕೆ ಒಟ್ಟು ೮೫೯.೩೭ ಕೋಟಿ ರೂಪಾಯಿ ಸಾಲ ನೀಡಲಾಗಿದೆ. ಹೊರಬಾಕಿ ಸಾಲ ರೂ.೧,೯೬೮.೨೪ ಕೋಟಿಯಾಗಿರುತ್ತದೆ.

ಸತತ 20 ವರ್ಷಗಳಿಂದ ಕೃಷಿ ಸಾಲ ವಸೂಲಾತಿಯಲ್ಲಿ ಶೇಕಡಾ 100ರ ಸಾಧನೆ

ಬ್ಯಾಂಕು ವರದಿ ವರ್ಷದಲ್ಲಿ ನೀಡಿದ ಎಲ್ಲಾ ಕೃಷಿ ಸಾಲಗಳು ಶೇಕಡಾ 100ರ ವಸೂಲಾತಿಯನ್ನು ಕಂಡಿದ್ದು ಇಂತಹ ಸಾಧನೆಯನ್ನು ಕಳೆದ ೨೦ ವರ್ಷಗಳಿಂದ ಸತತವಾಗಿ ಮಾಡಿರುವುದು ರಾಷ್ಟ್ರೀಯ ದಾಖಲೆಯಾಗಿದೆ. ೨೦೧೫ರ ಮಾರ್ಚ್ ಅಂತ್ಯಕ್ಕೆ ಅವಿಭಜಿತ ದ.ಕ. ಜಿಲ್ಲೆಯ ೨೪ ಕೃಷಿ ಪತ್ತಿನ ಸಹಕಾರಿ ಸಂಘಗಳು ಕೃಷಿ ಸಾಲ ವಸೂಲಾತಿಯಲ್ಲಿ ಶೇಕಡಾ 100ರ ಸಾಧನೆಗೈದಿದೆ.

Scdcc_anul_Press_3

ಬ್ಯಾಂಕಿನ ಆರ್ಥಿಕ ತಖ್ತೆ

ಈ ಬ್ಯಾಂಕಿಗೆ ಒಟ್ಟು ೯೦೨ ಸಂಘಗಳು ಸದಸ್ಯರಾಗಿದ್ದು, ಪಾಲು ಬಂಡವಾಳ ರೂ.೭೩.೯೮ ಕೋಟಿ ಆಗಿದ್ದು ಕಳೆದ ವರ್ಷ ರೂ.೩೫.೫೦ ಕೋಟಿ ಆಗಿತ್ತು. ದುಡಿಯುವ ಬಂಡವಾಳ ರೂ.೩೪೬೦.೯೯ ಕೋಟಿ ಆಗಿದ್ದು, ಇದು ಕಳೆದ ವರ್ಷಕ್ಕಿಂತ (೨೬೪೭.೬೯ ಕೋಟಿ) ಶೇಕಡ ೩೦.೭೨ ರಷ್ಟು ಏರಿಕೆ ಕಂಡಿದೆ. ಬ್ಯಾಂಕ್ ರೂ.೬೧.೭೧ ಕೋಟಿ ವಿವಿಧ ನಿಧಿಗಳನ್ನು ಹೊಂದಿರುತ್ತದೆ. ಬ್ಯಾಂಕಿನ ಅನುತ್ಪಾದಕ ಆಸ್ತಿ ಶೇಕಡಾ ೨.೭೪ ಆಗಿದೆ. ಕಳೆದ ವರ್ಷ ಇದು ೩.೦೬ ಆಗಿತ್ತು.

ರುಪೇ (Rupay) ಕಿಸಾನ್ ಕ್ರೆಡಿಟ್ ಕಾರ್ಡ್

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಮಂಗಳ ಕಿಸಾನ್ ಕ್ರೆಡಿಟ್ ಕಾರ್ಡ್ ಖಾತೆಯನ್ನು ಹೊಂದಿರುವ ರೈತರಿಗೆ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ರುಪೇ (Rupay) ಕಿಸಾನ್ ಕ್ರೆಡಿಟ್ ಕಾರ್ಡ್‌ನ್ನು ನೀಡುತ್ತಿದೆ. ಇದು ನಬಾರ್ಡಿನ ಹೆಮ್ಮೆಯ ಯೋಜನೆಯಾಗಿದ್ದು, ಈ ಯೋಜನೆಯನ್ನು ಕಾರ್ಯಗತಗೊಳಿಸಿದ ರಾಷ್ಟ್ರದ ಮೊದಲ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಎನ್ನುವ ಖ್ಯಾತಿಗೆ ಈ ಬ್ಯಾಂಕ್ ಪಾತ್ರವಾಗಿದೆ. ಈ ಕಾರ್ಡ್ ಹೊಂದಿರುವ ರೈತರು ಖಾತೆಯನ್ನು ಹೊಂದಿರುವ ಸಂಘಗಳಲ್ಲಿ ಮತ್ತು ಈ ವ್ಯವಸ್ಥೆಯನ್ನು ಹೊಂದಿದ ಜಿಲ್ಲೆಯ ಯಾವುದೇ ಪ್ರಾಥಮಿಕ ಕೃಷಿ ಪತ್ತಿನ ಸಂಘಗಳಲ್ಲಿ ಬ್ಯಾಂಕಿಂಗ್ ವ್ಯವಹಾರವನ್ನು ನಡೆಸಬಹುದು.

ಮಾತ್ರವಲ್ಲ ಭಾರತದಾದ್ಯಂತ NFS (ನ್ಯಾಶನಲ್ ಫೈನಾನ್ಸಿಯಲ್ ಸ್ವಿಚ್) ನೆಟ್‌ವರ್ಕ್ ಹೊಂದಿರುವ ಲಕ್ಷಕ್ಕೂ ಮಿಕ್ಕಿರುವ ಯಾವುದೇ ಬ್ಯಾಂಕಿನ ಎಟಿ‌ಎಂಗಳಲ್ಲಿ ಹಾಗೂ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಎಲ್ಲಾ ಶಾಖೆಗಳಲ್ಲೂ ಮತ್ತು ಎಟಿ‌ಎಂಗಳಲ್ಲೂ ಹಣ ನಗದೀಕರಿಸಬಹುದು. ಇದಕ್ಕಾಗಿ ಈಗಾಗಲೇ (National Payment Corporation of India) ದಿಂದ IIN (Issuer Identification Number) ಅನ್ನು ಪಡೆದಿರುತ್ತೇವೆ. ಈ ಕಾರ್ಡ್‌ಗಳನ್ನು ಹೊಂದಿರುವ ಗ್ರಾಹಕರು ದೇಶದ ಯಾವುದೇ ವಾಣಿಜ್ಯ ಮಳಿಗೆಗಳಲ್ಲಿ ಖರೀದಿಸಿದ ವಸ್ತುಗಳಿಗೆ ನಗದನ್ನು ನೀಡುವ ಬದಲು ಈ ಕಾರ್ಡ್‌ನ್ನು Point of Sale ಯಂತ್ರದ ಮೂಲಕ (Swipe) ) ಸ್ವ್ಯೆಫ್ ಮಾಡಿ ಹಣ ಪಾವತಿಸಬಹುದು. ಈಗಾಗಲೇ ೨೫೦೦೦ ರುಪೇ ಕಿಸಾನ್ ಕಾರ್ಡ್‌ಗಳನ್ನು ರೈತರಿಗೆ ವಿತರಿಸಲಾಗಿದೆ. ೧೦,೦೦೦ ರುಪೇ ಡೆಬಿಟ್ ಕಾರ್ಡ್‌ಗಳನ್ನು ನಮ್ಮ ಇತರ ಗ್ರಾಹಕರಿಗೆ ನೀಡಲಾಗಿದೆ.

ಬ್ಯಾಂಕಿನ ಸಾಧನೆ

ಬ್ಯಾಂಕಿಗೆ 16 ಬಾರಿ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿ, 14 ಬಾರಿ ನಬಾರ್ಡ್ ಪ್ರಶಸ್ತಿ ಸತತವಾಗಿ ದೊರೆತಿದೆ.  ಸ್ವ ಸಹಾಯ ಗುಂಪುಗಳ ಸಮರ್ಪಕ ಅನುಷ್ಠಾನದಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನವನ್ನು ಈ ಬ್ಯಾಂಕು ಹೊಂದಿದೆ. ಬ್ಯಾಂಕ್ ಒಟ್ಟು ೪೧೫೪೭ ಗುಂಪುಗಳನ್ನು ಹೊಂದಿದೆ.

ಜಿಲ್ಲೆಯಲ್ಲಿ ಒಟ್ಟು ೯೬೮೯೨ ರೈತರಿಗೆ ಮಂಗಳಾ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಿಸಲಾಗಿದೆ. ೭೪೦೪೫ ಕಿಸಾನ್ ಕ್ರೆಡಿಟ್ ಕಾರ್ಡುದಾರರಿಗೆ ವೈಯುಕ್ತಿಕ ಅಪಘಾತ ವಿಮಾ ಸೌಲಭ್ಯವನ್ನು ಒದಗಿಸಲಾಗಿದೆ. ಬ್ಯಾಂಕಿನ ಎಲ್ಲಾ ಶಾಖೆಗಳು ಇಂಟರ್‌ನೆಟ್, ಕೋರ್ ಬ್ಯಾಂಕಿಂಗ್ ನಂತಹ ಉತ್ಕೃಷ್ಠ ಸೇವೆಯನ್ನು ಗ್ರಾಹಕರಿಗೆ ನೀಡುತ್ತಿದೆ

BSNL MPLS Leased Line ಸಂಪರ್ಕದ ಮೂಲಕ ಅಂತರ್ ಶಾಖೆಗಳ ತ್ವರಿತ ಸಂಪರ್ಕ.  ಗ್ರಾಹಕರ ಮನೆ ಬಾಗಿಲಿಗೆ ಬ್ಯಾಂಕ್ ಎನ್ನುವ ಆಶಯದೊಂದಿಗೆ ಮೊಬೈಲ್ ಬ್ಯಾಂಕಿಂಗ್ನ್ನು ಈ ಬ್ಯಾಂಕ್ ಕಾರ್ಯರೂಪಕ್ಕೆ ತಂದಿದೆ,  ಬ್ಯಾಂಕಿನ ಎಲ್ಲಾ ಶಾಖೆಗಳ ಭದ್ರತೆಯ ಹಿತದೃಷ್ಠಿಯಿಂದ ಸಿಸಿಟಿವಿ ಕೆಮರಾ ಅಳವಡಿಸಲಾಗಿದೆ.
ಬ್ಯಾಂಕ್ ಸಿಬ್ಬಂದಿಗಳಿಗೆ ಪಿಂಚಣೆ ಯೋಜನೆ ಕಾರ್ಯರೂಪಕ್ಕೆ ಬಂದಿದೆ.

ಕಿಯೊಕ್ಸ್ ಯಂತ್ರ ಅಳವಡಿಕೆ: ನಮ್ಮ ಕೇಂದ್ರ ಶಾಖೆ ಕೊಡಿಯಾಲ್‌ಬೈಲ್‌ನಲ್ಲಿ ಗ್ರ್ರಾಹಕರಿಗೆ ತ್ವರಿತ ಸೇವೆಯನ್ನು ನೀಡುವ ಉದ್ದೇಶದಿಂದ ಕ್ಯಾಷ್ ಡೆಪಾಜಿಟ್ ಹಾಗೂ ಚೆಕ್ ಡೆಪಾಜಿಟ್ ಯಂತ್ರಗಳನ್ನು ಅಳವಡಿಸಲಾಗಿದೆ. ಈ ಯಂತ್ರದಲ್ಲಿ ಗ್ರಾಹಕರು ಹಣ ಪಾವತಿಸಿ ಹಾಗೂ ಚೆಕ್ ಡೆಪಾಜಿಟ್ ಮಾಡುವ ಮೂಲಕ ತಮ್ಮ ಅಮೂಲ್ಯವಾದ ಸಮಯವನ್ನು ಉಳಿಸಿಕೊಳ್ಳಬಹುದು ಎಂದು ರಾಜೇಂದ್ರ ಕುಮಾರ್ ವಿವರಿಸಿದರು.

Scdcc_anul_Press_4

ಮುಂದಿನ ಯೋಜನೆಗಳು :

ತರಬೇತಿ ಕೇಂದ್ರ: ಸಹಕಾರಿ ಕ್ಷೇತ್ರದಲ್ಲಿ ದುಡಿಯುತ್ತಿರುವ ಸಿಬ್ಬಂದಿಗಳಿಗೆ ಹಾಗೂ ಈ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಅಧ್ಯಕ್ಷರು ಹಾಗೂ ನಿರ್ದೇಶಕರು ಮತ್ತು ಸದಸ್ಯರಿಗೆ ಸಹಕಾರಿ ಕ್ಷೇತ್ರದ ಬಗ್ಗೆ ವಿಶೇಷ ಅನುಭವ ನೀಡಲು ತರಬೇತಿ ಕೇಂದ್ರವನ್ನು ತೆರೆಯಲಾಗುವುದು.

ಸಹಕಾರ ಅಧ್ಯಯನ ಪೀಠ: ಹಿರಿಯ ಸಹಕಾರಿಗಳ ಪರಿಚಯಾತ್ಮಕ ಲೇಖನಗಳನ್ನು ಸಿದ್ದಪಡಿಸುವುದರೊಂದಿಗೆ ಹಳೆಯ ದಾಖಲೆಗಳ ಸುರಕ್ಷತೆಗಾಗಿ ಗ್ರಂಥಾಲಯವನ್ನು ಬ್ಯಾಂಕಿನ ನೂತನ ಕಟ್ಟಡದಲ್ಲಿ ತರೆಯುವ ಉದ್ದೇಶವಿದೆ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸಹಕಾರ ಅಧ್ಯಯನ ಪೀಠವನ್ನು ಸ್ಥಾಪಿಸುವಂತೆ ಶತಮಾನೋತ್ಸವದ ವರ್ಷದಲ್ಲಿ ಸರಕಾರದ ಗಮನವನ್ನು ಸೆಳೆಯಲಾಗುವುದು.

ಇಂಟರ್ ಬ್ಯಾಂಕಿಂಗ್ ಮೊಬೈಲ್ ಪೇಮೆಂಟ್ ಸಿಸ್ಟಮ್ ಯೋಜನೆ: NPCI (National Payment Corporation of India) ಸಹಯೋಗದೊಂದಿಗೆ IMPS (InterBank Mobile Payment System) ಯೋಜನೆಯೊಂದಿಗೆ ಮೊಬೈಲ್ ಮೂಲಕ ಗ್ರಾಹಕರ ಒಂದು ಖಾತೆಯಿಂದ ಇನ್ನೊಂದು ಖಾತೆಗೆ ಅದೇ ಬ್ಯಾಂಕಿನಿಂದ ಮತ್ತು ಇತರ ಬ್ಯಾಂಕಿನ ಖಾತೆಗೆ ಹಣ ವರ್ಗಾಯಿಸಬಹುದು. ಈ ರೀತಿ ಹಣ ವರ್ಗಾವಣೆಗೆ ಮೊಬೈಲ್ ನಂಬ್ರ ಹಾಗೂ MMID ಉಪಯೋಗಿಸಿ ಈ ವ್ಯವಸ್ಥೆಯ ಪ್ರಯೋಜನ ಪಡೆಯಬಹುದು.

ಇಂಟರ್‌ನೆಟ್ ಬ್ಯಾಂಕಿಂಗ್ ಸೇವೆ ಶೀಘ್ರದಲ್ಲಿ ಆರಂಭಗೊಳ್ಳಲಿದೆ : ತಾಲೂಕು ಕೇಂದ್ರಗಳಲ್ಲಿ ಎಟಿ‌ಎಂ ಅಳವಡಿಕೆ. ಈ ಎಟಿ‌ಎಂನಲ್ಲಿ ಯಾವುದೇ ಬ್ಯಾಂಕಿನ ಎಟಿ‌ಎಂ ಕಾರ್ಡ್‌ಗಳನ್ನು ಉಪಯೋಗಿಸಿ ಹಣ ಪಡೆಯಬಹುದು.

ಕೃತಜ್ಞತಾ ಸಮರ್ಪಣೆ

ರಾಜ್ಯದ ಕೃಷಿಕರ ಸರ್ವತೋಮುಖ ಏಳಿಗೆಯ ದೃಷ್ಟಿಯಿಂದ ರಾಜ್ಯ ಸರಕಾರ ಕೃಷಿಕರಿಗೆ ಬಡ್ಡಿ ಸಹಾಯಧನವನ್ನು ಈಗಲೂ ಮುಂದುವರಿಸಿರುವುದು ಸಂತೋಷದ ವಿಷಯವಾಗಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಮಸ್ತ ಕೃಷಿಕರ ಹಾಗೂ ಸಹಕಾರಿಗಳ ಪರವಾಗಿ ಸನ್ಮಾನ್ಯ ಮುಖ್ಯ ಮಂತ್ರಿಗಳಿಗೆ, ಉಭಯ ಜಿಲ್ಲೆಗಳ ಉಸ್ತುವಾರಿ ಸಚಿವರುಗಳಿಗೆ, ಸಚಿವ ಸಂಪುಟದ ಸದಸ್ಯರೆಲ್ಲರಿಗೂ ಹಾಗೂ ಉಭಯ ಜಿಲ್ಲೆಗಳ ಎಲ್ಲಾ ಜನಪ್ರತಿನಿಧಿಗಳಿಗೆ ಕೃತಜ್ಞತೆಯನ್ನು ಸಲ್ಲಿಸುವುದಾಗಿ ರಾಜೇಂದ್ರ ಕುಮಾರ್ ಅವರು ಈ ಸಂದರ್ಭದಲ್ಲಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾದ ವಿನಯ ಕುಮಾರ್ ಸೂರಿಂಜೆ, ನಿರ್ದೆಶಕರುಗಳಾದ ಭಾಸ್ಕರ್ ಎಸ್.ಕೋಟ್ಯಾನ್, ಬಿ.ರಘುರಾಮ್ ಶೆಟ್ಟಿ, ಎಮ್.ವಾದಿರಾಜ್ ಶೆಟ್ಟಿ, ಕೆ.ಎಸ್.ದೇವರಾಜ್, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಸದಾಶಿವ್ ಉಳ್ಳಾಲ್, ಎಸ್.ರಾಜು ಪೂಜಾರಿ, ಶಶಿ ಕುಮಾರ್ ರೈ.ಬಿ, ಹಾಗೂ ಸಹಕಾರ ಸಂಘಗಳ ಉಪನಿಬಂಧಕರಾದ ಬಿ.ಕೆ ಸಲೀಂ ಮತ್ತು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ( ಪ್ರಭಾರ) ಬಾಬು.ಬಿಲ್ಲವ.ಬಿ ಮುಂತಾದವರು ಉಪಸ್ಥಿತರಿದ್ದರು.

Write A Comment