ಮಂಗಳೂರು,ಎಪ್ರಿಲ್.22: ಬಸವಣ್ಣ ಜಗತ್ತು ಕಂಡ ಮಹಾನ್ ಮಾನವತಾವಾದಿಗಳಲ್ಲಿ ಒಬ್ಬರು. ಜಾತಿ ಭೇದ, ಲಿಂಗ ಭೇದ, ಅಸ್ಪ್ಯಶ್ಯತೆ ಇತ್ಯಾದಿಗಳು ಸಾಮಾಜಿಕ ಪಿಡುಗುಗಳಾಗಿ ಕಾಡುತ್ತಿದ್ದ ಕಾಲದಲ್ಲಿ ಅವುಗಳ ವಿರುದ್ಧ ಧ್ವನಿ ಎತ್ತಿದ ಅವರು ನಮಗೆಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ ಎಂದು ಬಸವನಗುಡಿ ಗಿರಿಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಯವರು ನಗರದ ವಿವಿ ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ ಮಂಗಳವಾರ ಬಸವೇಶ್ವರ ಜಯಂತಿ ಆಚರಣೆಯ ಸಭಾ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಬಸವಣ್ಣವರ ಛಾಯಾಚಿತ್ರವನ್ನು ಬಿಡುಗಡೆಗೊಳಿಸಿದ ದಕ್ಷಿ ಣ ಕನ್ನಡ ಜಿಲ್ಲಾಧಿಕಾರಿ ಎ. ಬಿ. ಇಬ್ರಾಹಿಂ ಮಾತನಾಡಿ, ಬಸವಣ್ಣನವರು ವೈದಿಕತೆಗಿಂತ ಕಾಯಕಕ್ಕೆ ಆದ್ಯತೆ ನೀಡಿ ಜನರಲ್ಲಿ ಜಾಗೃತಿ ಮೂಡಿಸಿದ ಮಾನವತಾವಾದಿ. ನುಡಿದದ್ದನ್ನು ಮಾಡಿ ತೋರಿಸಿದದವರು. ಅವರ ಆದರ್ಶಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪಿ. ಐ ಶ್ರೀವಿದ್ಯಾ, ಶಾಸಕ ಮೊಯ್ದೀನ್ ಬಾವ, ಎಸ್ಪಿ ಡಾ. ಎಸ್. ಡಿ. ಶರಣಪ್ಪ, ದ. ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಕರಾವಳಿ ವೀರಶೈವ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳಾದ ಮಲ್ಲಪ್ಪ, ಪೂರ್ಣಿಮಾ ಅತಿಥಿಯಾಗಿ ಭಾಗವಹಿಸಿದ್ದರು.
ಆರ್. ಸಿ. ದೊಡ್ಡ ಗೌಡ ಬಸವೇಶ್ವರ ಜಯಂತಿಯ ಸಂದೇಶ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಹಾಸ ರೈ ಸ್ವಾಗತಿಸಿದರು.
ದಕ್ಷಿಣ ಕನ್ನಡ ಜಿಲ್ಲಾಡಳಿತ, ದ. ಕ. ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕರಾವಳಿ ವೀರಶೈವ ಕ್ಷೇಮಾಭಿವೃದ್ಧಿ ಸಂಘದ ಸಹಕಾರದೊಂದಿಗೆ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.