ಮಂಗಳೂರು, ಏ. 19: ದ.ಕ. ಜಿಲಾ ಕಾರ್ಯನಿರತ ಪತ್ರಕರ್ತರ ಸಂಘ , ಮಂಗಳೂರು ಪ್ರೆಸ್ಕ್ಲಬ್ ಮತ್ತು ಪತ್ರಿಕಾಭವನ ಟ್ರಸ್ಟ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಪತ್ರಕರ್ತರ ವಾರ್ಷಿಕ ಕ್ರೀಡಾಕೂಟ ರವಿವಾರ ನಗರದ ಸೈಂಟ್ ಅಲೋಶಿಯಸ್ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ (ಲೊಯೊಲಾ ಹಾಲ್ನ ಹಿಂಬದಿ-ಎಸ್ಡಿಸಿಸಿ ಬ್ಯಾಂಕ್ ಬಳಿ) ನಡೆಯಿತು.
ಕ್ರೀಡಾ ಮತ್ತು ಯುವಜನ ಸೇವೆ ಹಾಗೂ ಮೀನುಗಾರಿಕಾ ಇಲಾಖೆ ಸಚಿವ ಕೆ.ಅಭಯಚಂದ್ರ ಜೈನ್ ಕ್ರೀಡಾಕೂಟ ಉದ್ಘಾಟಿಸಿ, ಮನುಷ್ಯನ ದೈಹಿಕ, ಮಾನಸಿಕ ಒತ್ತಡ ನಿವಾರಣೆಯಲ್ಲಿ ಕ್ರೀಡೆ ಪ್ರಮುಖ ಪಾತ್ರ ವಹಿಸುತ್ತದೆ. ರಾಜ್ಯದಲ್ಲಿ ಕ್ರೀಡೆಗೆ ಪೂರಕ ವಾತಾವರಣ ಕಲ್ಪಿಸಲು ಕ್ರೀಡಾ ಸೂರ್ತಿಯ ಅಕಾರಿಗಳ ನೇಮಕ, ಸೌಲಭ್ಯ ವಿತರಣೆ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದರು.
ರಾಜ್ಯದ 200 ಸರಕಾರಿ ಶಿಕ್ಷಣ ಸಂಸ್ಥೆಗಳ ದೈಹಿಕ ಶಿಕ್ಷಕರನ್ನು ಆಯಾ ತಾಲೂಕು ಮತ್ತು ಜಿಲ್ಲಾ ಕ್ರೀಡಾಂಗಣಗಳ ನಿರ್ವಹಣೆ ಉಸ್ತುವಾರಿ ನೋಡಿಕೊಳ್ಳಲು ನಿಯೋಜಿಸಲಾಗುವುದು. ಈ ಕುರಿತು ಮುಖ್ಯಮಂತ್ರಿಯವರಲ್ಲಿ ಮಾತುಕತೆ ನಡೆಸಿ, ಶೀಘ್ರ ಸಭೆ ಕರೆದು, ಚರ್ಚಿಸಿ ಆದೇಶಿಸಲಾಗುವುದು. ರಾಜ್ಯದಲ್ಲಿ 30 ಜಿಲ್ಲಾ ಕ್ರೀಡಾಂಗಣ ಮತ್ತು 175 ತಾಲೂಕು ಕ್ರೀಡಾಂಗಣಗಳಿದ್ದು, ಅವುಗಳ ನಿರ್ವಹಣೆ ಮೂಲಕ ಕ್ರೀಡಾ ಕ್ಷೇತ್ರದಲ್ಲಿ ಹೊಸ ಬದಲಾವಣೆ ತರಲಾಗುವುದು ಎಂದರು.
ಮುಖ್ಯ ಅತಿಥಿ ಪೊಲೀಸ್ ಆಯುಕ್ತ ಎಸ್.ಮುರುಗನ್ ಮಾತನಾಡಿ, ಆರೊಗ್ಯ ಕಾಪಾಡುವ ಜತೆಗೆ ಮನೋರಂಜನೆಗಾಗಿ ಕ್ರೀಡೆಗಳಲ್ಲಿ ಭಾಗವಹಿಸುವುದು ಅತೀ ಅಗತ್ಯ. ಪತ್ರಕರ್ತರು ಪ್ರತಿವರ್ಷ ಕ್ರೀಡಾಕೂಟ ಏರ್ಪಡಿಸುವುದು ಸಂತೋಷದ ವಿಚಾರ. ಮಾಹಿತಿ ಸಂಗ್ರಹದಲ್ಲಿ ಇಲ್ಲಿಯ ಪೊಲೀಸರಿಗಿಂತ ಪತ್ರಕರ್ತರು ಚುರುಕಾಗಿದ್ದು, ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಪತ್ರಕರ್ತರು ಮಾದರಿಯಾಗಿ ಸಾಮಾಜಿಕ ಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದಾರೆ ಎಂದರು.
ಕ್ರೀಡಾ ಸಾಧಕರಾದ ತರಬೇತುದಾರ ಮಾಜಿ ಯೋಧ ಲಕ್ಷ್ಮಣ ರೈ, ಈಜು ಪಟು ಮನೋಹರ ಪ್ರಭು ಮತ್ತು ಶಾಟ್ಪುಟ್ ಪಟು ಸಾಕ್ಷಿ ಕುಂದಾಪುರ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಪ್ರೆಸ್ ಕ್ಲಬ್ ಖಜಾಂಚಿ ವೇಣು ವಿನೋದ್ ಕ್ರೀಡಾ ಸಾಧಕರನ್ನು ಪರಿಚಯಿಸಿದರು.
ದ.ಕ.ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ, ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್, ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ನಾಯಕ್ ಇಂದಾಜೆ ಉಪಸ್ಥಿತರಿದ್ದರು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ ಸ್ವಾಗತಿಸಿದರು, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಬಿ.ರವೀಂದ್ರ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ರಾಮಕೃಷ್ಣ ಆರ್. ವಂದಿಸಿದರು. ಪತ್ರಕರ್ತ ಪಿ. ಬಿ. ಹರೀಶ್ ರೈ ಕಾರ್ಯಕ್ರಮ ನಿರ್ವಹಿಸಿದರು.