ಬೆಂಗಳೂರು, ಎ.17: ಕರ್ನಾಟಕ ಸರ್ಕಾರದ ಮಾಧ್ಯಮ ಅಕಾಡೆಮಿ ಬೆಂಗಳೂರು ಇದರ ಕರ್ನಾಟಕ ಮಾಧ್ಯಮ ಅಕಾಡೆಮಿ 2014ನೇ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಇಂದಿಲ್ಲಿ ಗುರುವಾರ ಸಂಜೆ ಬೆಂಗಳೂರುನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನೇರವೇರಿದ್ದು, 2014ನೇ ವಾರ್ಷಿಕ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಯನ್ನು ಮುಂಬಯಿ ಅಲ್ಲಿನ ಹೆಸರಾಂತ ಪತ್ರಕರ್ತ ರೋನ್ಸ್ ಬಂಟ್ವಾಳ್ ಅವರಿಗೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಅನುಪಸ್ಥಿತಿಯಲ್ಲಿ ಕಾನೂನು ಸಚಿವ ಬಿ.ಟಿ ಜಯಚಂದ್ರ ಪ್ರದಾನಿಸಿ ಅಭಿನಂದಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ರಾಜ್ಯದ ಮೂಲ ಸೌಲಭ್ಯ ಅಭಿವೃದ್ಧಿ, ಹಜ್ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಚಿವ ಆರ್.ರೋಷನ್ ಬೇಗ್ ಅವರು ವಹಿಸಿದ್ದು, ಇದೇ ಸಂದರ್ಭದಲ್ಲಿ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಹೆಚ್.ಆಂಜನೇಯ ಅವರು ಅಕಾಡೆಮಿ ಪ್ರಶಸ್ತಿ ಪುರಸ್ಕೃತರ ಸಾಕ್ಷ ಚಿತ್ರ ಬಿಡುಗಡೆ ಗೊಳಿಸಿದರು. ಸಾರಿಗೆ ಹಾಗೂ ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಪುರಸ್ಕೃತರ ಪುಸ್ತಿಕೆ ಬಿಡುಗಡೆ ಗೊಳಿಸಿದರು.
ಅತಿಥಿsಗಳಾಗಿ ಲೋಕಸಭಾ ಸದಸ್ಯ ಪಿ.ಸಿ ಮೋಹನ್, ವಿಧಾನ ಪರಿಷತ್ ಸದಸ್ಯರುಗಳಾದ ಕೆ.ಗೋವಿಂದರಾಜು ಮತ್ತು ಹೆಚ್ ಎಂ.ರೇವಣ್ಣ,ಕನ್ನಡ ಮತ್ತು ಸಂಸ್ಕೃತಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಡಾ| ಎನ್. ನಾಗಾಂಬಿಕಾ ದೇವಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕ ಎನ್.ಆರ್ ವಿಶುಕುಮಾರ್, ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ.ಎ ಪೊನ್ನಪ್ಪ ಆಶಯ ನುಡಿಗಳ್ನಾಡಿದರು. ಅಕಾಡೆಮಿ ಕಾರ್ಯದರ್ಶಿ ಎಸ್. ಶಂಕರಪ್ಪ ಮತ್ತಿತರರು ಉಪಸ್ಥಿತರಿದ್ದರು.
ಅಕಾಡೆಮಿಯು ಅತ್ಯುತ್ತಮ ಜಿಲ್ಲಾ ಪತ್ರಿಕೆಗೆ ನೀಡುವ ಅಂದೋಲನ ಪ್ರಶಸ್ತಿ-೨೦೧೪ ರಾಯಚೂರು ವಾಣಿ ಪತ್ರಿಕೆಗೆ, ಸಾಮಾಜಿಕ ಸಮಸ್ಯೆ ಲೇಖನಕ್ಕೆ ನೀಡುವ ಅಭಿಮಾನಿ ಪ್ರಶಸ್ತಿ-೨೦೧೪ ವಿಜಯ ಕರ್ನಾಟಕದ ಸಿದ್ಧಲಿಂಗ ಸ್ವಾಮಿ ಅವರ ಕುಣಿಗಲ್ ತಾಲೂಕು ಗೊಲ್ಲರ ಹಟ್ಟಿಯ ಮಹಿಳೆಯರಿಗೆ ಹೆರಿಗೆ, ಋತುಸ್ರಾವ ಎಂದರೆ ಶಿಕ್ಷೆ ಶೀರ್ಷಿಕೆಗೆ ಮತ್ತು ಮಾನವೀಯ ಸಮಸ್ಯೆ ಲೇಖನಕ್ಕೆ ನೀಡುವ 2014ನೇ ಸಾಲಿನ ಮೈಸೂರು ದಿಗಂತ ಪ್ರಶಸ್ತಿ 2014ನ್ನು ಶ್ರೀಧರ ಮಂಗಳೂರ ಉತ್ತರ ಕನ್ನಡದ ಲೋಕಧ್ವನಿ ದಿನಪತ್ರಿಕೆ ಶಿರಸಿ ಅವರಿಗೆ ತನುವ ತೆಯ್ದು ಸುಗಂಧ ಹಂಚುವ ಕರ್ಮಪಥಿsಕ ಶಿರ್ಷಿಕೆಗೆ ನೀಡಲಾಯಿತು.
ವಿಧಾನಸೌಧದ ಸಭಾಗೃಹದಲ್ಲಿ ಶಿವಾ’ಸ್ ಸ್ಟೈಲೋಸ್ ಸಂಸ್ಥೆಯ ಅತ್ತೂರು ಶಿವರಾಮ ಕೆ.ಭಂಡಾರಿ, ವಾಸ್ತುತಜ್ನ ಪಂಡಿತ್ ನವೀನ್ಚಂದ್ರ ಆರ್.ಸನೀಲ್, ಸೋಮಶೇಖರ್ ಎಂ.ಭಂಡಾರಿ, ತಾರಾ ಜೆಸಿಂತಾ ಆರ್.ಬಂಟ್ವಾಳ್, ಪಿ.ಸೋಮಶೇಖರ್, ನಾಗೇಶ್ ಪೊಳಲಿ ಮತ್ತಿತರರು ಈ ಸಂದರ್ಭದಲ್ಲಿ ಪುರಸ್ಕಾರ ಸಮಾರಂಭಕ್ಕೆ ಸಾಕ್ಶಿಯಾಗಿ ರೋನ್ಸ್ ಬಂಟ್ವಾಳ್ ಅವರಿಗೆ ಅಭಿನಂದಿಸಿದರು