ಮಂಗಳೂರು, ಎ.8: ಮೊಬೈಲ್ ಫೋನ್ ಮೂಲಕ ಪೊಲೀಸರಿಗೆ ದೂರು ನೀಡಬಹುದಾದ ‘ಮಂಗಳೂರು ಸಿಟಿ ಪೊಲೀಸ್ ’ಆ್ಯಪ್ನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂಪ್ರಕಾಶ್ರವರು ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಮಂಗಳವಾರ ಬಿಡುಗಡೆಗೊಳಿಸಿದರು.
ಈ ವೇಳೆ ಮಾತನಾಡಿದ ಅವರು, ನಿವೃತ್ತ ಪೊಲೀಸ್ ಸಿಬ್ಬಂದಿಯ ಸಮಸ್ಯೆಗಳ ಪರಿಹಾರಕ್ಕೆ ಎಡಿಜಿಪಿ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸ ಲಾಗುವುದು. ಆದರೆ ನಿವೃತ್ತ ಪೊಲೀಸರಿಗೂ ಆರೋಗ್ಯ ಭಾಗ್ಯ ಯೋಜನೆಯನ್ನು ವಿಸ್ತರಿಸುವ ಚಿಂತನೆ ಇಲ್ಲ. ಕ್ಯಾಂಟೀನ್ ಸೌಲಭ್ಯ ಹಾಗೂ ಇತರ ಸವಲತ್ತುಗಳ ಬೇಡಿಕೆಗಳನ್ನು ಸರಕಾರ ಪರಿಶೀಲಿಸುತ್ತಿದೆ ಎಂದು ಹೇಳಿದರು.
ಮಂಗಳೂರಿಗೆ ನೂತನ ಪೊಲೀಸ್ ಠಾಣೆ ಒದಗಿಸುವ ಬಗೆಗಿನ ಪ್ರಸ್ತಾವನೆಯ ಬಗ್ಗೆ ಪರಿಶೀಲಿಸಲಾಗುವುದು. ಪೊಲೀಸ್ ಇಲಾಖೆ ಯಲ್ಲಿರುವ ಹುದ್ದೆಯನ್ನು ಭರ್ತಿಗೊಳಿಸಲು ಸರಕಾರದಿಂದ ಕ್ರಮ ಕೈ ಗೊಳ್ಳಲಾಗುತ್ತಿದೆ. ಪ್ರಸಕ್ತ ಗೃಹರಕ್ಷಕದಳದ ಸಿಬ್ಬಂದಿಯನ್ನು ಪೊಲೀಸರ ಕೊರತೆ ಇರುವ ಕಡೆ ಬಳಸಿಕೊಳ್ಳಲಾಗುತ್ತದೆ. ಸಾಮಾಜಿಕ ಜಾಲತಾಣಗಳ ಅಪರಾಧ ಪತ್ತೆಯ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಪ್ರತ್ಯೇಕ ವಿಭಾಗವನ್ನು ಆರಂಭಿಸಲಾಗುವುದು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂಪ್ರಕಾಶ್ ತಿಳಿಸಿದರು.
ಸರಳವಾಗಿ ಪೊಲೀಸ್ ದೂರು ನೀಡಲು ಮಾಹಿತಿ ಪಡೆಯಲು ಸಾರ್ವಜನಿಕರಿಗೆ ಅನುಕೂಲ ವಾಗುವ ಉದ್ದೇಶದಿಂದ ‘ಮಂಗಳೂರು ಸಿಟಿ ಪೊಲೀಸ್’ ಆ್ಯಪ್ನ್ನು ಬಿಡುಗಡೆಗೊಳಿಸಲಾಗಿದೆ. ಈ ಆ್ಯಂಡ್ರಾಯ್ಡಾ ಅಪ್ಲಿಕೇಶನ್ನ್ನು ಮೊಬೈಲ್ ಫೋನ್ ಮೂಲಕ ’ಆ್ಯಪ್ನ್ನು ಗೂಗಲ್ ಪ್ಲೇ ಸ್ಟೋರ್ನಿಂದ ಫ್ರೀಯಾಗಿ ಡೌನ್ಲೋಡ್ ಮಾಡಿಕೊಂಡು ಬಳಸಬಹುದು.
ಅಗ್ನಿ ಆಕಸ್ಮಿಕದ ಸಂದರ್ಭ ಅಥವಾ ಮಕ್ಕಳ ಸಹಾಯವಾಣಿ, ವೃದ್ಧರ ಸಹಾಯವಾಣಿ ಮತ್ತು ಪೊಲೀಸ್ ಕಂಟ್ರೋಲ್ ರೂಂನ್ನು ಸಂಪರ್ಕಿಸಬೇಕಾದ ಅನಿವಾರ್ಯ ಸಂದರ್ಭದಲ್ಲಿ ಈ ಆ್ಯಪ್ ಸಹಾಯಕವಾಗಲಿದೆ. ಜತೆಗೆ ನಗರದ ಟ್ರಾಫಿಕ್ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಬಹುದು. ಪೊಲೀಸರಿಗೆ ತುರ್ತು ಮಾಹಿತಿ, ವರದಿ ನೀಡಲು ‘ಮಂಗಳೂರು ಸಿಟಿ ಪೊಲೀಸ್’ ಆ್ಯಪ್ ನೆರವಾಗಲಿದೆ.
ಶೀಘ್ರದಲ್ಲೇ ಮೂರು ಹೊಸ ಪೊಲೀಸ್ ಠಾಣೆ
ಮಂಗಳೂರು ನಗರ ಪೊಲೀಸ್ ಆಯುಕ್ತ ಮುರುಗನ್ ಮಾತನಾಡಿ, ಮಂಗಳೂರಿನ ಕೈಕಂಬ, ಜೆಪ್ಪು-ಮೋರ್ಗನ್ಸ್ಗೇಟ್ ಹಾಗೂ ದಕ್ಷಿಣ ಸಂಚಾರಿ ಪೊಲೀಸ್ ಠಾಣೆ ನೂತನವಾಗಿ ರಚಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು. ಈ ಸಂದರ್ಭ ಪಶ್ಚಿಮ ವಲಯ ಐಜಿಪಿ ಅಮೃತ್ಪಾಲ್ ಉಪಸ್ಥಿತರಿದ್ದರು.