ಮಂಗಳೂರು, ಏ.7 : ವಿಜಯಕರ್ನಾಟಕದ ಉಡುಪಿ ವರದಿಗಾರ ಬಾಲಕೃಷ್ಣ ಶಿಬಾರ್ಲ ಅವರಿಗೆ 2014 ನೇ ಸಾಲಿನ ಪ.ಗೋ. (ಪದ್ಯಾಣ ಗೋಪಾಲಕೃಷ್ಣ ಸಂಸ್ಮರಣಾ ಗ್ರಾಮೀಣ ವರದಿಗಾರಿಕೆಗಾಗಿ ) ಪ್ರಶಸ್ತಿಯನ್ನು ಮಂಗಳವಾರ ಪ್ರದಾನ ಮಾಡಲಾಯಿತು. ನಗರದ ಪತ್ರಿಕಾ ಭವನದಲ್ಲಿ ಇಂದು ನಡೆದ ಸರಳ ಸಮಾರಂಭದಲ್ಲಿ ಸಾಹಿತಿ, ವಿ.ಗ. ನಾಯಕ್ ಅವರು ಪ್ರಶಸ್ತಿ ಗೌರವ ಧನ 10 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಫಲಕವನ್ನು ಪ್ರದಾನ ಮಾಡಿದರು.
ಬಳಿಕ ಮಾತನಾಡಿದ ಅವರು, ಪ್ರತಿಯೊಂದು ವಿಚಾರದಲ್ಲೂ ಸುಧಾರಣೆಯಾ ಬಗ್ಗೆ ಕಾಳಜಿ ಹೊಂದಿರುವವರು ಪತ್ರಕರ್ತರು, ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಮೂಲಕ ಯಾವುದೇ ತತ್ವ ಸಿದ್ಧಾಂತಗಳಿಗೆ ಸೀಮಿತಗೊಳ್ಳದೇ ಮನುಷ್ಯ ಪಂಥೀಯನಾಗಿರಬೇಕು ಎಂದು ಹೇಳಿದರು.
ತೀರ್ಪುಗಾರ ಮಂಡಳಿ ಪರವಾಗಿ ಮಾತನಾಡಿದ ಹಿರಿಯ ಪತ್ರಕರ್ತ ಮನೋಹರ ಪ್ರಸಾದ್, ಪದ್ಯಾಣ ಗೋಪಾಲಕೃಷ್ಣರು ಅಪಾರ ಅನುಭವಿ ಹಾಗೂ ಕ್ರಿಯಾತ್ಮಕ ಪತ್ರಕರ್ತರಾಗಿದ್ದರು. ಅವರ ಹೆಸರಿನ ಪ್ರಶಸ್ತಿಯು ಯುವ ಪತ್ರಕರ್ತರಿಗೆ ಪ್ರೋತ್ಸಾಹದಾಯಕವಾಗಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಪದ್ಯಾಣ ಗೋಪಾಲಕೃಷ್ಣ ಅವರ ಪತ್ನಿ ಸಾವಿತ್ರಿ ಗೋಪಾಲಕೃಷ್ಣ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ ಸ್ವಾಗತಿಸಿದರು. ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ರವೀಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಶ್ರೀನಿವಾಸ ಇಂದಾಜೆ ವಂದಿಸಿದರು.