ಉಳ್ಳಾಲ,ಎಪ್ರಿಲ್.05 : ಇಸ್ಲಾಂ ಹೆಸರನ್ನು ಅಳಿಸಲು ಉಗ್ರಗಾಮಿಗಳು ಪ್ರಯತ್ನಿಸುತ್ತಿದ್ದಾರೆ. ಅವರು ಇಸ್ಲಾಂನ ಶತ್ರುಗಳಾಗಿದ್ದಾರೆ ಎಂದು ಇಂಜಿನಿಯರ್ ಎಸ್. ಅಬ್ದುಲ್ ರಹ್ಮಾನ್ ಹೇಳಿದರು. ಅವರು ಉಳ್ಳಾಲ ದರ್ಗಾ ಉರೂಸ್ ಸಮಾರಂಭದ ಪ್ರಯುಕ್ತ ಶನಿವಾರ ನಡೆದ ಇಂಟರ್ ನ್ಯಾಷನಲ್ ಸ್ಟೂಡೆಂಟ್ ಸಮ್ಮಿಟ್ ಕಾರ್ಯಕ್ರಮದಲ್ಲಿ ವಿಚಾರ ಮಂಡಿಸಿ ಮಾತನಾಡಿದರು.
ಜಗತ್ತು ವಿವಿಧ ಸಮಸ್ಯೆಗಳಿಂದ ತುಂಬಿ ತುಳುಕುತ್ತಿದೆ. ಜನರಲ್ಲಿ ಶಾಂತಿ ಮತ್ತು ಅಶಾಂತಿಯ ವ್ಯತ್ಯಾಸ ಗೊತ್ತಿಲ್ಲದಂತಾಗಿದೆ. ಒಳಶಾಂತಿಯೇ ಇಲ್ಲವಾದಲ್ಲಿ ಹೊರಶಾಂತಿಯನ್ನು ಜನರು ಬಯಸಲು ಅಸಾಧ್ಯ. ಇಸ್ಲಾಂ ಅಂದರೆ ಧರ್ಮವಲ್ಲ, ಬದುಕುವ ದಾರಿ ಮತ್ತು ಜೀವನದ ಯಶಸ್ಸಿಗಾಗಿ ಇರುವ ವೈಜ್ಞಾನಿಕ ದಾರಿ ಎಂದು ಹೇಳಿದ ಪ್ರಾಫೆಟ್ ಮಹಮ್ಮದ್ ಅವರ ಸಂದೇಶಗಳಡಿ ಜಗತ್ತು ಮತ್ತೆ ನಿಂತಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದ ಅವರು ಪರಿಸರದ ಕಾಳಜಿಯಿಂದ ಮೃತದೇಹಗಳನ್ನು ಸುಡದೆ ಮಣ್ಣು ಮಾಡಲು ಹೇಳಿ ಗೋರಿ ಮೇಲೆ ಎರಡು ಮರಗಳನ್ನು ಬೆಳೆಸುವ ಸಂದೇಶ ಎಲ್ಲರಿಗೂ ಆದರ್ಶ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದರ್ಗಾ ಅಧ್ಯಕ್ಷ ಯು.ಎಸ್. ಹಂಝ ಅತಿಥಿಗಳನ್ನು ಸ್ವಾಗತಿಸಿದರು. ಎಸ್ಎಂ ಕಾಲೇಜ್ ಆಫ್ ಇಸ್ಲಾಮಿಕ್ ಸೈನ್ಸ್ನ ಪ್ರಾಂಶುಪಾಲರಾದ ಅಬ್ದುಲ್ ಕಲಾಂ ಅಝ್ಹರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಮಂಗಳೂರು ವಿವಿ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶಕರು ಪಿ.ಎಲ್.ಧರ್ಮ, ಒಂಭತ್ತು ಕೆರೆ ಟಿಪ್ಪು ಸುಲ್ತಾನ್ ಕಾಲೇಜಿನ ಪ್ರಾಂಶುಪಾಲರಾದ ಡಿ.ಬಿ. ಮೊಯಿದಿನ್, ಅಳೇಕಲ ಉಳ್ಳಾಲ ಕಾಲೇಜಿನ ಪ್ರಾಂಶುಪಾಲರಾದ ಡಾ. ಪಿ.ಎಚ್.ಹಮೀದ್, ಕೋಟೆಪುರ ಶಾಲೆಯ ಮುಖ್ಯೋಪಾಧ್ಯಾಯರಾದ ಎಂ.ಹೆಚ್. ಮಲಾರ್, ಹಳೇಕೋಟೆ ಉರ್ದು ಶಾಲೆಯ ಮುಖ್ಯೋಪಾದ್ಯಾಯರಾದ ಕೆ.ಎಂ.ಕೆ ಮಂಜನಾಡಿ, ಪರಿಸರವಾದಿ ಹಸನಬ್ಬ ಅಮ್ಮೆಂಬಳ, ಕೆ.ಎಂ ಅಬೂಬಕರ್ ಸಿದ್ದೀಕ್ ಮೋಂಟುಗೋಳಿ, ಅಬ್ದುಲ್ ಖಾದರ್ ಹಾಜಿ, ಸಿದ್ದೀಖ್ ಸಖಾಫಿ ಕೌಡೇಲು, ಎಸ್.ಎಂ.ಎ ಟ್ರಸ್ಟ್ ಉಪಾಧ್ಯಕ್ಷರುಗಳಾದ ಹನೀಫ್ ಹಾಜಿ ಮತ್ತು ಅಬ್ದುಲ್ ಅಝೀಝ್ ಸಖಾಫಿ, ಕಾರ್ಯದರ್ಶಿ ಝಿಯಾದ್ ತಂಙಳ್, ಎಸ್.ಎಂ.ಸಿ.ಟಿ. ಉಳ್ಳಾಳದ ಆಡಳಿತಾಧಿಕಾರಿ ಅಬ್ದುಲ್ ಲತೀಫ್, ಕೆ.ಪಿ.,ಎಚ್ಎಸ್ಎಂಇಎಸ್ ಶಾಲೆಯ ಮುಖ್ಯೋಪಾಧ್ಯಾಯರಾದ ಇಮ್ತಿಯಾಝ್, ಗಾಡ್ಫ್ರೀ ಅರ್ಬನ್ ಡಿಸೋಜ ಉಪಸ್ಥಿತರಿದ್ದರು.
ಆರ್.ಕೆ. ಮದನಿ ಅಮ್ಮೆಂಬಳ ಕಾರ್ಯಕ್ರಮ ನಿರೂಪಿಸಿದರು.