ಮಂಗಳೂರು, ಎ.3: ಮಂಗಳೂರು ಪೊಲೀಸ್ ಆಯುಕ್ತಾಲಯ, ದ.ಕ.ಜಿಲ್ಲಾ ಪೊಲೀಸ್ ಮತ್ತು ಕೆಎಸ್ಆರ್ಪಿ 7ನೆ ಪಡೆ ಮಂಗಳೂರು ಘಟಕಗಳ ಸಂಯುಕ್ತ ಆಶ್ರಯದಲ್ಲಿ ಗುರುವಾರ ಆಯೋಜಿಸಲಾದ ಪೊಲೀಸ್ ಧ್ವಜ ಹಾಗೂ ಕಲ್ಯಾಣ ದಿನಾಚರಣೆಯಲ್ಲಿ ಭಾಗವಹಿಸುವುದನ್ನು ಬಹುತೇಕ ನಿವೃತ್ತ ಪೊಲೀಸರು ಬಹಿಷ್ಕರಿ ಸುವ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾರ್ಯಕ್ರಮದಲ್ಲಿ 63 ನಿವೃತ್ತ ಪೊಲೀಸರಿಗೆ ಸನ್ಮಾನವನ್ನು ಆಯೋಜಿಸಲಾ ಗಿತ್ತು. ಆದರೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದವರು ಕೇವಲ ನಾಲ್ವರು ಮಾತ್ರ. ನಿವೃತ್ತರಿಗೆ ಆರೋಗ್ಯ ಭಾಗ್ಯ ಮತ್ತು ಕ್ಯಾಂಟೀನ್ ಸೌಲಭ್ಯದ ಬೇಡಿಕೆ ಕಡೆಗಣಿ ಸಿರುವುದನ್ನು ವಿರೋಧಿಸಿ ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘ ಕಾರ್ಯಕ್ರಮಕ್ಕೆ ಬಹಿಷ್ಕಾರ ಹಾಕಿತ್ತು.
ನಿವೃತ್ತ ಪೊಲೀಸರ ಬೇಡಿಕೆ ಈಡೇರಿಸಲು ಕರೆ: ನಿವೃತ್ತ ಪೊಲೀಸರಿಗೆ ಆರೋಗ್ಯ ಭಾಗ್ಯ ಹಾಗೂ ಕ್ಯಾಂಟೀನ್ ಸೌಲಭ್ಯ ಕಲ್ಪಿಸಬೇಕು. ಹಿರಿಯ ಪೊಲೀಸ್ ಅಧಿಕಾರಿ ಗಳು ಈ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಎಂದು ನಿವೃತ್ತ ಎಎಸ್ಸೈ ಕುಶಾಲಪ್ಪ ಗೌಡ ಕರೆ ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಬೇಡಿಕೆಗಳ ಮನವಿ 6 ತಿಂಗಳ ಹಿಂದೆ ಸರಕಾರಕ್ಕೆ ಸಲ್ಲಿಸಲಾಗಿದೆ. ಈ ಬಗ್ಗೆ ಯಾವುದೇ ಗುಣಾತ್ಮಕ ಪ್ರಕ್ರಿಯೆ ಕಂಡು ಬಂದಿಲ್ಲ. ಸರಕಾರ ನಿವೃತ್ತ ಪೊಲೀಸರ ಬೇಡಿಕೆ ಈಡೇರಿಸುವ ವಿಶ್ವಾಸವಿದೆ. ಕಾರ್ಯಕ್ರಮಕ್ಕೆ ನಿವೃತ್ತರು ಬಹಿಷ್ಕಾರ ಹಾಕಿರುವುದು ಸರಿಯಲ್ಲ. ಸೌಲಭ್ಯವನ್ನು ನ್ಯಾಯೋಚಿತವಾಗಿ ಕೇಳಿ ಪಡೆಯೋಣ ಎಂದರು.
ಪಶ್ಚಿಮ ವಲಯ ಐಜಿಪಿ ಅಮೃತ್ ಪಾಲ್ ಅಧ್ಯಕ್ಷತೆ ವಹಿಸಿದ್ದರು. ಡಿಸಿಪಿ ಸಂತೋಷ್ ಬಾಬು ವರದಿ ವಾಚಿಸಿದರು. ಈ ಸಂದರ್ಭ ಪೊಲೀಸ್ ಧ್ವಜ ಬಿಡುಗಡೆ ಗೊಳಿಸಲಾಯಿತು. ಬೋಲ ಪುಷ್ಪರಾಜ ಶೆಟ್ಟಿ ಸ್ಮರಣಾರ್ಥ ಅವರ ಸಹೋದರಿ ನಳಿನಿ ಎಸ್.ಭಂಡಾರಿ ಉತ್ತಮ ಅಂಕ ಗಳಿಸಿದ ಪೊಲೀಸರ ಮಕ್ಕಳಿಗೆ ಪ್ರೋತ್ಸಾಹ ಧನ ವಿತರಿಸಿದರು.
ನಗರ ಪೊಲೀಸ್ ಆಯುಕ್ತ ಎಸ್.ಮುರುಗನ್, ಜಿಲ್ಲಾ ಎಸ್ಪಿ ಡಾ.ಎಸ್.ಡಿ. ಶರಣಪ್ಪ ಉಪಸ್ಥಿತರಿದ್ದರು. ಲಿನೆಟ್ ಕ್ಯಾಸ್ಟಲಿನೊ ಕಾರ್ಯಕ್ರಮ ನಿರೂಪಿಸಿದರು. ಎಎಸ್ಪಿ ಸುಮನಾ ಪೆರ್ಣೇಕರ್ ಮುಂದಾಳುತ್ವದಲ್ಲಿ ಆಕರ್ಷಕ ಪಥ ಸಂಚಲನ ನಡೆಯಿತು. ಪಥ ಸಂಚಲನದಲ್ಲಿ ಭಾಗವಹಿಸಿದ ಎಲ್ಲ ಪೊಲೀಸರಿಗೆ ಐಜಿಪಿ ತಲಾ 500 ರೂ. ಬಹುಮಾನ ಘೋಷಿಸಿದರು.